ADVERTISEMENT

ಕರ್ತವ್ಯಕ್ಕೆ ಹಾಜರಾಗಲು ಕೊನೆಯ ಗಡುವು

ತರಬೇತಿ ಸಿಬ್ಬಂದಿಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2021, 17:07 IST
Last Updated 20 ಏಪ್ರಿಲ್ 2021, 17:07 IST

ಮಂಗಳೂರು: ಮುಷ್ಕರ ಬೆಂಬಲಿಸಿ ಕೆಲಸಕ್ಕೆ ಗೈರಾಗಿರುವ ಕೆಎಸ್‌ಆರ್‌ಟಿಸಿ ಮಂಗಳೂರು ಹಾಗೂ ಪುತ್ತೂರು ವಿಭಾಗಗಳ ತರಬೇತಿ ಸಿಬ್ಬಂದಿಗೆ ಕೆಲಸಕ್ಕೆ ಹಾಜರಾಗಲು ಅಧಿಕಾರಿಗಳು ಕೊನೆಯ ಗುಡುವು ನೀಡಿದ್ದಾರೆ. ಬುಧವಾರ (ಏ.21) ಬೆಳಿಗ್ಗೆ 10 ಗಂಟೆಯ ಒಳಗಾಗಿ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಿದ್ದಾರೆ.

ಎರಡೂ ವಿಭಾಗಗಳಲ್ಲಿ ತಲಾ 250 ತರಬೇತಿ ನೌಕರರು ಇದ್ದಾರೆ. ಅವರಲ್ಲಿ ಪುತ್ತೂರು ವಿಭಾಗದಲ್ಲಿ 82 ಹಾಗೂ ಮಂಗಳೂರಿನಲ್ಲಿ 190 ಮಂದಿ ಕರ್ತವ್ಯಕ್ಕೆ ಹಾಜರಾದರು. ಸೋಮವಾರ ಪುತ್ತೂರು ವಿಭಾಗದಲ್ಲಿ 50 ಹಾಗೂ ಮಂಗಳೂರಿನಲ್ಲಿ 32 ನೌಕರರನ್ನು ವಜಾಗೊಳಿಸಲಾಗಿತ್ತು. ಪುತ್ತೂರು ವಿಭಾಗದಲ್ಲಿ ಮಂಗಳವಾರ ಆರು ಮಂದಿ ನೌಕರರನ್ನು ವಜಾಗೊಳಿಸಲಾಗಿದೆ. ಮುಷ್ಕರ ವೇಳೆ ಕರ್ತವ್ಯ ನಿತರ ಬಸ್‌ ಚಾಲಕರಿಗೆ ಅಡ್ಡಿಪಡಿಸಿದ ಆರೋಪದ ಮೇಲೆ ಅವರನ್ನು ವಜಾಗೊಳಿಸಲಾಗಿದೆ.

ಕುಶಾಲನಗರದಲ್ಲಿ ಪುತ್ತೂರು ಡಿಪೊ ಬಸ್‌ ಚಾಲಕನಿಗೆ ಹಾರ ಹಾಕಿ ಅವಮಾನ ಎಸಗಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಘಟನೆ ಸಂಬಂಧ ಐವರು ನೌಕರರು ಹಾಗೂ ಪಾವಗಡದಲ್ಲಿ ಬಸ್ ಚಾಲಕನಿಗೆ ಅಡ್ಡಿಪಡಿಸಿದ ಧರ್ಮಸ್ಥಳ ಡಿಪೊದ ಚಾಲಕನನ್ನು ಅಮಾನತುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಬಸ್ ಸಂಚಾರ ಶೇ 82ರಷ್ಟು ಹೆಚ್ಚಳ

ಮಂಗಳೂರಿನಲ್ಲಿ ಶೇ 82.8ರಷ್ಟು ಮತ್ತು ಪುತ್ತೂರಿನಲ್ಲಿ ಶೇ 55.3ರಷ್ಟು ಬಸ್ ಸಂಚಾರದಲ್ಲಿ ಹೆಚ್ಚಳವಾಗಿದೆ. ಮಂಗಳೂರಲ್ಲಿ 221 ನಿಗದಿಯಾದ ಮಾರ್ಗಗಳ ಪೈಕಿ 183 ನಿಗದಿಯಾದ ಮಾರ್ಗಗಳಲ್ಲಿ ಬಸ್ ಸಂಚರಿಸಿದೆ. ಪುತ್ತೂರಿನಲ್ಲಿ 266 ನಿಗದಿತ ಮಾರ್ಗಗಳಳ್ಲಿ 147 ಮಾರ್ಗಗಳಲ್ಲಿ ಬಸ್ ಸಂಚಾರ ನಡೆಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.