ADVERTISEMENT

ಸೌಹಾರ್ದ ಸಮಾಜದ ಆಶಯ ಈಡೇರಲಿ: ಸನ್ನಿಧಿ

ವಿದ್ಯಾರ್ಥಿ ತುಳು ಸಮ್ಮೇಳನದಲ್ಲಿ ಐಕಳದ ಪೊಂಪೈ ಕಾಲೇಜು ವಿದ್ಯಾರ್ಥಿನಿ ಸನ್ನಿಧಿ ಆಶಯ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2025, 6:27 IST
Last Updated 27 ಮಾರ್ಚ್ 2025, 6:27 IST
ವಿದ್ಯಾರ್ಥಿ ತುಳು ಸಮ್ಮೇಳನದ ಉದ್ಘಾಟಕಿ ಸನ್ನಿಧಿ ಅವರೊಂದಿಗೆ ವಿಧಾನಸಭಾಧ್ಯಕ್ಷ ಯು.ಟಿ ಖಾದರ್ ಮಾತನಾಡಿದರು. ಸಮ್ಮೇಳನದ ಅಧ್ಯಕ್ಷ ವಿಜೇತ್ ಶೆಟ್ಟಿ ಪಾಲ್ಗೊಂಡಿದ್ದರು : ಪ್ರಜಾವಾಣಿ ಚಿತ್ರ
ವಿದ್ಯಾರ್ಥಿ ತುಳು ಸಮ್ಮೇಳನದ ಉದ್ಘಾಟಕಿ ಸನ್ನಿಧಿ ಅವರೊಂದಿಗೆ ವಿಧಾನಸಭಾಧ್ಯಕ್ಷ ಯು.ಟಿ ಖಾದರ್ ಮಾತನಾಡಿದರು. ಸಮ್ಮೇಳನದ ಅಧ್ಯಕ್ಷ ವಿಜೇತ್ ಶೆಟ್ಟಿ ಪಾಲ್ಗೊಂಡಿದ್ದರು : ಪ್ರಜಾವಾಣಿ ಚಿತ್ರ   

ಮಂಗಳೂರು: ತುಳುನಾಡು ಸೌಹಾರ್ದಕ್ಕೆ ಹೆಸರು ಗಳಿಸಿದೆ. ಆ ಆಶಯವನ್ನು ಉಳಿಸಬೇಕಾಗಿದೆ ಎಂದು ನಗರದಲ್ಲಿ ಬುಧವಾರ ನಡೆದ ವಿದ್ಯಾರ್ಥಿಗಳ ತುಳು ಸಮ್ಮೇಳನದ ಉದ್ಘಾಟಕಿ ಸನ್ನಿಧಿ ಹೇಳಿದರು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಮಂಗಳೂರಿನ ತುಳು ಪರಿಷತ್ ಆಯೋಜಿಸಿದ್ದ ಸಮ್ಮೇಳನದಲ್ಲಿ ಮಾತನಾಡಿದ ಐಕಳದ ಪೊಂಪೈ ಕಾಲೇಜು ವಿದ್ಯಾರ್ಥಿನಿ ಸನ್ನಿಧಿ ಅವರು ದೇವಾಲಯ, ಚರ್ಚ್‌, ಮಸೀದಿಗೆ ಹೋಗುವವರೆಲ್ಲರ ಹೃದಯಲ್ಲೂ ಸೌಹಾರ್ದ ಬೀಜ ಮೊಳಕೆಯೊಡೆಯಬೇಕು ಎಂದರು.

ದಕ್ಷಿಣ ಕನ್ನಡದ ಬಪ್ಪನಾಡು ದೇವಸ್ಥಾನವು ಬಪ್ಪಬ್ಯಾರಿ ಎಂಬ ಇಸ್ಲಾಂ ಧರ್ಮದ ವ್ಯಕ್ತಿಗೆ ದುರ್ಗಾಪರಮೇಶ್ವರಿ ಒಲಿದ ಕಥೆಯನ್ನು ಹೊಂದಿದೆ. ಉಡುಪಿ ಜಿಲ್ಲೆ ಕಾರ್ಕಳದ ಅತ್ತೂರು ಚರ್ಚ್‌ಗೆ ಹಿಂದೂಗಳು ಮತ್ತು ಮುಸ್ಲಿಮರು ಬೇಧ ಇಲ್ಲದ ಹೋಗುತ್ತಾರೆ. ಮಂಗಳೂರಿನಲ್ಲಿ ಹಿಂದೂ ಮುಸ್ಲಿಂ ಸೌಹಾರ್ದ ಗಟ್ಟಿಯಾಗಿದೆ. ಧರ್ಮಸ್ಥಳ ಹಿಂದೂ ಮತ್ತು ಜೈನರ ಸಾಮರಸ್ಯದ ನೆಲ. ಇದನ್ನು ಮನಗಂಡು ಎಲ್ಲರೂ ಒಂದು ಎಂದು ಹೇಳುವಂತಾಗಬೇಕು ಎಂದು ಅವರು ಹೇಳಿದರು.

ADVERTISEMENT

ತುಳುನಾಡಿನ ಮೇಲಿನ ಆಸ್ತೆ ಜನರಲ್ಲಿ ಕಡಿಮೆ ಆಗುತ್ತಿದೆ. ಇಂಥ ಸಂದರ್ಭದಲ್ಲಿ ಅಸ್ಮಿತೆ ಉಳಿಸುವ ಕಾರ್ಯವನ್ನು ವಿದ್ಯಾರ್ಥಿಗಳು ಮಾಡಬೇಕು. ತುಳು ಮಾತನಾಡಲು ಯಾರೂ ಹಿಂಜರಿಯಬಾರದು ಎಂದು ಅವರು ಹೇಳಿದರು. 

ಅಧ್ಯಕ್ಷತೆ ವಹಿಸಿದ್ದ ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಕಾನೂನು ಕಾಲೇಜು ವಿದ್ಯಾರ್ಥಿ ವಿಜೇತ್ ಶೆಟ್ಟಿ ನಂಬಿಕೆಯೇ ತುಳುನಾಡಿನ ಸಂಸ್ಕೃತಿ‌ಯ ಮೂಲ‌ವಾಗಿದ್ದು ಮೇಣದ ಸೇತುವೆಯಂತಿರುವ ಈ ನಂಬಿಕೆ ಈಗ ಕರಗತೊಡಗಿದೆ. ಕೇವಲ ಮಾತನಾಡುವುದರಿಂದ ತುಳು ಸಂಸ್ಕೃತಿಯನ್ನು ಉಳಿಸಲು ಸಾಧ್ಯವಿಲ್ಲ. ನಮ್ಮತನವನ್ನು ಅರಿಯುವ ಪ್ರಯತ್ನ ಮಾಡುವ ಮೂಲಕ ಈ ಕೆಲಸ ಆಗಬೇಕು. ಇದಕ್ಕಾಗಿ ಸಣ್ಣ ಮಕ್ಕಳಲ್ಲೇ ಅರಿವು ಮೂಡಿಸಬೇಕು ಎಂದರು.

ಭಾಷೆಯನ್ನು ಮುಂದಿನ ತಲೆಮಾರಿಗೆ ದಾಟಿಸುವ ಕಾರ್ಯ ಆಗಬೇಕು ಎಂದು ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಹೇಳಿದರು. ತುಳು ಪರಿಷತ್‌ ಅಧ್ಯಕ್ಷ ಕೆ.ಶುಭೋದಯ ಆಳ್ವ ಪ್ರಾಸ್ತಾವಿಕವಾಗಿ ಮಾತನಾಡಿದರು. ಗೌರವಾಧ್ಯಕ್ಷ ಪ್ರಭಾಕರ ನೀರುಮಾರ್ಗ, ಸಮ್ಮೇಳನ ಸಮಿತಿ ಸದಸ್ಯರಾದ ಧರಣೇಂದ್ರ ಕುಮಾರ್, ಚಂದ್ರಕಲಾ ರಾವ್‌,  ತುಳು ಅಕಾಡೆಮಿಯ ಸದಸ್ಯ ಸಂಚಾಲಕರಾದ ಬಾಬು ಕೊರಗ ಪಾಂಗಾಳ ಹಾಗೂ ಮೋಹನ್‌ದಾಸ್ ಕೊಟ್ಟಾರಿ ಪಾಲ್ಗೊಂಡಿದ್ದರು.

ಸಂಶೋಧಕಿ ಇಂದಿರಾ ಹೆಗ್ಡೆ ಅವರೊಂದಿಗೆ ಸಂವಾದ ನಡೆಯಿತು. ಕವಿ ಭೋಜ ಸುವರ್ಣ ಅವರಿಗೆ ಡಾ.ಪ್ರಭಾಕರ್ ನೀರ್‌ಮಾರ್ಗ ತುಳು ಪರಿಷತ್ ಪ್ರಶಸ್ತಿ’ ಪ್ರದಾನ ಮಾಡಲಾಯಿತು.

ವಿದ್ಯಾರ್ಥಿ ತುಳು ಸಮ್ಮೇಳನದಲ್ಲಿ ಭಾಗವಹಿಸಿದ್ದ ಪ್ರತಿನಿಧಿಗಳು : ಪ್ರಜಾವಾಣಿ ಚಿತ್ರ

ಗ್ರಾಮದಲ್ಲಿ ತುಳು ಕಾರ್ಯಕ್ರಮ

ವಿಧಾನಸಭಾಧ್ಯಕ್ಷ ಯು.ಟಿ ಖಾದರ್ ಮಾತನಾಡಿ ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ವರ್ಷಕ್ಕೆ ಒಂದು ತುಳು ಕಾರ್ಯಕ್ರಮ ಆಯೋಜಿಸಲು ಯೋಜನೆ ರೂಪಿಸಬೇಕಾಗಿದೆ ಎಂದರು. ಗ್ರಾಮ ಪಂಚಾಯಿತಿ ಅಧಿಕೃತವಾಗಿ ತುಳು ಕಾರ್ಯಕ್ರಮ ಆಯೋಜಿಸಲು ಪ್ರತ್ಯೇಕ ಮೊತ್ತವನ್ನು ತೆಗೆದಿರಿಸಬೇಕು. ಅದಕ್ಕಾಗಿ ಅನುದಾನ ಒದಗಿಸುವಂತೆ ಸರ್ಕಾರದ ಪ್ರತಿನಿಧಿಗಳ ಜೊತೆಯಲ್ಲಿ ಮಾತನಾಡುವೆ ಎಂದು ಖಾದರ್ ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.