ADVERTISEMENT

ಕುಕ್ಕೆ: ಇಂದು ಕಿರುಷಷ್ಠಿ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2025, 7:10 IST
Last Updated 26 ಡಿಸೆಂಬರ್ 2025, 7:10 IST
ಕಾರ್ತಿಕ್ ಸುಬ್ರಹ್ಮಣ್ಯ ಮತ್ತು ತಂಡದಿಂದ ಗುರುವಾರ ಸಂಜೆ ವಾದ್ಯ ಸಂಗೀತ ಮೇಳ ನಡೆಯಿತು
ಕಾರ್ತಿಕ್ ಸುಬ್ರಹ್ಮಣ್ಯ ಮತ್ತು ತಂಡದಿಂದ ಗುರುವಾರ ಸಂಜೆ ವಾದ್ಯ ಸಂಗೀತ ಮೇಳ ನಡೆಯಿತು   

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಕಿರುಷಷ್ಠಿ ಅಂಗವಾಗಿ ಡಿ.26ರಂದು ಸಂಜೆ 6 ಗಂಟೆಗೆ ದೇವರ ಕಿರುಷಷ್ಠಿ ರಥೋತ್ಸವ ನೆರವೇರಲಿದೆ.

ಚಂಪಾಷಷ್ಠಿ ಜಾತ್ರಾ ಸಮಯದಲ್ಲಿ ದೇವರಿಗೆ ವಿವಿಧ ವೈದಿಕ ಧಾರ್ಮಿಕ ಕಾರ್ಯಕ್ರಮಗಳು ಮತ್ತು ಉತ್ಸವಗಳು ನೆರವೇರುತ್ತದೆ. ಆದರೆ, ಕಿರುಷಷ್ಠಿ ಮಹೋತ್ಸವದಲ್ಲಿ ಕುಕ್ಕೆ ಸುಬ್ರಹ್ಮಣ್ಯನಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಸೇವೆ ಸಲ್ಲಿಸುವುದು ಕ್ಷೇತ್ರದ ವಿಶೇಷ. ಶುಕ್ರವಾರ ಸಂಜೆ 6.30ಕ್ಕೆ ಕುಕ್ಕೆ ಸುಬ್ರಹ್ಮಣ್ಯ ದೇವರ ಕಿರುಷಷ್ಠಿ ರಥೋತ್ಸವ ನಡೆಯಲಿದೆ. ಬಳಿಕ ಸವಾರಿ ಕಟ್ಟೆಯಲ್ಲಿ ದೇವರ ಪೂಜೆ ಮತ್ತು ಮತ್ತು ಕುಕ್ಕೆ ಬೆಡಿ ಪ್ರದರ್ಶನಗೊಳ್ಳಲಿದೆ. ರಥೋತ್ಸವದ ಬಳಿಕ ದೇವರಿಗೆ ವಿವಿಧ ಕಲಾವಿದರಿಂದ ಸಂಗೀತ ಮತ್ತು ನಾಗಸ್ವರ ಸುತ್ತುಗಳ ಉತ್ಸವ ರಾತ್ರಿ 12 ಗಂಟೆ ವರೆಗೆ ನಡೆಯಲಿದೆ. ಬಳಿಕ ಮಹಾಪೂಜೆ, ನಿತ್ಯೋತ್ಸವ, ಬಂಡಿ ರಥೋತ್ಸವ ಮತ್ತು ಪಾಲಕಿ ಉತ್ಸವ ನೆರವೇರಲಿದೆ.

ಶುಕ್ರವಾರ ಬೆಳಗ್ಗೆ 10ರಿಂದ ಬೆಳ್ಳಾರೆಯ ಪ್ರಜ್ಞಾನಂ ತಂಡದ ಪಿ.ಮಹಾಲಿಂಗ ಭಟ್ ಮತ್ತು ಶಿಷ್ಯರಿಂದ ನಾರಾಯಣೀಂ ಪಾರಾಯಣ ನಡೆಯಲಿದೆ. ಸಂಜೆ ಬಂಟ್ವಾಳದ ವಿದುಷಿ ಪ್ರಣತಿ ಚೈತನ್ಯ ಪದ್ಯಾಣ ಅವರಿಂದ ಭರತನಾಟ್ಯ ನೆರವೇರಲಿದೆ. ಬಳಿಕ ಬೆಂಗಳೂರಿನ ಪ್ರಭಾತ್ ಕಲಾವಿದರಿಂದ ನೃತ್ಯ ನಾಟಕ ಕರುನಾಡ ವೈಭವ ಪ್ರದರ್ಶನಗೊಳ್ಳಲಿದೆ.

ADVERTISEMENT

ಗುರುವಾರ ಕಾರ್ತಿಕ್ ಸುಬ್ರಹ್ಮಣ್ಯ ತಂಡದಿಂದ ವಾದ್ಯ ಸಂಗೀತ ಮೇಳ ನಡೆಯಿತು. ಸ್ಯಾಕ್ಸೋಫೋನ್‌ನಲ್ಲಿ ಮನೋಜ್ ದೇವಾಡಿಗ ಮತ್ತು ಮನ್ವಿತ್ ಸುಬ್ರಹ್ಮಣ್ಯ, ಕೊಳಲಿನಲ್ಲಿ ವೇಣುಗೋಪಾಲ್ ಬಿ.ಸಿ.ರೋಡ್, ತವಿಲ್‌ನಲ್ಲಿ ಶ್ರುತನ್ ಸುಬ್ರಹ್ಮಣ್ಯ, ತಬಲದಲ್ಲಿ ಶರತ್ ಪೆರ್ಲ, ಕೀಬೋರ್ಡ್‌ನಲ್ಲಿ ಸತೀಶ್ ಮುಡಿಪು, ರಿದಂ ಪ್ಯಾಡ್‌ನಲ್ಲಿ ಕಾರ್ತಿಕ್ ಸುಬ್ರಹ್ಮಣ್ಯ ಸಹಕರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.