ಮಂಗಳೂರು: ‘ರಾಜ್ಯದ ಅಧಿಕೃತ ಭಾಷೆಯಾಗಿರುವ ಕನ್ನಡದ ಕಲಿಕೆ ಮತ್ತು ಬಳಕೆಯನ್ನು ಚಾಲ್ತಿಯಲ್ಲಿಡಬೇಕು. ಇದು ಎಲ್ಲರ ಹೊಣೆಯಾಗಿದೆ. ಇಂಗ್ಲಿಷ್ ಕಲಿಕೆ ಅನಿವಾರ್ಯ ಆದರೆ, ಮಾತೃಭಾಷೆ ಕನ್ನಡವನ್ನು ಮರೆಯಬಾರದು’ ಎಂದು ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ. ಹರ್ಷೇಂದ್ರ ಕುಮಾರ್ ಹೇಳಿದರು.
ಇಲ್ಲಿನ ಎಸ್ಡಿಎಂ ಕಾನೂನು ಕಾಲೇಜಿನ ಸಭಾಂಗಣದಲ್ಲಿ ಶನಿವಾರ ನಡೆದ ಕನ್ನಡ ಸಾಹಿತ್ಯ ಪರಿಷತ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ನೂತನ ಅಧ್ಯಕ್ಷ ಡಾ.ಎಂ.ಪಿ. ಶ್ರೀನಾಥ್ ಅವರ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಕನ್ನಡದ ಚಟುವಟಿಕೆಗಳಿಗೆ ಸಿಗುವ ಅನುದಾನ ಕಡಿಮೆ ಇದ್ದರೂ, ಲಭ್ಯ ಅನುದಾನದಲ್ಲಿ ಕನ್ನಡದ ಕೆಲಸವನ್ನು ಮುಂದುವರಿಸುವ ಸವಾಲು ನಮ್ಮ ಮುಂದೆ ಇದೆ’ ಎಂದರು.
‘ಈ ಹಿಂದೆ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದ ಕೆಂಪ ಹನುಮಯ್ಯ, ಕೀಕಾನ ರಾಮಚಂದ್ರ, ಬಿ.ಎಂ. ಇದಿನಬ್ಬ, ಹರಿಕೃಷ್ಣ ಪುನರೂರು ಮತ್ತು ಪ್ರದೀಪ್ ಕುಮಾರ್ ಕಲ್ಕೂರ ಅವರು ಹಾಕಿಕೊಟ್ಟ ಹಾದಿಯಲ್ಲಿ ಮುನ್ನಡೆದು, ಹಿರಿಯ ಸಾಹಿತಿಗಳ ಮಾರ್ಗದರ್ಶನದಲ್ಲಿ ಕನ್ನಡದ ಕಾಯಕವನ್ನು ನಡೆಸುವೆ’ ಎಂದು ಸಾಹಿತ್ಯ ಪರಿಷತ್ ನೂತನ ಅಧ್ಯಕ್ಷ ಡಾ.ಎಂ.ಪಿ. ಶ್ರೀನಾಥ ಭರವಸೆ ನೀಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್ ಜಿ., ಪರಿಷತ್ ಧ್ವಜವನ್ನು ಡಾ.ಎಂ.ಪಿ.ಶ್ರೀನಾಥ್ ಅವರಿಗೆ ಹಸ್ತಾಂತರಿಸಿದರು. ಪದಗ್ರಹಣ ಸಮಿತಿಯ ಸದಸ್ಯ ಮಂಜುನಾಥ ಎಸ್. ರೇವಣ್ಕರ್ ಸ್ವಾಗತಿಸಿದರು. ಗಣೇಶ್ ಹೆಬ್ಬಾರ್ ವಂದಿಸಿದರು. ಮಂಜುಳಾ ಶೆಟ್ಟಿ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.