ದಸರಾ ಪ್ರಯುಕ್ತ ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇಗುಲದ ಆವರಣದಲ್ಲಿ ಸೋಮವಾರ ನಡೆದ ಹುಲಿಕುಣಿತ ಪ್ರದರ್ಶನ ಗಮನ ಸೆಳೆಯಿತು
ಚಿತ್ರ :ಫಕ್ರುದ್ದೀನ್ ಎಚ್
ಮಂಗಳೂರು: ಇಲ್ಲಿನ ಕುದ್ರೋಳಿ ಗೋಕರ್ಣನಾಥ ದೇವಸ್ಥಾನದಲ್ಲಿ ಶಾರದಾ ದೇವಿ ಹಾಗೂ ನವದುರ್ಗೆಯರ ಪ್ರತಿಷ್ಠಾಪನೆಯೊಂದಿಗೆ ‘ಮಂಗಳೂರು ದಸರಾ’ ಮಹೋತ್ಸವ ಸೋಮವಾರ ಆರಂಭವಾಯಿತು.
ಮುಗುಳ್ನಗೆ ಸೂಸುವ ಶಾರದಾ ದೇವಿಯ ಮೂರ್ತಿಯನ್ನು ಮಂಗಳ ವಾದ್ಯಗಳೊಂದಿಗೆ ದೇವಾಲಯದ ಪ್ರದಕ್ಷಿಣೆ ಹಾಕಿಸಿ ದರ್ಬಾರ್ ಸಭಾಂಗಣದಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು.
ಮಹಾಗಣಪತಿ, ಆದಿಶಕ್ತಿ, ಶೈಲಪುತ್ರಿ, ಸಿದ್ಧಿಧಾತ್ರಿ, ಮಹಾಗೌರಿ, ಮಹಾಕಾಳಿ, ಬ್ರಹ್ಮಚಾರಿಣಿ, ಕಾತ್ಯಾಯಿನಿ, ಸ್ಕಂದಮಾತಾ, ಚಂದ್ರಘಂಟಾ ಮೂರ್ತಿಗಳನ್ನು ಇಲ್ಲಿ ಪ್ರತಿಷ್ಠಾಪಿಸಲಾಗಿದೆ. ದೇವಿ ಮೆರವಣಿಗೆಯಲ್ಲಿ ಹುಲಿವೇಷ ತಂಡದವರು ಹುಲಿ ಕುಣಿತ ಸೇವೆ ಒಪ್ಪಿಸಿದರು.
ಕ್ಷೇತ್ರದ ಅಭಿವೃದ್ಧಿ ರೂವಾರಿ ಬಿ.ಜನಾರ್ದನ ಪೂಜಾರಿ ಉಪಸ್ಥಿತಿಯಲ್ಲಿ ರಾಮಕೃಷ್ಣ ಮಿಷನ್ನ ಜಿತಕಾಮಾನಂದಜಿ, ಬ್ರಹ್ಮಕುಮಾರೀಸ್ ಮುಖ್ಯಸ್ಥೆ ವಿಶ್ವೇಶ್ವರಿ ದಸರಾ ಮಹೋತ್ಸವಕ್ಕೆ ಚಾಲನೆ ನೀಡಿದರು.
ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಆಡಳಿತಕ್ಕೊಳಪಟ್ಟ ಉಡುಪಿ ಜಿಲ್ಲೆಯ ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನದ ಅದ್ಧೂರಿ ‘ಉಚ್ಚಿಲ ದಸರಾ’ಕ್ಕೆ ಉಡುಪಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರೋಹಿಣಿ ಸಿಂಧೂರಿ ಚಾಲನೆ ನೀಡಿದರು. ಉಚ್ಚಿಲ ದಸರಾ ರೂವಾರಿ ಜಿ.ಶಂಕರ್ ಉಪಸ್ಥಿತಿಯಲ್ಲಿ ಶಾರದಾ ದೇವಿ, ನವದುರ್ಗೆಯರ ಪ್ರತಿಷ್ಠಾಪನೆ ನೆರವೇರಿತು.
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಶಾರದಾ ಮಠದಲ್ಲಿ ನವರಾತ್ರಿ ಪ್ರಯುಕ್ತ ಹಂಸವಾಹನ ಅಲಂಕಾರ ಮಾಡಲಾಗಿತ್ತು. ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಮಠದಲ್ಲಿ ಶ್ರೀಚಕ್ರ ನವಾಹರಣ ಪೂಜೆ, ಕುಮಾರಿ ಪೂಜೆ, ಸುವಾಸಿನಿ ಪೂಜೆ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.