
ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯದಲ್ಲಿ ಬುಧವಾರ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರು ಹೊರಾಂಗಣ ಪ್ರವೇಶಿಸಿದರು. ಬಳಿಕ ದೀಪಾವಳಿ ಪ್ರಯುಕ್ತ ಶ್ರೀ ದೇವರ ಪಾಲಕಿ ಮತ್ತು ಬಂಡಿ ಉತ್ಸವ ನೆರವೇರಿತು.
ಶ್ರೀ ದೇವಳದ ಅರ್ಚಕ ರಾಜೇಶ್ ನಡ್ಯಂತಿಲ್ಲಾಯ ಉತ್ಸವದ ವಿಧಿವಿಧಾನ ನೆರವೇರಿಸಿದರು. ಈ ಮೂಲಕ ಶ್ರೀ ಕ್ಷೇತ್ರದಲ್ಲಿ ಶ್ರೀ ದೇವರ ಹೊರಾಂಗಣ ವರ್ಷಾವಧಿ ಉತ್ಸವಗಳು ಆರಂಭವಾದವು. ಈ ಮೊದಲು ದೇವಳದಲ್ಲಿ ಪೂರ್ವಶಿಷ್ಠ ಸಂಪ್ರದಾಯದ ಪ್ರಕಾರ ಲಕ್ಷ್ಮೀ ಪೂಜೆ ನೆರವೇರಿತು.
ಇನ್ನು ಮುಂದೆ ಶ್ರೀ ದೇವಳದಲ್ಲಿ ದೇವರ ಪಾಲಕಿ ಉತ್ಸವ, ಭಂಡಿ ಉತ್ಸವ ಹಾಗೂ ಮಂಟಪೋತ್ಸವ ಸೇವೆಗಳು ನಡೆಯುತ್ತದೆ. ಮುಂದೆ ಬರುವ ಲಕ್ಷದೀಪೋತ್ಸವದ ನಂತರ ರಥಬೀದಿಯಲ್ಲಿ ರಥೋತ್ಸವಗಳು ನಡೆಯಲಿದೆ.
ನಾಡಿನ ಉಳಿದ ದೇವಾಲಯಗಳಲ್ಲಿ ಪತ್ತನಾಜೆಯಂದು ಕೊನೆಯ ಉತ್ಸವವಾಗಿ ಉತ್ಸವಮೂರ್ತಿ ಗರ್ಭಗುಡಿಯನ್ನು ಪ್ರವೇಶಿಸುವುದರೊಂದಿಗೆ ಉತ್ಸವಗಳು ಕೊನೆಯಾಗುತ್ತದೆ. ಆದರೆ ಕುಕ್ಕೆಯಲ್ಲಿ ಮಾತ್ರ ಜೇಷ್ಠ ಶುದ್ಧಷಷ್ಠಿಯಂದು ಕೊನೆಯ ಉತ್ಸವವು ನಡೆದು, ದೀಪಾವಳಿಯ ಬಲಿಪಾಡ್ಯಮಿಯಂದು ಉತ್ಸವ ಆರಂಭವಾಗುತ್ತದೆ.
ಬುಧವಾರ ಶ್ರೀ ದೇವರ ಮಹಾಪೂಜೆಯ ಬಳಿಕ ಶ್ರೀ ದೇವರು ಹೊರಾಂಗಣ ಪ್ರವೇಶಿಸಿದರು. ನಂತರ ಆನೆ, ಬಿರುದಾವಳಿ, ಮಂಗಳವಾದ್ಯಗಳ ನಿನಾದದೊಂದಿಗೆ ಶ್ರೀ ದೇವರ ಉತ್ಸವಾಧಿಗಳು ನೆರವೇರಿತು. ಆರಂಭದಲ್ಲಿ ದೀಪಾರಾಧನೆಯುಕ್ತ ದೇವರ ಬಂಡಿ ರಥೋತ್ಸವ ನೆರವೇರಿತು. ನಂತರ ಭಜನೆ ಸುತ್ತು, ನಾಗಸ್ವರ, ಬ್ಯಾಂಡ್, ವಾದ್ಯಗಳನ್ನು ಒಳಗೊಂಡ ದೀಪಾರಾಧನೆಯುಕ್ತ ಪಾಲಕಿ ಉತ್ಸವ ಸಂಪನ್ನವಾಯಿತು. ದೇವರ ಉತ್ಸವ ವೀಕ್ಷಿಸಿದ ಭಕ್ತರು ಕೃತಾರ್ಥರಾದರು. ಕಾರ್ತಿಕ ಮಾಸದಲ್ಲಿ ಬರುವ ಲಕ್ಷ ದೀಪೋತ್ಸವದ ನಂತರ ರಥಬೀದಿಯಲ್ಲಿ ರಥೋತ್ಸವ ಆರಂಭಗೊಳ್ಳಲಿದೆ.
ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್.ಎಸ್ ಇಂಜಾಡಿ, ವ್ಯವಸ್ಥಾಪನಾ ಸಮಿತಿ ಸದಸ್ಯೆ ಸೌಮ್ಯಾ ಭರತ್, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಯೇಸುರಾಜ್, ಅಧೀಕ್ಷಕ ಗೋಪಿನಾಥ್ ನಂಬೀಶ, ಹೆಬ್ಬಾರ್ ಪ್ರಸನ್ನ ಭಟ್, ಪಾಟಾಳಿ ಲೋಕೇಶ್ ಎ.ಆರ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.