ADVERTISEMENT

ಕೂಳೂರು: ಕಾಳಜಿ ಕೇಂದ್ರಕ್ಕೆ 197 ಮಂದಿ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2024, 5:00 IST
Last Updated 2 ಆಗಸ್ಟ್ 2024, 5:00 IST
ಕೂಳೂರಿನ ಪೌಲ್ ಡಿಸೋಜ‌ ಅವರ ಮನೆ ಮತ್ತು ಕ್ಯಾಂಟಿನ್ ಜಲಾವೃತವಾಗಿರುವುದು
ಕೂಳೂರಿನ ಪೌಲ್ ಡಿಸೋಜ‌ ಅವರ ಮನೆ ಮತ್ತು ಕ್ಯಾಂಟಿನ್ ಜಲಾವೃತವಾಗಿರುವುದು   

ಮಂಗಳೂರು: ಫಲ್ಗುಣಿ ನದಿ ಉಕ್ಕಿ ಹರಿದ ಪರಿಣಾಮ ನಗರದ ಕೂಳೂರು, ಬಂಗ್ರಕೂಳೂರು, ಪಂಜಿಮೊಗರು, ಪಡುಕೋಡಿ ಕೆಂಜಾರು, ಉಳಾಯಿಬೆಟ್ಟು ಪ್ರದೇಶಗಳಲ್ಲಿ ನೂರಾರು ಮನೆಗಳು ಜಲಾವೃತವಾಗಿವೆ. ಕುಳೂರು ಪರಿಸರದಲ್ಲಿ ಮುಂಜಾನೆ 40ಕ್ಕೂ ಹೆಚ್ಚು ಮನೆಗಳ ಸುತ್ತ ನೀರು ಆವರಿಸಿತ್ತು.

ನೀರಿನ ಮಟ್ಟ ಹೆಚ್ಚುತ್ತಿದ್ದಂತೆಯೇ ಈ ಪ್ರದೇಶದ ನಿವಾಸಿಗಳು ಸಮೀಪದ ಎತ್ತರ ಪ್ರದೇಶದ ಮನೆಗಳಿಗೆ ಅಗತ್ಯ ಸಾಮಗ್ರಿಗಳನ್ನು ಸಾಗಿಸಿದರು. ಇನ್ನು ಕೆಲವರು ಸಂಬಂಧಿಕರ ಮನೆಗಳಲ್ಲಿ ಆಶ್ರಯ ಪಡೆದರು. 

ಈ ಪ್ರದೇಶದ ನಿವಾಸಿಗಳ ಸಲುವಾಗಿ ಕೂಳೂರು  ಚರ್ಚ್‌ ಶಾಲೆಯಲ್ಲಿ ಕಾಳಜಿ ಕೇಂದ್ರವನ್ನು ಮಹಾನಗರ ಪಾಲಿಕೆಯು ಆರಂಭಿಸಿದೆ.

ADVERTISEMENT

‘ಕುಳೂರು ಚರ್ಚ್ ಶಾಲೆಯ ಕಾಳಜಿ ಕೇಂದ್ರದಲ್ಲಿ 43 ಮಕ್ಕಳು,  95 ಪುರುಷರು ಹಾಗೂ 59 ಮಹಿಳೆಯರು ಸೇರಿ ಒಟ್ಟು 197 ಮಂದಿ ಆಶ್ರಯ ಪಡೆದಿದ್ದಾರೆ. ಅವರಿಗೆ ಟೂತ್‌ಪೇಸ್ಟ್‌, ಬೆಡ್‌ಶೀಟ್‌, ಚಾಪೆ, ಸೊಳ್ಳೆಬತ್ತಿ ಒದಗಿಸಿದ್ದೇವೆ. ಕುಡಿಯುವ ನೀರು, ಉಪಾಹಾರ, ಹಾಗೂ ಊಟದ ವ್ಯವಸ್ಥೆ ಮಾಡಿದ್ದೇವೆ. ಸಾಕಷ್ಟು ಶೌಚಾಲಯಗಳ ವ್ಯವಸ್ಥೆಯನ್ನೂ ಕಲ್ಪಿಸಿದ್ದೇವೆ’ ಎಂದು ಪಾಲಿಕೆ ಆಯುಕ್ತ ಆನಂದ ಸಿ.ಎಲ್‌. ತಿಳಿಸಿದರು.

‘ಕಾಳಜಿ ಕೇಂದ್ರದಲ್ಲಿ ಮಹಿಳೆಯರು ಹಾಗೂ ಪುರುಷರು ಉಳಿದುಕೊಳ್ಳಲು ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಪೊಲೀಸ್‌ ಭದ್ರತೆ ಒದಗಿಸಲಾಗಿದೆ. ವೈದ್ಯರನ್ನು, ವೈದ್ಯಕೀಯ ಸಿಬ್ಬಂದಿಯನ್ನು ಹಾಗೂ ಪೌರಕಾರ್ಮಿಕರ ನಿಯೋಜಿಸಿದ್ದೇವೆ. ತುರ್ತು ವೈದ್ಯಕೀಯ ನೆರವು ಒದಗಿಸಲು ಆಂಬುಲೆನ್ಸ್‌ ಕೂಡಾ ಸಜ್ಜಾಗಿದೆ’ ಎಂದರು.

ಕೆ‌ಂಜಾರು ಪರಿಸರದಲ್ಲಿ ತೆಂಗಿನ ತೋಟ ಜಲಾವೃತವಾಗಿರುವುದು
ಗುರುಪುರ: ಪ್ರವಾಹದ ತೀವ್ರತೆ ಹೆಚ್ಚಿಸಿದ ಹೊಸ ಸೇತುವೆ?
ಫಲ್ಗುಣಿ ನದಿ ಉಕ್ಕಿ ಹರಿದು ಗುರುಪುರ ಪಡುಶೆಡ್ಡೆ ಮೂಡುಶೆಡ್ಡೆ ಹಾಗೂ ಉಳಾಯಿಬೆಟ್ಟು ಪ್ರದೇಶದಲ್ಲಿ ಪ್ರವಾಹ ಕಾಣಿಸಿಕೊಂಡಿದೆ. ಗುರುಪುರದಲ್ಲಿ ರಾಷ್ಟ್ರೀಯ ಹೆದ್ದಾರಿ ಚತುಷ್ಫಥ ಕಾಮಗಾರಿ ಸಲುವಾಗಿ ಫಲ್ಗುಣಿ ನದಿಗೆ ಹೊಸತಾಗಿ ಅಣೆಕಟ್ಟು ನಿರ್ಮಿಸಲಾಗಿದೆ. ಇಲ್ಲಿನ ತಗ್ಗು ಪ್ರದೇಶದಲ್ಲಿ ಮಣ್ಣು ತುಂಬಿಸಿ ರಸ್ತೆ ನಿರ್ಮಿಸಲಾಗಿದೆ. ಈ ಪ್ರದೇಶದಲ್ಲಿ ಪ್ರವಾಹದ ತೀವ್ರತೆ ಹೆಚ್ಚುವುದಕ್ಕೆ ಇದು ಕೂಡ ಕಾರಣ ಎಂದು ಸ್ಥಳೀಯರು ದೂರಿದ್ದಾರೆ. ಪಡುಶೆಡ್ಡೆಯಲ್ಲಿ 20ಕ್ಕೂ ಹೆಚ್ಚು ಮನೆಗಳಲ್ಲಿ ವಾಸವಿದ್ದ ಕುಟುಂಬಗಳನ್ನು ದೋಣಿಯ ಸಹಾಯದಿಂದ ಸುರಕ್ಷಿತ ತಾಣಗಳಿಗೆ ಸ್ಥಳಾಂತರಿಸಲಾಗಿದೆ. ರಾಜ್ಯ ವಿಪತ್ತು ನಿರ್ವಹಣಾ ಪಡೆಯ ಸದಸ್ಯರು ಬುಧವಾರ ರಾತ್ರಿಯಿಂದಲೇ ರಕ್ಷಣಾ ಕಾರ್ಯಾಚರಣೆ ನಡೆಸಿದರು.  ಗುರುಪುರದ ವಜ್ರದೇಹಿ ಮಠದ ಪ್ರದೇಶದಲ್ಲೂ ಪ್ರವಾಹ ಕಾಣಿಸಿಕೊಂಡಿದೆ. ಮಠದಲ್ಲಿದ್ದ ಜಾನುವಾರುಗಳನ್ನು ಎತ್ತರದ ಪ್ರದೇಶಗಳಿಗೆ ಸ್ಥಳಾಂತರಿಸಲಾಯಿತು. ಇಲ್ಲೂ ಕೆಲವು ಮನೆಗಳು ಹಾಗೂ ಕಲ್ಯಾಣ ಮಂಟಪ ಜಲಾವೃತವಾಗಿತ್ತು.  ವಾಮಂಜೂರಿನ ಅಮೃತೇಶ್ವರ ದೇವಸ್ಥಾನದ ಪ್ರದೇಶದಲ್ಲೂ ಪ್ರವಾಹ ಕಾಣಿಸಿಕೊಂಡಿದೆ. ‘30 ವರ್ಷಗಳಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಪ್ರವಾಹ ಉಂಟಾಗಿರುವುದು ಇದೇ ಮೊದಲು’ ಎಂದು ಸ್ಥಳೀಯರು ತಿಳಿಸಿದರು. ಉಳಾಯಿಬೆಟ್ಟು ರಸ್ತೆ ಜಲಾವೃತವಾಗಿದ್ದರಿಂದ ಆಸುಪಾಸಿನ ನಾಲ್ಕೈದು ಗ್ರಾಮಗಳು ಸಂಪರ್ಕ ಕಡಿದುಕೊಂಡವು.  ಇಲ್ಲಿ ರಸ್ತೆಯಲ್ಲಿ ನಾಲ್ಕು ಅಡಿಗೂ ಹೆಚ್ಚು ಎತ್ತರದ ವರೆಗೆ ನೀರು ಇತ್ತು.  ಬ್ಯಾರಿಕೇಡ್‌ ಅಳವಡಿಸಿ ಈ ರಸ್ತೆಯಲ್ಲಿ ವಾಹನಗಳು ಸಂಚರಿಸದಂತೆ ನಿರ್ಬಂಧಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.