ಮಂಗಳೂರು: ವರ್ಷದ ಹಿಂದೆ ಲೀಟರ್ಗೆ ₹200ಕ್ಕೆ ಕುಸಿದಿದ್ದ ಕೊಬ್ಬರಿ ಎಣ್ಣೆಯ (ತೆಂಗಿನೆಣ್ಣೆ) ದರ ಈಗ ₹400ರವರೆಗೆ ತಲುಪಿದೆ.
ತೆಂಗಿನೆಣ್ಣೆ ದುಬಾರಿಯಾಗಲು ಕೊಬ್ಬರಿಯ ಕೊರತೆ ಕಾರಣ. ಪ್ರತಿ ಕೆ.ಜಿ. ಕೊಬ್ಬರಿ ದರ ₹ 200ರಿಂದ ₹230ರವರೆಗೆ ತಲುಪಿದೆ. ಹಾಗಾಗಿ ತೆಂಗಿನೆಣ್ಣೆ ದರವೂ ದುಪ್ಪಟ್ಟಾಗಿದೆ ಎನ್ನುತ್ತಾರೆ ಕೊಬ್ಬರಿ ಮಿಲ್ಗಳ ಮಾಲೀಕರು.
‘ವರ್ಷದ ಹಿಂದೆ ತೆಂಗಿನಕಾಯಿ ದರ ನೆಲಕಚ್ಚಿತ್ತು. ಆಗ ತೆಂಗಿನೆಣ್ಣೆಯ ದರ ಲೀಟರ್ಗೆ ₹200ರವರೆಗೆ ಇಳಿಕೆಯಾಗಿತ್ತು. ಕ್ರಮೇಣ ದರ ಏರಿಕೆಯಾಗಿ ಪ್ರತಿ ಲೀಟರ್ಗೆ ₹ 300ರವರೆಗೆ ತಲುಪಿತ್ತು. ತಿಂಗಳಿನಿಂದ ಈಚೆಗೆ ದರ ಹೆಚ್ಚುತ್ತಲೇ ಇದ್ದು, ಪ್ರಸ್ತುತ ಲೀಟರ್ಗೆ ₹ 390ರಿಂದ ₹400ರವರೆಗೆ ಇದೆ’ ಎಂದು ಕದ್ರಿಯ ನಂದಿ ಆಯಿಲ್ ಮಿಲ್ ಮಾಲೀಕರಾದ ನಾಗರಾಜ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಕರಾವಳಿಯಲ್ಲಿ ಬೆಳೆಯುವ ತೆಂಗಿನಕಾಯಿಯಲ್ಲಿ ಎಣ್ಣೆ ಪ್ರಮಾಣ ಜಾಸ್ತಿ. ಆದರೆ ಈ ಕೊಬ್ಬರಿಯೇ ಈಚೆಗೆ ಸಿಗುತ್ತಿಲ್ಲ. ನಾವು ಪ್ರತಿ ಕೆ.ಜಿ.ಗೆ ₹230 ಕೊಡುತ್ತೇವೆ ಎಂದರೂ ಕೊಬ್ಬರಿ ಕೊಡುವವರಿಲ್ಲ’ ಎಂದರು.
‘ಒಂದು ಲೀಟರ್ ತೆಂಗಿನೆಣ್ಣೆ ಪಡೆಯಲು ಸುಮಾರು ಒಂದೂಮುಕ್ಕಾಲು ಕೆ.ಜಿ. ಕೊಬ್ಬರಿ ಬೇಕು. ಒಂದು ಕೆ.ಜಿ. ಕೊಬ್ಬರಿಗೆ ₹ 350ರವರೆಗೆ ವೆಚ್ಚವಾಗುತ್ತದೆ. ಪ್ರತಿ ಲೀಟರ್ ತೆಂಗಿನೆಣ್ಣೆಯನ್ನು ₹390 ಕ್ಕಿಂತ ಕಡಿಮೆ ದರಕ್ಕೆ ಮಾರಾಟ ಮಾಡಿದರೆ ನಷ್ಟವಾಗುತ್ತದೆ’ ಎಂದರು.
‘ಎಳೆನೀರು ದುಬಾರಿ– ಸಿಗುತ್ತಿಲ್ಲ ಕೊಬ್ಬರಿ’
‘ಕರಾವಳಿಯಲ್ಲಿ ಕೊಬ್ಬರಿ ಕೊರತೆ ಎದುರಾಗಲು ಮುಖ್ಯಕಾರಣ ಎಳನೀರಿನ ದರ ಗಣನೀಯವಾಗಿ ಹೆಚ್ಚಾಗಿರುವುದು. ಇಲ್ಲಿ ಬೇಸಿಗೆಯಲ್ಲಿ ಎಳನೀರು ₹ 50ರಿಂದ ₹ 60ಕ್ಕೆ ಮಾರಾಟವಾಗಿದೆ. ವ್ಯಾಪಾರಿಗಳು ಬೆಳೆಗಾರರಿಂದಲೇ ₹ 35 ಕೊಟ್ಟು ಎಳೆನೀರು ಖರೀದಿ ಮಾಡಿದ್ದಾರೆ. ತೆಂಗಿನಕಾಯಿಗೂ ಆಗ ಅಷ್ಟು ದರ ಇರಲಿಲ್ಲ. ತೆಂಗಿನಕಾಯಿಗಿಂತ ಎಳನೀರಿಗೇ ಜಾಸ್ತಿ ದರ ಸಿಕ್ಕಿದ್ದರಿಂದ ತೆಂಗಿನಕಾಯಿಯನ್ನು ಒಣಗಿಸಿ ಕೊಬ್ಬರಿ ಮಾಡಲು ಬೆಳೆಗಾರರು ಆಸಕ್ತಿ ತೋರಿಸಿಲ್ಲ’ ಎನ್ನುತ್ತಾರೆ ದಕ್ಷಿಣ ಕನ್ನಡ ತೆಂಗು ರೈತ ಉತ್ಪಾದಕರ ಸಂಸ್ಥೆಯ ಅಧ್ಯಕ್ಷ ಕುಸುಮಾಧರ ಎಸ್.ಕೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.