ADVERTISEMENT

ನಿಷೇಧವಿದ್ದರೂ 20 ಪ್ರಯಾಣಿಕರೊಂದಿಗೆ ಧರ್ಮಸ್ಥಳಕ್ಕೆ ಬಂದಿದ್ದ ಬಸ್‌ ವಾಪಸ್‌

ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಬರುತ್ತಿದ್ದ ಸಾರಿಗೆ ಬಸ್‌

​ಪ್ರಜಾವಾಣಿ ವಾರ್ತೆ
Published 21 ಜೂನ್ 2021, 13:25 IST
Last Updated 21 ಜೂನ್ 2021, 13:25 IST
ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಹೋಗುತ್ತಿದ್ದ ಸಾರಿಗೆ ಬಸ್‌ ಅನ್ನು ಕೊಕ್ಕಡದಲ್ಲಿ ಪೊಲೀಸರು ತಡೆದಿರುವುದು
ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಹೋಗುತ್ತಿದ್ದ ಸಾರಿಗೆ ಬಸ್‌ ಅನ್ನು ಕೊಕ್ಕಡದಲ್ಲಿ ಪೊಲೀಸರು ತಡೆದಿರುವುದು   

ಉಜಿರೆ: ಬೆಂಗಳೂರಿನಿಂದ 20 ಪ್ರಯಾಣಿಕರೊಂದಿಗೆ ಧರ್ಮಸ್ಥಳಕ್ಕೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ ಅನ್ನು ಸೋಮವಾರ ಮಧ್ಯಾಹ್ನ ಕೊಕ್ಕಡದಲ್ಲಿ ಪೊಲೀಸರು ತಡೆದು, ವಾಪಸ್‌ ಕಳುಹಿಸಿದ್ದಾರೆ.

ಜಿಲ್ಲಾಧಿಕಾರಿಯ ನಿರ್ದೇಶನದಂತೆ ಬೆಳ್ತಂಗಡಿ ತಹಶೀಲ್ದಾರ್ ಮಹೇಶ್ ಜೆ. ಅವರ ಸೂಚನೆಯಂತೆ ಬಸ್‌ ಅನ್ನು ವಾಪಸ್‌ ಕಳುಹಿಸಲಾಗಿದೆ.

ಜುಲೈ 5ರ ವರೆಗೆ ಜಿಲ್ಲೆಯ ದೇವಸ್ಥಾನಗಳಿಗೆ ಯಾತ್ರಾರ್ಥಿಗಳ ಪ್ರವೇಶ ನಿಷೇಧಿಸಲಾಗಿದೆ. ಈ ಮಾಹಿತಿಯ ಕೊರತೆಯಿಂದ ಪ್ರವಾಸಿಗರು ಬೆಂಗಳೂರಿನಿಂದ ಬಸ್‍ನಲ್ಲಿ ಧರ್ಮಸ್ಥಳಕ್ಕೆ ಬಂದಿರುವುದಾಗಿ ತಿಳಿಸಿದ್ದಾರೆ.

ADVERTISEMENT

‌ದಕ್ಷಿಣ ಕನ್ನಡ ಜಿಲ್ಲೆಗೆ ಮುಖ್ಯ ಪ್ರವೇಶದ್ವಾರಗಳಾದ ಗುಂಡ್ಯ, ನಾರಾವಿ, ಕೊಕ್ಕಡ, ಚಾರ್ಮಾಡಿ ಮತ್ತು ಸಂಪಾಜೆ ಚೆಕ್‍ಪೋಸ್ಟ್‌ಗಳಲ್ಲಿ ಸೋಮವಾರ ಪೊಲೀಸರು ಕಟ್ಟುನಿಟ್ಟಾಗಿ ವಾಹನಗಳ ತಪಾಸಣೆ ನಡೆಸಿ, ಪ್ರವಾಸಿಗರ ವಾಹನಗಳನ್ನು ಹಿಂದೆ ಕಳುಹಿಸಿದ್ದಾರೆ.

‌ಚೆಕ್‌ಪೋಸ್ಟ್‌ಗಳಲ್ಲಿ ದಾಖಲೆ ಪತ್ರಗಳನ್ನು ಪರಿಶೀಲಿಸಿ, ಅನಿವಾರ್ಯ ಕಾರಣ ಅಗತ್ಯವಿದ್ದಲ್ಲಿ ಜಿಲ್ಲೆಗೆ ಪ್ರವೇಶಿಸಲು ಅನುಮತಿ ನೀಡಿದ್ದಾರೆ.

ಕೆಲ ಚೆಕ್‌ಪೋಸ್ಟ್‌ಗಳಲ್ಲಿ ಪೊಲೀಸರು ಮತ್ತು ಪ್ರವಾಸಿಗರ ನಡುವೆ ಮಾತಿನ ಚಕಮಕಿಯಾಗಿದೆ. ಆದರೂ ಪೊಲೀಸರು ನಿರ್ದಾಕ್ಷಿಣ್ಯವಾಗಿ ಜಿಲ್ಲಾಧಿಕಾರಿಯ ಆದೇಶವನ್ನು ಪಾಲಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.