ADVERTISEMENT

ಕೊರಗ ಸಮುದಾಯ ಮುಖ್ಯ ವಾಹಿನಿಗೆ ಸಾಗುವಂತಾಗಲಿ: ಎಂ.ಸುಂದರ ಕೊರಗ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2023, 12:35 IST
Last Updated 20 ಆಗಸ್ಟ್ 2023, 12:35 IST
ಕೊರಗರ ಭೂಮಿ ಹಬ್ಬ ಕಾರ್ಯಕ್ರಮ ನಡೆಯಿತು
ಕೊರಗರ ಭೂಮಿ ಹಬ್ಬ ಕಾರ್ಯಕ್ರಮ ನಡೆಯಿತು   

ಸುರತ್ಕಲ್: ಕೊರಗ ಸಮುದಾಯದ ಹಲವು ಬೇಡಿಕೆಗಳು ಇನ್ನೂ ಈಡೇರಿಲ್ಲ. ಈ ನಿಟ್ಟಿನಲ್ಲಿ ಸರ್ಕಾರ ಸ್ಪಂದಿಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಕೊರಗ ಸಂಘದ ಅಧ್ಯಕ್ಷ ಎಂ.ಸುಂದರ ಕೊರಗ ಆಗ್ರಹಿಸಿದರು.

ಸುರತ್ಕಲ್ ಕುತ್ತೆತ್ತೂರು ಆದಿವಾಸಿ ಭವನದಲ್ಲಿ ಜಿಲ್ಲಾ ಕೊರಗರ ಸಂಘ ಹಮ್ಮಿಕೊಂಡಿದ್ದ ಕೊರಗರ ಭೂಮಿ ಹಬ್ಬದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಮುದಾಯದ ಬೇಡಿಕೆಗಳಿಗೆ ಆಗ್ರಹಿಸಿ ಕೊರಗರು ಪ್ರಥಮ ಬಾರಿಗೆ ಬೀದಿಗಿಳಿದು 1993ರ ಆಗಸ್ಟ್ 18ರಂದು ಮಂಗಳೂರಿನ ಬಾವುಟಗುಡ್ಡೆಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ನಡೆಸಿದ ಕೊರಗರ ಐತಿಹಾಸಿಕ ಚಳವಳಿಯ ನೆನಪಿನಲ್ಲಿ 'ಕೊರಗರ ಭೂಮಿ ಹಬ್ಬ’ ವನ್ನು ಆಚರಿಸಲಾಗುತ್ತಿದೆ ಎಂದು ಹೇಳಿದರು.

ADVERTISEMENT

ದಕ್ಷಿಣ ಕನ್ನಡ ಜಿಲ್ಲಾ ಜರ್ನಲಿಸ್ಟ್ ಯೂನಿಯನ್ ಅಧ್ಯಕ್ಷ, ಪತ್ರಕರ್ತ ತಾರಾನಾಥ್ ಗಟ್ಟಿ ಕಾಪಿಕಾಡ್ ಮಾತನಾಡಿ, ತುಳುನಾಡಿನ ಆದಿ ಬುಡಮೂಲ ಕೊರಗ ಸಮುದಾಯವನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಇತರ ಸಮುದಾಯಗಳಿಂದ ಪೂರಕವಾದ ಸ್ಪಂದನೆ ಸಿಗಬೇಜಿದೆ ಎಂದರು.

ಕೊರಗ ಸಂಘಟನೆಯ ಮಾಜಿ ಅಧ್ಯಕ್ಷ ಬಾಲರಾಜ್ ಕೋಡಿಕಲ್, ಉಡುಪಿ ಜಿಲ್ಲಾ ಕೊರಗ ಸಂಘದ ಅಧ್ಯಕ್ಷೆ ಗೌರಿ ಕೆಂಜೂರು, ಲೇಖಕ ಬಾಬು ಪಾಂಗಳ ಮಾತನಾಡಿದರು.

ತಾಲ್ಲೂಕು ಸಮಾಜ ಕಲ್ಯಾಣ ಅಧಿಕಾರಿ ಸುರೇಶ್ ಅಡಿಗ, ಸಮಗ್ರ ಗಿರಿಜನ ಯೋಜನಾ ಸಮನ್ವಯಾಧಿಕಾರಿ ಹೇಮಚಂದ್ರ, ಬಾಳ ಪಂಚಾಯಿತಿ ಅಧ್ಯಕ್ಷ ಶಂಕರ್ ಜೋಗಿ, ಉಪಾಧ್ಯಕ್ಷೆ ಲಕ್ಷ್ಮೀ ಉಪಸ್ಥಿತರಿದ್ದರು.

ಸಮುದಾಯದ ಗುರಿಕಾರ ಜಬ್ಬ ಗುರಿಕಾರ ಬಳ್ಕುಂಜ, ನಾರಾಯಣ ಸಿರಿಗೆನ್ನಾರ್, ರಾಜು ಗುರಿಕಾರ ಕತ್ತಲ್ ಸಾರ್, ಸಮುದಾಯದ ಹಿರಿಯ ಮಹಿಳೆಯರಾದ ಲಲಿತಾ ಕೃಷ್ಣಾಪುರ, ಸುಮತಿ ಬಂಟ್ವಾಳ ಅವರನ್ನು ಸನ್ಮಾನಿಸಲಾಯಿತು.

ರಮೇಶ್ ಗುಂಡಾವು ಕಾರ್ಯಕ್ರಮ ನಿರ್ವಹಿಸಿದರು. ಮನೋಜ್ ಕೋಡಿಕಲ್ ಸ್ವಾಗತಿಸಿ, ವಂದಿಸಿದರು.

ಉಡುಪಿ ಜಿಲ್ಲಾ ಕೊರಗ ಸಂಘಟನೆಯ ಮುಖಂಡ ರಂಗ ಬೆಳ್ಮಣ್ ಧ್ವಜಾರೋಹಣ ನೆರವೇರಿಸಿದರು. ಸಮುದಾಯದ ಹಿರಿಯ ಮಹಿಳೆ ಲಲಿತಾ ಜ್ಯೋತಿ ಬೆಳಗಿಸಿದರು. ಸುಮತಿ ಕರಿಮಣ್ಣು ಅವರು ಹಬ್ಬದ ಸಿಹಿ ಜೇನು ಹಂಚಿದರು.‌ ರಮೇಶ್ ಮಂಚಕಲ್ ಅವರ ನೇತೃತ್ವದಲ್ಲಿ ಕೊರಲ್ ತಂಡದಿಂದ ಗಜಮೇಳ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.