ADVERTISEMENT

‘ಸಹೃದಯರ ಸ್ಪಂದನೆಯಿಂದ ಸಾಹಿತ್ಯ ಸಾಕಾರ’

ಸುಖಲಾಕ್ಷಿ ಸುವರ್ಣ, ಕ್ಯಾಥರಿನ್ ರಾಡ್ರಿಗಸ್‌ಗೆ ಕರಾವಳಿ ವಾಚಕಿಯರ ಲೇಖಕಿಯರ ಸಂಘದ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2026, 7:56 IST
Last Updated 8 ಫೆಬ್ರುವರಿ 2026, 7:56 IST
ಕ್ಯಾಥರಿನ್ ರಾಡ್ರಿಗಸ್ (ಎಡ) ಅವರಿಗೆ ತೌಳವಸಿರಿ ಪ್ರಶಸ್ತಿ ಹಾಗೂ ಸುಖಲಾಕ್ಷಿ ಸುವರ್ಣ ಅವರಿಗೆ ಸಾರಾ ಅಬೂಬಕ್ಕರ್ ದತ್ತಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಯಶೋದಾ ಮೋಹನ್‌, ಪ್ರೊ.ಕೃಷ್ಣಮೂರ್ತಿ, ವಸಂತ ಕುಮಾರ್ ಪೆರ್ಲ, ಸಾಹಿದಾ ರಹೀಂ, ಶಕುಂತಳಾ ಶೆಟ್ಟಿ, ಅರುಣಾ ನಾಗರಾಜ್‌, ಪ್ರೊ.ಸುಬ್ಬಣ್ಣ ರೈ ಮತ್ತು ಸರಸ್ವತಿ ಕುಮಾರಿ ಪಾಲ್ಗೊಂಡಿದ್ದರು
ಕ್ಯಾಥರಿನ್ ರಾಡ್ರಿಗಸ್ (ಎಡ) ಅವರಿಗೆ ತೌಳವಸಿರಿ ಪ್ರಶಸ್ತಿ ಹಾಗೂ ಸುಖಲಾಕ್ಷಿ ಸುವರ್ಣ ಅವರಿಗೆ ಸಾರಾ ಅಬೂಬಕ್ಕರ್ ದತ್ತಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಯಶೋದಾ ಮೋಹನ್‌, ಪ್ರೊ.ಕೃಷ್ಣಮೂರ್ತಿ, ವಸಂತ ಕುಮಾರ್ ಪೆರ್ಲ, ಸಾಹಿದಾ ರಹೀಂ, ಶಕುಂತಳಾ ಶೆಟ್ಟಿ, ಅರುಣಾ ನಾಗರಾಜ್‌, ಪ್ರೊ.ಸುಬ್ಬಣ್ಣ ರೈ ಮತ್ತು ಸರಸ್ವತಿ ಕುಮಾರಿ ಪಾಲ್ಗೊಂಡಿದ್ದರು    

ಪ್ರಜಾವಾಣಿ ವಾರ್ತೆ

ಮಂಗಳೂರು: ಸಾಹಿತ್ಯದ ಬೆಳವಣಿಗೆಯಲ್ಲಿ ಸಹೃದಯರ ಪಾತ್ರ ಮುಖ್ಯ. ಉತ್ತಮ ಓದುಗರ ಸ್ಪಂದನೆಯಿಂದ ಸಾಹಿತ್ಯ ರಚನೆ ಸಾಕಾರಗೊಳ್ಳುತ್ತದೆ ಎಂದು ಹಂಪಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಸಚಿವ ಪ್ರೊ.ಎ ಸುಬ್ಬಣ್ಣ ರೈ ಅಭಿಪ್ರಾಯಪಟ್ಟರು.

ಕರಾವಳಿ ಲೇಖಕಿಯರ ವಾಚಕಿಯರ (ಕಲೇವಾ) ಸಂಘ ಶನಿವಾರ ಆಯೋಜಿಸಿದ್ದ ದತ್ತಿ ಪ್ರಶಸ್ತಿ ಪ್ರದಾನ ಮತ್ತು ಪುಸ್ತಕ ಬಹುಮಾನ ಸಮಾರಂಭದಲ್ಲಿ ಮಾತನಾಡಿದ ಅವರು ಓದುಗರಿಂದ ಉತ್ತಮ ಅಭಿಪ್ರಾಯ ವ್ಯಕ್ತವಾದಾಗ ಸಾಹಿತಿಗೆ ಪ್ರೇರಣೆ ಸಿಕ್ಕಿದಂತಾಗುತ್ತದೆ. ಪ್ರಶಸ್ತಿಗೆ ಆಯ್ಕೆಯಾದಾಗ ಸಮಾಜಿಕ ಬದ್ಧತೆಯ ಅರಿವಾಗುತ್ತದೆ, ಕೃತಿಗೆ ಹೆಚ್ಚು ಗೌರವವೂ ಸಿಗುತ್ತದೆ ಎಂದರು.

ADVERTISEMENT

ಸುಖಲಾಕ್ಷಿ ಸುವರ್ಣ ಅವರಿಗೆ ಸಾರಾ ಅಬೂಬಕ್ಕರ್ ದತ್ತಿ ಪ್ರಶಸ್ತಿ ಮತ್ತು ಕ್ಯಾಥರಿನ್ ರಾಡ್ರಿಗಸ್ ಅವರಿಗೆ ತೌಳವ ಸಿರಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಚಂದ್ರಭಾಗಿ ರೈ ದತ್ತಿ ಪುಸ್ತಕ ಬಹುಮಾನಕ್ಕೆ ಆಯ್ಕೆಯಾದ ಮುರ್ತುಜಾ ಬೇಗಂ ಬಂದಿರಲಿಲ್ಲ.

ಸಾಹಿತಿ, ನಿವೃತ್ತ ಉಪನ್ಯಾಸಕಿ ಸರಸ್ವತಿ ಕುಮಾರಿ ಮಾತನಾಡಿ ಉದ್ಯೋಗ, ಸಂಶೋಧನೆ, ಗಂಡ–ಮಕ್ಕಳ ಪಾಲನೆ, ವಾಹನ ಚಾಲನೆ ಇತ್ಯಾದಿ ಹಲವು ಕೆಲಸಗಳನ್ನು ಮಾಡುವ ಹೆಣ್ಣು ಕೈಕಾಲು ಸೋಲುವಷ್ಟು, ಚಪ್ಪಲಿ ಸವೆಯುವಷ್ಟು ಕಷ್ಟಪಡುತ್ತಾಳೆ. ಆದರೂ ಹೋದಲ್ಲೆಲ್ಲ ‘ನೀನು ಸ್ತ್ರೀ’ ಎಂದು ಹೇಳಿ ಮಾತನಾಡುವವರೇ ಹೆಚ್ಚು. ಮಹಿಳೆಯ ಗುಣಗಳನ್ನು ದೌರ್ಬಲ್ಯ ಎಂದು ಪರಿಗಣಿಸುವ ಈ ಸಮಾಜದಲ್ಲಿ ಸಾಮರ್ಥ್ಯ ಅರಿತು ಮುಂದೆ ಸಾಗಬೇಕು ಎಂದು ಹೇಳಿದರು.

ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿದ್ದ ಸುರತ್ಕಲ್ ಗೋವಿಂದದಾಸ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ.‌ಕೃಷ್ಣಮೂರ್ತಿ ಮಾತನಾಡಿ ಸುಖಲಾಕ್ಷಿ ಅವರ ಮುಂಬೈ ಮತ್ತು ಮಹಿಳೆ ಸಂಶೋಧನಾ ಕೃತಿ ತಳ ಸಮುದಾಯದ ಇತಿಹಾಸದ ಮರುನಿರೂಪಣೆಯ ಆಯಾಮದಿಂದ ಮುಖ್ಯವಾಗುಯುತ್ತದೆ ಎಂದರು. ಕೃತಿ ಆಯ್ಕೆ ಮಾಡಿದ ಲೇಖಕ ವಸಂತ ಕುಮಾರ್ ಪೆರ್ಲ ಮಾತನಾಡಿದರು. ಕಲೇವಾ ಸಂಘದ ಅಧ್ಯಕ್ಷೆ ಶಕುಂತಳಾ ಶೆಟ್ಟಿ, ಕಾರ್ಯದರ್ಶಿ ಯಶೋದಾ ಮೋಹನ್, ಉಪಾಧ್ಯಕ್ಷೆ ಅರುಣಾ ನಾಗರಾಜ್, ಸಾರಾ ಅಬೂಬಕ್ಕರ್ ಅವರ ಸೊಸೆ ಸಾಯಿದಾ ರಹೀಂ ಪಾಲ್ಗೊಂಡಿದ್ದರು. 

Highlights - ಕರಾವಳಿ ಲೇಖಕರಿಂದ ಶ್ರೀಮಂತಗೊಂಡ ತುಳು ನಾಟಕ ಸಾಹಿತ್ಯ  ಮಹಿಳೆ ರೆಕ್ಕೆಬಿಚ್ಚಿ ಹಾರಲು ಸಂಘ ಸಂಸ್ಥೆಗಳ ಬೆಂಬಲ ಬೇಕು

Cut-off box - ಮನೆ ಸಬ್‌ ಜೈಲ್‌ ಪತಿ ಮನೆ ಸೆಂಟ್ರಲ್ ಜೈಲ್! ಮಹಿಳೆಯ ಬದುಕು ಮನೆಯೊಳಗಿನ ವಿವಿಧ ಕೋಣೆಗಳ ಒಳಗೆ ಕಳೆದುಹೋಗುತ್ತದೆ. ಅದು ಒಂದು ರೀತಿಯಲ್ಲಿ ಕಂಪಾರ್ಟ್‌ಮೆಂಟ್ ಜೀವನ. ಆಕೆಗೆ ಜನಿಸಿದ ಮನೆ ಸಬ್‌ ಜೈಲ್ ಆದರೆ ಗಂಡನ ಮನೆ ಸೆಂಟ್ರಲ್ ಜೈಲ್ ಇದ್ದಂತೆ... ಹೀಗೆ ಹೇಳಿ ನಗೆಯುಕ್ಕಿಸಿ ಚಿಂತನೆಗೆ ಹಚ್ಚಿದವರು ಸರಸ್ವತಿ ಕುಮಾರಿ.  ಮಹಿಳೆಗೂ ತಾಕತ್ತಿದೆ ಸಾಮರ್ಥ್ಯ ಇದೆ ಎಂಬುದನ್ನು ತೋರಿಸಿಕೊಡಬೇಕಾಗಿದೆ ಎಂದ ಅವರು ಬಾಹ್ಯನೋಟದ ರೂಪದ ಆಚೆ ಇರುವ ಹೆಣ್ಣಿನ ಮನಸ್ಥಿತಿಯನ್ನು ಅರಿಯಬೇಕು. ಆಕೆಯನ್ನು ಸಹಯಾತ್ರಿಯಾಗಿ ಕರೆದುಕೊಂಡು ಹೋಗುವುದು ಬೇಡ. ಸಮಾನಯಾತ್ರಿಯಾಗಿ ಜೊತೆಗೂಡಿಸಬೇಕು ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.