
ಬಂಧನ
ಕಾಸರಗೋಡು: ಬಂಧನಕ್ಕೆ ಯತ್ನಿಸಿದ ವೇಳೆ ಮಹಿಳಾ ಪೊಲೀಸ್ ಸಿಬ್ಬಂದಿಗೆ ಹಲ್ಲೆ ನಡೆಸಿ ಪರಾರಿಯಾಗಿದ್ದ ಹೊಸಬೆಟ್ಟು ನಿವಾಸಿ ಮೊಯ್ದೀನ್ ಸಮಾನ್ (33) ಎಂಬಾತನನ್ನು ಮಂಜೇಶ್ವರ ಪೊಲೀಸರು ಗುರುವಾರ ಮಂಗಳೂರಿನ ಕಲ್ಲಾಪು ತರಕಾರಿ ಮಾರುಕಟ್ಟೆಯಲ್ಲಿ ಬಂಧಿಸಿದ್ದಾರೆ.
ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಲಾಗಿದೆ. ಜ.14ರಂದು ಹೊಸಂಗಡಿಯಲ್ಲಿ ಕೈರಂಗಳ ನಿವಾಸಿ ಮುಹಮ್ಮದ್ ಹನೀಫ್ ಮತ್ತು ಮುಡಿಪು ನಾಟೆಕಲ್ಲು ನಿವಾಸಿ ಇಝ್ರತ್ (30) ಎಂಬುವರಿಗೆ ಬೆದರಿಕೆ ಹಾಕಿದ ಪ್ರಕರಣದಲ್ಲಿ ಈತ ಆರೋಪಿಯಾಗಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿ ಮಂಜೇಶ್ವರ ಪಿರಾರಮೂಲೆ ನಿವಾಸಿ ಕೆ.ಎ.ಹ್ಯಾರಿಸ್ (40) ಮತ್ತು ಬಡಾಜೆ ಕಜೂರುಮಾಲಿ ನಿವಾಸಿ ಟಿ.ಕೆ.ಮುಹಮ್ಮದ್ ಫೈಝಲ್ (43) ಎಂಬುವರನ್ನು ಬಂಧಿಸಲಾಗಿದೆ. ಇನ್ನೊಬ್ಬನಿಗಾಗಿ ಹುಡುಕಾಟ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತಲೆಮರೆಸಿಕೊಂಡಿದ್ದ ಮೊಯ್ದೀನ್ ಸಮಾನ್ ಕುರಿತು ಮಾಹಿತಿ ಲಭಿಸಿ ಕೆಲವು ದಿನಗಳ ಹಿಂದೆ ಮಂಗಳೂರಿನಲ್ಲಿ ಬಂಧಿಸಲು ಯತ್ನಿಸಿದ ವೇಳೆ ತನಿಖಾ ತಂಡದಲ್ಲಿದ್ದ ಮಂಜೇಶ್ವರ ಠಾಣೆ ಸಿಬ್ಬಂದಿ ಅಫೀಝಾ ಅವರ ಕೈಗೆ ಹಲ್ಲೆ ಮಾಡಿ ಪರಾರಿಯಾಗಿದ್ದ ಎಂದು ಮೊಕದ್ದಮೆಯಲ್ಲಿ ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.