ಮಂಗಳೂರು: ಕಾಶಿಮಠ ಸಂಸ್ಥಾನವು ಅಯೋಧ್ಯೆಯ ಶ್ರೀರಾಮ ಮಂದಿರಕ್ಕೆ ಬೆಳ್ಳಿ ಪಲ್ಲಕಿ ಸಮರ್ಪಿಸಲಿದೆ. ನೂತನವಾಗಿ ನಿರ್ಮಿಸಲಾದ ಈ ಪಲ್ಲಕ್ಕಿಯನ್ನು ಇಲ್ಲಿನ ರಥಬೀದಿಯಲ್ಲಿರುವ ಶ್ರೀ ವೆಂಕಟರಮಣ ದೇವಸ್ಥಾನಕ್ಕೆ ಮೆರವಣಿಗೆಯಲ್ಲಿ ಶನಿವಾರ ತರಲಾಯಿತು.
ದೇವಸ್ಥಾನದ ಬಳಿಯಿಂದ ಮುಸ್ಸಂಜೆ ವೇಳೆ ಹೊರಟ ಪಲ್ಲಕ್ಕಿಯ ಮೆರವಣಿಗೆಯು ಮಹಾಮಾಯಿ ದೇವಸ್ಥಾನ, ಡೊಂಗರಕೇರಿ, ಚಿತ್ರಾ ಜಂಕ್ಷನ್, ಸ್ವದೇಶಿ ಸ್ಟೋರ್ಸ್ ಮೂಲಕ ಮತ್ತೆ ರಥಬೀದಿಯನ್ನು ಪ್ರವೇಶಿಸಿತು. ಕಾಶೀ ಮಠಾಧೀಶರಾದ ಸಂಯಮಿಂದ್ರ ತೀರ್ಥ ಸ್ವಾಮೀಜಿಯ ಉಪಸ್ಥಿತಿಯಲ್ಲಿ, ಸಕಲ ಬಿರುದಾವಳಿಗಳೊಂದಿಗೆ ನಡೆದ ಈ ಭವ್ಯ ಶೋಭಾ ಯಾತ್ರೆಯಲ್ಲಿ ಗೌಡ ಸಾರಸ್ವತ ಸಮಾಜದವರು ಶ್ರದ್ಧೆ ಭಕ್ತಿಯಿಂದ ಹೆಜ್ಜೆಹಾಕಿದರು.
ವೆಂಕಟರಮಣ ದೇವಸ್ಥಾನದ ದೇವರ ಉತ್ಸವದಲ್ಲಿ ಬಳಸುವ ಸಲುವಾಗಿ ನಿರ್ಮಿಸಿರುವ ನೂತನ ಸ್ವರ್ಣ ಲಾಲ್ಕಿಯನ್ನು ಸಂಯಮಿಂದ್ರ ತೀರ್ಥ ಸ್ವಾಮೀಜಿ ವೀಕ್ಷಿಸಿದರು. ಲಾಲ್ಕಿಯ ಸೂಕ್ಷ್ಮ ಕುಸರಿ ಕಲೆಯ ಬಗ್ಗೆ ಸ್ವಾಮೀಜಿ ಮೆಚ್ಚುಗೆ ವ್ಯಕ್ತಪಡಿಸಿದರು. ದೇವಸ್ಥಾನದ ಆಡಳಿತ ಮೊಕ್ತೇಸರರಾದ ಅಡಿಗೆ ಬಾಲಕೃಷ್ಣ ಶೆಣೈ, ಕಿರಣ್ ಪೈ, ಸತೀಶ್ ಪ್ರಭು, ಗಣೇಶ್ ಕಾಮತ್, ಜಗನ್ನಾಥ್ ಕಾಮತ್, ಉದ್ಯಮಿ ಪಿ . ದಯಾನಂದ ಪೈ ಮತ್ತಿತರರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.