ADVERTISEMENT

ಭೂಕುಸಿತ | ಕಾಲು ಕಳೆದುಕೊಂಡ ಮಹಿಳೆಯ ವಿಚಾರಣೆ: ನೋಟಿಸ್ ನೀಡಿದ್ದ ಅಧಿಕಾರಿಯೇ ಗೈರು

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2025, 4:41 IST
Last Updated 9 ಅಕ್ಟೋಬರ್ 2025, 4:41 IST
<div class="paragraphs"><p>ಭೂಕುಸಿತದಿಂದ ನೆಲಕಚ್ಚಿರುವ ಅಶ್ವಿನಿ ಅವರ ಮನೆಯ ಈಗಿನ ಸ್ಥಿತಿ</p></div>

ಭೂಕುಸಿತದಿಂದ ನೆಲಕಚ್ಚಿರುವ ಅಶ್ವಿನಿ ಅವರ ಮನೆಯ ಈಗಿನ ಸ್ಥಿತಿ

   

ಉಳ್ಳಾಲ: ಮಂಜನಾಡಿ ಉರುಮಣೆಕೋಡಿಯಲ್ಲಿ ಭೂಕುಸಿತದಿಂದ ತನ್ನೆರಡು ಕಾಲುಗಳನ್ನು ಕಳೆದುಕೊಂಡ ಅಶ್ವಿನಿ ಅವರಿಗೆ ವಿಚಾರಣೆ ಸಲುವಾಗಿ ಘಟನಾ ಸ್ಥಳಕ್ಕೆ ಬುಧವಾರ ಹಾಜರಾಗುವಂತೆ ನೋಟಿಸ್ ನೀಡಿದ್ದ ಅಧಿಕಾರಿಗಳು ಅನಾರೋಗ್ಯದ ಕಾರಣ ನೀಡಿ ಸ್ಥಳಕ್ಕೆ ಭೇಟಿ ನೀಡಿಲ್ಲ.  ಕಾಲಿಲ್ಲದ ಅಶ್ವಿನಿ ಸ್ಥಳಕ್ಕೆ ಬಂದರೂ ಅಧಿಕಾರಿಗಳು ಬಾರದಿರುವುದಕ್ಕೆ ಆಕೆಯ ಕುಟುಂಬಸ್ಥರು ಹಾಗೂ ಹಿತೈಷಿಗಳು ಆಕ್ರೋಶ ವ್ಯಕ್ತಪಡಿಸಿದರು.

ಭೂಕುಸಿತದಿಂದಾಗಿ ಅತ್ತೆ ಹಾಗೂ ತನ್ನಿಬ್ಬರು ಮಕ್ಕಳನ್ನೂ ಕಳೆದುಕೊಂಡಿರುವ ಅಶ್ವಿನಿ  ಅವರಿಗೆ ಈ ಪ್ರಕರಣದ ತನಿಖೆ ಸಂಬಂಧ ಘಟನಾ ಸ್ಥಳದಲ್ಲಿ ಅ.8  ಹಾಗೂ 11 ರಂದು ಹಾಜರಿರಬೇಕು ಎಂದು ಜಿಲ್ಲಾ ಪಂಚಾಯಿತಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್‌ ವಾಟ್ಸ್‌ಆ್ಯಪ್‌ ಮೂಲಕ ನೋಟಿಸ್‌ ಜಾರಿ ಮಾಡಿದ್ದರು.

ADVERTISEMENT

ಅಶ್ವಿನಿಯವರಿಗೆ ನೋಟಿಸ್‌ ತುರಾತುರಿಯಲ್ಲಿ ನೀಡಲಾಗಿತ್ತು. ಅದರಂತೆ ಅಶ್ವಿನಿ ಅವರನ್ನು ಕುಟುಂಬಸ್ಥರು ಹರೇಕಳದ ತಾಯಿ ಮನೆಯಿಂದ ಘಟನಾ ಸ್ಥಳಕ್ಕೆ ಕರೆತಂದಿದ್ದರು. ಬೆಳಿಗ್ಗೆ 11 ಗಂಟೆವರೆಗೆ ಕಾದರೂ ತನಿಖಾಧಿಕಾರಿಗಳು ಸ್ಥಳಕ್ಕೆ ಬಂದಿರಲಿಲ್ಲ.

ಅಶ್ವಿನಿ ಅವರ ಸಂಬಂಧಿಕರು ಮೊಬೈಲ್‌ಗೆ ಕರೆ ಮಾಡಿದಾಗ ಆ ಅಧಿಕಾರಿ, ‘ಮಧುಮೇಹ ಕಾಯಿಲೆಯಿಂದ ಬಳಲುತ್ತಿದ್ದೇನೆ. ಮನೆಯಲ್ಲೇ ಮಲಗಿದ್ದೇನೆ. ಈ ಬಗ್ಗೆ ಅಶ್ವಿನಿ ಅವರ ಸಂಬಂಧಿಕರ ಮೊಬೈಲ್‌ಗೆ ಇಂದು ಬೆಳಿಗ್ಗೆ 9.30 ಸುಮಾರಿಗೆ  ಸಂದೇಶ ಕಳುಹಿಸಿದ್ದೇನೆ ಎಂದು ಪ್ರತಿಕ್ರಿಯಿಸಿದರು. ಹೆಚ್ಚು ಮಾತನಾಡದೇ ಮೊಬೈಲ್‌ ಸಂಪರ್ಕ ಕಡಿತಗೊಳಿಸಿದರು’ ಎಂದು ಸಂಬಂಧಿಕರು ತಿಳಿಸಿದರು.

ಅಶ್ಚಿನಿ ಅವರ ಸಂಬಂಧಿ ಸುಮಲತಾ ಕೊಣಾಜೆ, ‘ಅಧಿಕಾರಿಗಳು 9.30ರ ಹೊತ್ತಿಗೆ ಸಂದೇಶ ಕಳುಹಿಸಿ ‘ಬರುವುದಿಲ್ಲ’ ಎನ್ನುತ್ತಾರೆ. ಕಾಲುಗಳಿಲ್ಲದ ಅಶ್ವಿನಿಯನ್ನು ಸ್ಥಳಕ್ಕೆ ಕರೆತರಲು ಎಷ್ಟು ಕಷ್ಟವಿದೆ ಅನ್ನುವ ಸೌಜನ್ಯವೂ ಅವರಿಗೆ ಇಲ್ಲ. ಅಶ್ವಿನಿ ಚಿಕಿತ್ಸಾ ವೆಚ್ಛ, ಬದುಕಲು ಬೇಕಾದ ಹಕ್ಕುಗಳಿಗೆ ಹಣ ಹೊಂದಿಸಲಾಗದೆ ಸಾಮಾಜಿಕ ಜಾಲತಾಣದ ಮೂಲಕ ಯುವ ಸಮುದಾಯ ಭಿಕ್ಷೆ ಬೇಡುವ ಸ್ಥಿತಿಗೆ ಬಂದು ತಲುಪಿದೆ. ಅಶ್ವಿನಿ ಸ್ವತಂತ್ರಳಾಗಿ ಬಾಳು ಕಟ್ಟಿಕೊಳ್ಳಲು ಹೋರಾಟ ನಡೆಸಬೇಕಾದ ಸ್ಥಿತಿ ಎದುರಾಗಿದೆ’ ಎಂದರು.

‘ಮನೆ ಕುಸಿತಗೊಂಡು 4 ತಿಂಗಳು ಕಳೆದರೂ ಅವಶೇಷ ತೆರವುಗೊಳಿಸುವ ಕೆಲಸಗಳು ಆಗಿಲ್ಲ. ಮನೆಯೊಳಗೆ ಬೆಲೆಬಾಳುವ ವಸ್ತುಗಳು ಇದ್ದು, ಅವಶೇಷ ತೆರವುಗೊಳಿಸಲು ಕ್ರಮ ವಹಿಸದೇ ಅಧಿಕಾರಿಗಳು ಕುಟುಂಬವನ್ನು ಬೀದಿಗೆ ತಂದು ನಿಲ್ಲಿಸಿದ್ದಾರೆ. ಸ್ಥಳೀಯಾಡಳಿತ ಅಧಿಕಾರಿಗಳು ನೀಡಿರುವ ಸುಳ್ಳು ಮಾಹಿತಿಗಳ ವಿರುದ್ಧ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳ ಕದ ತಟ್ಟಿದ್ದೇವೆ. ಅವರ ಆದೇಶದಂತೆ ತನಿಖೆ ತಂಡ ರಚನೆಯಾದರೂ, ತನಿಖಾಧಿಕಾರಿಗಳು ಸ್ಥಳಕ್ಕೆ ಬಾರದೆ ನುಣುಚಿಕೊಳ್ಳುತ್ತಿದ್ದಾರೆ’ ಎಂದು ಆರೋಪಿಸಿದರು.

ಮಂಗಳೂರು ಮಂಡಲ ಬಿಜೆಪಿ ಅಧ್ಯಕ್ಷ ಜಗದೀಶ್‌ ಆಳ್ವ ಕುವೆತ್ತಬೈಲ್‌, ‘ಅಶ್ವಿನಿ ಅವರ ಮಕ್ಕಳು ಹಾಗೂ ಅತ್ತೆ ಸಾಯಲು ರಸ್ತೆಗಾಗಿ ಗುಡ್ಡ ಅಗೆದ್ದದ್ದೂ ಕಾರಣ.  ಈ ಬಗ್ಗೆ ಇಂದು ತನಿಖೆ ನಡೆಸಬೇಕಾಗಿದ್ದ ಎಂಜಿನಿಯರ್‌ ಅವರೇ ಕೊನೇ ಕ್ಷಣದಲ್ಲಿ ‘ಬರುವುದಿಲ್ಲ’ ಎಂದು ಸಂದೇಶ  ಕಳುಹಿಸುತ್ತಾರೆ. ಎರಡು ಕಾಲುಗಳನ್ನು ಕಳೆದುಕೊಂಡ ತಾಯಿ ಅಶ್ವಿನಿ ಸ್ಥಳಕ್ಕೆ ಕರೆಸಿ ಅಮಾನವೀಯತೆ ಮೆರೆಯುವುದು ಎಷ್ಟು ಸರಿ’ ಎಂದು ಪ್ರಶ್ನಿಸಿದರು.

ಚಂದ್ರಹಾಸ್‌ ಪಂಡಿತ್‌ ಹೌಸ್‌, ‘ಅಧಿಕಾರಿ ಗೈರಾಗುವವುದು ನ್ಯಾಯಸಮ್ಮತವೇ’ ಎಂದು ಪ್ರಶ್ನಿಸಿದರು.

ಅಶ್ವಿನಿ ಅವರ ಪತಿ ಸೀತಾರಾಮ್‌, ಸಹೋದರ ಪವನ್‌ ಮತ್ತಿತರರು ಇದ್ದರು.

ಭೂಕುಸಿತದಿಂದ ನೆಲಕಚ್ಚಿರುವ ಅಶ್ವಿನಿ ಅವರ ಮನೆಯ ಈಗಿನ ಸ್ಥಿತಿ 

ಅನಾಥ ಮನೆಯಲ್ಲಿ ಮರಿ ಹಾಕಿದ ಸಾಕು ನಾಯಿ!

ಮನೆ ಹೊರಗಡೆ ಕಟ್ಟಿ ಹಾಕಲಾಗಿದ್ದ ನಾಯಿ ಭೂಕುಸಿತದ ನಡುವೆಯೂ ಬದುಕುಳಿದಿತ್ತು. ನಾಲ್ಕು ತಿಂಗಳಿನಿಂದ ಅನಾಥವಾಗಿ ಮನೆಯಲ್ಲೇ ಉಳಿದಿದ್ದ ಜಿಮ್ಮಿ ಹೆಸರಿನ ಸಾಕು ನಾಯಿ ಮೂರು ಮರಿಗಳಿಗೆ ಜನ್ಮ ನೀಡಿದೆ.

‘ನಾಯಿಗಳೆಂದಲ್ಲಿ ಮಕ್ಕಳಿಗೆ ಬಹಳ ಇಷ್ಟ. ಇಬ್ಬರೂ ಇರುತ್ತಿದ್ದಲ್ಲಿ ಅದರ ಜೊತೆಗೇ ಇರುತ್ತಿದ್ದರು. ಆದರೆ ಇಂದು ಮಕ್ಕಳೊಂದಿಗೆ ಬೆಳಗಬೇಕಿದ್ದ ಮನೆ ಮಣ್ಣು ಪಾಲಾಗಿಯೇ ಉಳಿದಿದೆ. ಮರಿ ಹಾಕಿದ ನಾಯಿಮರಿಗಳಿಗೂ ದಿಕ್ಕಿಲ್ಲದಂತಾಗಿದೆ’ ಎಂದು ಅಶ್ವಿನಿ ಅವರ ಬಂಧು ಒಬ್ಬರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.