ADVERTISEMENT

ಮಂಗಳೂರು | ಮಾರಕಾಸ್ತ್ರಗಳೊಂದಿಗೆ ಆಸ್ಪತ್ರೆ ಪ್ರವೇಶಕ್ಕೆ ಯತ್ನ: 50 ಮಂದಿ ಬಂಧನ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2019, 6:13 IST
Last Updated 20 ಡಿಸೆಂಬರ್ 2019, 6:13 IST
ಧ್ವನಿ ವರ್ಧಕಗಳ ಮೂಲಕ ಪ್ರಕಟಣೆ
ಧ್ವನಿ ವರ್ಧಕಗಳ ಮೂಲಕ ಪ್ರಕಟಣೆ   

ಮಂಗಳೂರು: ಪತ್ರಕರ್ತರ ಸೋಗಿನಲ್ಲಿ ವೆನ್ಲಾಕ್ ಆಸ್ಪತ್ರೆಗೆ ಪ್ರವೇಶಿಸಿದ 50 ಜನರನ್ನು ಪೊಲೀಸರು ಇಂದು ಮುಂಜಾನೆ ಬಂಧಿಸಿದರು. ನಿನ್ನೆ ನಡೆದ ಗೋಲೀಬಾರ್‌ನಲ್ಲಿ ಮೃತಪಟ್ಟವರ ಶವಗಳನ್ನು ವೆನ್ಲಾಕ್ ಆಸ್ಪತ್ರೆಯಲ್ಲಿ ಇರಿಸಲಾಗಿದೆ.

‘ಮಾರಕಾಸ್ತ್ರಗಳನ್ನು ಹೊಂದಿದ್ದ ಅವರನ್ನು ಕೇರಳದವರು ಎಂದು ಗುರುತಿಸಲಾಗಿದೆ’ ಎಂದು ಪೊಲೀಸರು ತಿಳಿಸಿದರು.

ಮತ್ತೆ ಲಾಠಿ ಚಾರ್ಜ್

ADVERTISEMENT

ಮಂಗಳೂರಿನ ಬಸ್‌ನಿಲ್ದಾಣದಲ್ಲಿ ಶುಕ್ರವಾರ ಬೆಳ್ಳಂಬೆಳಗ್ಗೆ ಮತ್ತೆ ಪೊಲೀಸರು ಲಾಠಿ ಚಾರ್ಜ್ ನಡೆದಿದ್ದು, ಬೇರೆ ಬೇರೆ ಊರುಗಳಿಂದ ಬಂದ ಪ್ರಯಾಣಿಕರು ಸಂಕಷ್ಟ ಎದುರಿಸುತ್ತಿದ್ದಾರೆ.

ಬೆಳಿಗ್ಗೆ 7 ಗಂಟೆ ನಂತರ ಇಲ್ಲಿಗೆ ಬಸ್‌ನಲ್ಲಿ ಬಂದ ಅನೇಕರು ನಿಲ್ದಾಣಕ್ಕೆ ಬಂದಿಳಿದಿದ್ದರು. ಕರ್ಫ್ಯೂ ಜಾರಿಯಲ್ಲಿರುವುದರಿಂದ ಹೆಚ್ಚಿನ ಜನ ಜಮಾವಣೆಯಾಗಿದ್ದನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್‌ ನಡೆಸಿದ್ದಾರೆ. ನಗರಕ್ಕೆ ಬರುತ್ತಿರುವ ಬಸ್‌ಗಳನ್ನು ಹೊರವಲಯದಲ್ಲಿಯೇ ನಿಲ್ಲಿಸಲಾಗುತ್ತಿದೆ. ಬಸ್‌ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.

ವಾಣಿಜ್ಯ ಪ್ರದೇಶಗಳಲ್ಲಿ ಜನಸಂಚಾರ ಸಂಪೂರ್ಣ ಸ್ತಬ್ಧವಾಗಿದ್ದು, ಉಳಿದ ಕಡೆಗಳಲ್ಲಿ ವಿರಳವಾದ ಜನ ಸಂಚಾರವಿದೆ. ಪೊಲೀಸರು ಧ್ವನಿವರ್ಧಕಗಳಲ್ಲಿ ಕರ್ಫ್ಯೂ ಜಾರಿಯಲ್ಲಿರುವುದರಿಂದ ಯಾರು ಮನೆಯಿಂದ ಹೊರಗೆ ಬರಬಾರದು’ ಎಂದು ಪ್ರಕಟಿಸುತ್ತಿದ್ದಾರೆ.

ಬಹುತೇಕ ಎಲ್ಲಾ ಅಂಗಡಿ ಮುಂಗಟ್ಟುಗಳು ಬಂದ್‌ ಆಗಿದ್ದು, ಕೆಲವು ಮೆಡಿಕಲ್‌ ಶಾಪ್‌ಗಳು ತೆರೆದಿವೆ. ಹೊರರೋಗಿಗಳ ಸೇವೆ ಸಂಪೂರ್ಣ ಬಂದ್‌ ಆಗಿದ್ದು, ತುರ್ತುಸೇವೆಗಳು ಮಾತ್ರ ಲಭ್ಯವಿದೆ.

ಗುಂಡೇಟಿಗೆ ಬಲಿಯಾದ ಇಬ್ಬರು ಯುವಕರ ಶವವನ್ನು ಹೈಲ್ಯಾಂಡ್‌ ಆಸ್ಪತ್ರೆಯಲ್ಲಿ ಇರಿಸಲಾಗಿದ್ದು, ಆಸ್ಪತ್ರೆಯ ಸುತ್ತ ಬಿಗಿ ಪೊಲೀಸ್‌ ಭದ್ರತೆ ಕೈಗೊಳ್ಳಲಾಗಿದೆ.

48 ಗಂಟೆ ಅಂತರ್ಜಾಲ ಸೇವೆ ಸ್ಥಗಿತ

‘ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಕೋಮು ಪ್ರಚೋದಕ ಸಂದೇಶಗಳು ಹರಿದಾಡುತ್ತಿದೆ. ಈ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಮಂಗಳೂರು ಕಮಿಷನರೇಟ್‌ ವ್ಯಾಪ್ತಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಡಿ.19 ರಾತ್ರಿ 10 ಗಂಟೆಯಿಂದ 48 ಗಂಟೆಗಳ ವರೆಗೆ ಮೊಬೈಲ್‌ ಇಂಟರ್‌ನೆಟ್‌ ಸೇವೆ ಸ್ಥಗಿತಗೊಳಿಸಲಾಗುವುದು’ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.