ADVERTISEMENT

ಕುಕ್ಕೆ: ಭಕ್ತಿ ಸಡಗರದ ಲಕ್ಷದೀಪೋತ್ಸವ

ಪಂಚಶಿಖರಗಳ ರಥದಲ್ಲಿ ಉತ್ಸವ :ಕಾಶಿಕಟ್ಟೆಯಲ್ಲಿ ಮಯೂರವಾಹನನಿಗೆ ಗುರ್ಜಿಪೂಜೆ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2022, 4:26 IST
Last Updated 24 ನವೆಂಬರ್ 2022, 4:26 IST
ಕುಕ್ಕೆ ಶ್ರೀ ಸುಬ್ರಹ್ಮಣ್ಯದಲ್ಲಿ ಬುಧವಾರ ರಾತ್ರಿ ಚಂಪಾಷಷ್ಠಿ ಮಹೋತ್ಸದ ಲಕ್ಷದೀಪೋತ್ಸವದ ಅಂಗವಾಗಿ 175ಕ್ಕೂ ಅಧಿಕ ತಂಡಗಳು ಏಕಕಾಲದಲ್ಲಿ ಕುಣಿತ ಭಜನೆ ನಡೆಸಿಕೊಟ್ಟವು
ಕುಕ್ಕೆ ಶ್ರೀ ಸುಬ್ರಹ್ಮಣ್ಯದಲ್ಲಿ ಬುಧವಾರ ರಾತ್ರಿ ಚಂಪಾಷಷ್ಠಿ ಮಹೋತ್ಸದ ಲಕ್ಷದೀಪೋತ್ಸವದ ಅಂಗವಾಗಿ 175ಕ್ಕೂ ಅಧಿಕ ತಂಡಗಳು ಏಕಕಾಲದಲ್ಲಿ ಕುಣಿತ ಭಜನೆ ನಡೆಸಿಕೊಟ್ಟವು   

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇವರ ಲಕ್ಷದೀಪೋತ್ಸವವು ಭಕ್ತಿ-ಸಡಗರದಿಂದ ಬುಧವಾರ ರಾತ್ರಿ ನೆರವೇರಿತು. ಪಂಚ ಶಿಖರಗಳನ್ನೊಳಗೊಂಡ ಚಂದ್ರಮಂಡಲ ರಥದಲ್ಲಿ ಸುಬ್ರಹ್ಮಣ್ಯ ದೇವರ ಉತ್ಸವ ಮೆರವಣಿಗೆ ನಡೆಯಿತು.

ರಥಬೀದಿಯಿಂದ ಕಾಶಿಕಟ್ಟೆ ತನಕ ಲಕ್ಷ ಹಣತೆಗಳು ಬೆಳಗುತ್ತಿದ್ದಂತೆಯೇ ಇಲ್ಲಿ ಬೆಳಕಿನ ಲೋಕವೇ ಧರೆಗವತರಿಸಿದಂತೆ ಭಾಸವಾಯಿತು. ಲಕ್ಷದೀಪೋತ್ಸವದ ರಥೋತ್ಸವದೊಂದಿಗೆ ಶ್ರೀದೇವರ ರಥಬೀದಿ ಉತ್ಸವ ಆರಂಭವಾಯಿತು.

ಶ್ರೀ ದೇವಳದ ಗೋಪುರದಿಂದ ಕಾಶಿಕಟ್ಟೆ ತನಕ, ಹನುಮಂತಗುಡಿ, ಸವಾರಿ ಮಂಟಪ, ಆದಿಸುಬ್ರಹ್ಮಣ್ಯ, ಬೈಪಾಸ್, ಕುಮಾರಧಾರ ಸೇರಿದಂತೆ ಕ್ಷೇತ್ರದ ವಿವಿಧೆಡೆ ಹಣತೆಗಳು ಬೆಳಗಿದವು.

ಅಂಕುರಾರ್ಪಣೆ:
ಸಂಜೆ ಆದಿ ಸುಬ್ರಹ್ಮಣ್ಯದಲ್ಲಿ ದೀಪಾಂಕೃತ ರಂಗಪೂಜೆ, ಬಳಿಕ ಪ್ರಧಾನ ದೇವಾಲಯದಲ್ಲಿ 16 ಮಡಿಕೆಗಳಲ್ಲಿ ಮಣ್ಣು ಮತ್ತು ಮರಳನ್ನು ಮಿಶ್ರಮಾಡಿ ನವಧಾನ್ಯಗಳನ್ನು ಬಿತ್ತುವ ಅಂಕುರಾರ್ಪಣೆ ವಿಧಿಗಳು ನೆರವೇರಿದವು. ಮಹಾಪೂಜೆ ಬಳಿಕ ನಡೆದ ಹೊರಾಂಗಣ ಉತ್ಸವದಲ್ಲಿ ಕಾಚುಕುಜುಂಬ ದೈವವು ಶ್ರೀದೇವರನ್ನು ಭೇಟಿಯಾಗಿ ನುಡಿಗಟ್ಟು ನಡೆಯಿತು. ಬಳಿಕ ಶ್ರೀ ದೇವರ ಶೇಷವಾಹನಯುಕ್ತ ಬಂಡಿ ಉತ್ಸವ ಮತ್ತು ಪಾಲಕಿ ಉತ್ಸವ ನೆರವೇರಿತು.

ರಥಬೀದಿಯಲ್ಲಿ ಪಂಚ ಶಿಖರಗಳನ್ನಳಗೊಂಡ ಚಂದ್ರಮಂಡಲ ರಥದಲ್ಲಿ ಆರೂಢರಾದಶ್ರೀ ದೇವರರಿಗೆ ಪೂಜೆ ಸಲ್ಲಿಸಲಾಯಿತು. ನಂತರ ಕಾಶಿಕಟ್ಟೆ ತನಕ ಉತ್ಸವ ನೆರವೇರಿತು. ಶ್ರೀದೇವರು ಚಂದ್ರಮಂಡಲ ರಥದಲ್ಲಿ ಆಗಮಿಸುವುದು ಲಕ್ಷ ದೀಪೋತ್ಸವದ ದಿನ ಮಾತ್ರ. ಆನೆ ಯಶಸ್ವಿ, ಬಿರುದಾವಳಿಗಳು, ಬ್ಯಾಂಡ್, ನಾದಸ್ವರ, ತವಿಲ್‌ಗಳು ಉತ್ಸವಕ್ಕೆ ವಿಶೇಷ ಮೆರುಗು ನೀಡಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.