ADVERTISEMENT

ದಕ್ಷಿಣ ಕನ್ನಡ: ಕುಷ್ಠರೋಗ ಪ್ರಕರಣ ಪತ್ತೆ ಅಭಿಯಾನ 24ರಿಂದ

ಜಿಲ್ಲೆಯ 113 ಗ್ರಾಮಗಳಲ್ಲಿ ಮನೆ ಮನೆಗೆ ಭೇಟಿ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2025, 6:05 IST
Last Updated 22 ನವೆಂಬರ್ 2025, 6:05 IST
 ಡಾ ಎಚ್ ಆರ್ ತಿಮ್ಮಯ್ಯ
 ಡಾ ಎಚ್ ಆರ್ ತಿಮ್ಮಯ್ಯ   

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ 113 ಗ್ರಾಮಗಳಲ್ಲಿ ಕುಷ್ಠರೋಗ ಪ್ರಕರಣ ಪತ್ತೆ ಹಚ್ಚುವ ಅಭಿಯಾನ ನ.24ರಿಂದ ಡಿ.9ರ ವರೆಗೆ ನಡೆಯಲಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಚ್‌.ಆರ್‌. ತಿಮ್ಮಯ್ಯ ಹೇಳಿದರು.

ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಐದು ವರ್ಷಗಳಲ್ಲಿ ಕುಷ್ಠರೋಗ ಪ್ರಕರಣಗಳು ಪತ್ತೆಯಾದ ಗ್ರಾಮಗಳಲ್ಲಿ ಮಾತ್ರ ಈ ಅಭಿಯಾನ ನಡೆಯಲಿದೆ. ಈ ಗ್ರಾಮಗಳಲ್ಲಿ 1,60,314 ಮನೆಗಳಿದ್ದು, 7,61,902 ಜನಸಂಖ್ಯೆ ಇದೆ. ಪ್ರತಿ ಮನೆಗೆ ಭೇಟಿ ನೀಡಿ ಮನೆಯಲ್ಲಿರುವ ಪ್ರತಿಯೊಬ್ಬರನ್ನೂ ಪರೀಕ್ಷಿಸಿ ಮೈಯಲ್ಲಿ ಬಿಳಿ ಬಣ್ಣದ ಮಚ್ಚೆಗಳಿವೆಯೇ ಎಂದು ಪತ್ತೆಹಚ್ಚಲಾಗುವುದು ಎಂದರು.

2030ರ ವೇಳೆಗೆ ಕುಷ್ಠರೋಗ ಮುಕ್ತ ಭಾರತ ಎಂಬ ಗುರಿ ಹಾಕಿಕೊಳ್ಳಲಾಗಿದೆ. ಒಂದು ಸಮೀಕ್ಷಾ ತಂಡದಲ್ಲಿ ಒಬ್ಬರು ಮಹಿಳೆ, ಒಬ್ಬರು ಪುರುಷ ಸ್ವಯಂ ಸೇವಕರು ಇರಲಿದ್ದು, ಇಂತಹ 573 ತಂಡಗಳನ್ನು ರಚಿಸಲಾಗಿದೆ. ನಿತ್ಯ ಗ್ರಾಮೀಣ ಪ್ರದೇಶದಲ್ಲಿ 15–20 ಹಾಗೂ ನಗರ ಪ್ರದೇಶದಲ್ಲಿ 20–25 ಮನೆಗಳಿಗೆ ಭೇಟಿ ನೀಡಲಿದ್ದಾರೆ ಎಂದರು.

ADVERTISEMENT

ಆಶಾಗಳು, ಆರೋಗ್ಯ ಕಾರ್ಯಕರ್ತರು, ಸ್ವಯಂ ಸೇವಕರು ಮತ್ತು ಅಂಗನವಾಡಿ ಕಾರ್ಯಕರ್ತೆಯರು ಪ್ರತಿ ಮನೆಗೆ ಭೇಡಿನೀಡಿ ಶಂಕಿತ ಪ್ರಕರಣ ಪತ್ತೆಹಚ್ಚಿ ಜಿಲ್ಲಾ ನ್ಯೂಕ್ಲಿಯಸ್‌ ತಂಡವು ದೃಢಪಡಿಸಿದ ಪ್ರಕರಣಗಳನ್ನು ಚಿಕಿತ್ಸೆಗೆ ಒಳಪಡಿಸಲಾಗುವುದು. ಅವರ ಸಂಪರ್ಕಿತರನ್ನು ಗುರುತಿಸಲಾಗುವುದು ಎಂದು  ಜಿಲ್ಲೆಯ ಕುಷ್ಠರೋಗ ನಿರ್ಮೂಲನ ಅಧಿಕಾರಿ ಡಾ.ಸುದರ್ಶನ್ ತಿಳಿಸಿದರು.

ಶಂಕಿತ ಪ್ರಕರಣಗಳಿರುವ ಗ್ರಾಮ, ಸ್ಥಳಗಳಲ್ಲಿ ಪರಿಣಾಮಕಾರಿಯಾದ ಸಮೀಕ್ಷೆ ನಡೆಸಿದಾಗ ಬಿಳೆ ಮಚ್ಚೆ ಪ್ರಕರಣಗಳು ಕಂಡು ಬಂದಲ್ಲಿ ತಜ್ಞ ವೈದ್ಯರ ಶಿಬಿರಗಳನ್ನು ಡಿಸೆಂಬರ್‌ 2ರಂದು ಬಂಟ್ವಾಳ ತಾಲ್ಲೂಕು ಆಸ್ಪತ್ರೆ, 3ರಂದು ಪುತ್ತೂರು ತಾಲ್ಲೂಕು ಆಸ್ಪತ್ರೆ, 4ರಂದು ವಿಟ್ಲ ಸಮುದಾಯ ಆರೋಗ್ಯ ಕೇಂದ್ರ, 5ರಂದು ಬೆಳ್ತಂಗಡಿ ಮತ್ತು 6ರಂದು ಸುಳ್ಯ ತಾಲ್ಲೂಕು ಆಸ್ಪತ್ರೆಗಳಲ್ಲಿ ನಡೆಸಿ ತಪಾಸಣೆ ನಡೆಸಲಾಗುವುದು. ಮಂಗಳೂರಿನ ವೆನ್‌ಲಾಕ್‌ ಆಸ್ಪತ್ರೆಯಲ್ಲಿ ಚರ್ಮರೋಗ ತಜ್ಞರ ಸೇವೆ ನಿತ್ಯ ಇರಲಿದೆ  ಎಂದರು.

ರೋಗ– ಲಕ್ಷಣಗಳು

ಕುಷ್ಠರೋಗವು ಮೈಕೋಬ್ಯಾಕ್ಟೀರಿಯಂ ಲೆಪ್ರೇ ಎಂಬ ಸೂಕ್ಷ್ಮ ರೋಗಾಣುವಿನಿಂದ ಬರುವ ಕಾಯಿಲೆ. ಇದು ನಿಧಾನವಾಗಿ ಹರಡುವ ಸೋಂಕು ರೋಗ.  ಇದು ಮುಖ್ಯವಾಗಿ ಚರ್ಮ ಮತ್ತು ನರಗಳಿಗೆ ಬರುವ ಕಾಯಿಲೆ. ರೋಗದ ಮೊದಲ ಲಕ್ಷಣಗಳು ಗೋಚರಿಸಲು ಸರಾಸರಿ 2ರಿಂದ 5 ವರ್ಷ ಆಗಬಹುದು. 

ಸ್ಪರ್ಶಜ್ಞಾನ, ನೋವು, ನವೆ ಇಲ್ಲದ ತಾಮ್ರ ಅಥವಾ ತಿಳಿ ಬಿಳುಪಾದ ಮಚ್ಚೆಗಳು. ಕೈಕಾಲುಗಳಲ್ಲಿ ಜೋಮು ಉಂಟಾಗುವುದು ಮತ್ತು ಮರಗಟ್ಟುವುದು. ಮುಖ ಅಥವಾ ಕಿವಿಯ ಚರ್ಮದ ಮೇಲೆ ಗಂಟುಗಳು ಕಾಣಿಸಿಕೊಳ್ಳುವುದು ಮತ್ತು ಎಣ್ಣೆ ಸವರಿದಂತೆ ಚರ್ಮ ಕಾಣಿಸುವುದು. ನರಗಳ ಊತವಾಗುವಿಕೆ.

1ರಿಂದ 5 ಮಚ್ಚೆಗಳು ಹಾಗೂ ಒಂದು ನರಕ್ಕೆ ಸೋಂಕು ತಗುಲಿದ್ದಲ್ಲಿ ಅದು ಮೊದಲ ಹಂತದ (ಪಾಸಿಬ್ಯಾಸಿಲ್ಲರಿ–ಪಿಬಿ) ಕುಷ್ಠರೋಗವಾಗಿರುತ್ತದೆ. ಇದಕ್ಕೆ ಆರು ತಿಂಗಳು ಬ್ಲಿಸ್ಟರ್‌ ಪ್ಯಾಕ್‌ ಔಷಧಿ ಕೊಡಲಾಗುವುದು. 6ಕ್ಕೂ ಹೆಚ್ಚು ಮಚ್ಚೆ ಕಲೆಗಳಿದ್ದು, ಒಂದಕ್ಕಿಂತ ಹೆಚ್ಚು ನರಗಳಿಗೆ ಸೋಂಕು ತಗುಲಿದ್ದಲ್ಲಿ ಅದು 2ನೇ ಹಂತದ (ಮಲ್ಟಿಬ್ಯಾಸಿಲ್ಲರಿ–ಎಂಬಿ) ಕುಷ್ಠರೋಗವಾಗಿರುತ್ತದೆ. ಇದಕ್ಕೆ ಒಂದು ವರ್ಷದ ವರೆಗೆ ಔಷಧಿ ಕೊಡಲಾಗುವುದು ಎಂದು ವೆನ್‌ಲಾಕ್‌ ಆಸ್ಪತ್ರೆಯ ಚರ್ಮರೋಗ ತಜ್ಞ ಡಾ.ನವೀನ್‌ ಹೇಳಿದರು.

ಜಿಲ್ಲೆಯಲ್ಲಿಯ ಕುಷ್ಠರೋಗ ಪ್ರಕರಣಗಳ ವಿವರ 2020–21;29 2021- 22;39 2022-23;75 2023-24;62 2024-25;43 2025ರ ಅಕ್ಟೋಬರ್‌ ವರೆಗೆ;40

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.