ಮಂಗಳೂರು: ದುಬೈನಿಂದ ಹೊರಟ ನೂರಾರು ಜನರು ತವರು ನೆಲದಲ್ಲಿ ಬಂಧುಗಳನ್ನು ಸೇರುವ ತವಕದಲ್ಲಿದ್ದ ಸಂದರ್ಭದಲ್ಲಿಯೇ ನಡೆದ ಘೋರ ದುರಂತಕ್ಕೆ ಈಗ 11 ನೇ ವರ್ಷ. ಟೇಬಲ್ಟಾಪ್ ವಿಮಾನ ನಿಲ್ದಾಣದ ಮೇಲೆ ಇಳಿಯಬೇಕಿದ್ದ ವಿಮಾನ ನೇರವಾಗಿ ಪ್ರಪಾತಕ್ಕೆ ಜಾರಿದ್ದರಿಂದ 158 ಮಂದಿ ಮೃತಪಟ್ಟಿದ್ದರು.
ಇಲ್ಲಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 2010ರ ಮೇ 22ರ ಬೆಳಿಗ್ಗೆ 6.15ಕ್ಕೆ ನಡೆದ ವಿಮಾನ ಅಪಘಾತ, ನಾಗರಿಕ ವಿಮಾನಯಾನ ಕ್ಷೇತ್ರದಲ್ಲಿ ಮರೆಯಲಾಗದ ದುರಂತ.
ಅಂದು ಬೆಳಿಗ್ಗೆ ಸೂರ್ಯೋದಯದ ಹೊತ್ತಿನಲ್ಲಿಯೇ ತವರು ನೆಲದಲ್ಲಿ ಇಳಿಯುವ ಸಂತಸದಲ್ಲಿದ್ದ ವಿಮಾನ ಪ್ರಯಾಣಿಕರ ಜೀವನದಲ್ಲಿ ಬಹುದೊಡ್ಡ ದುರಂತ ನಡೆದೇ ಹೋಯಿತು. ಅದರಲ್ಲಿ 135 ಮಂದಿ ವಯಸ್ಕರು, 19 ಮಕ್ಕಳು ಹಾಗೂ 4 ಶಿಶುಗಳು, 6 ಮಂದಿ ವಿಮಾನ ಸಿಬ್ಬಂದಿ ಸೇರಿ ಒಟ್ಟು 166 ಮಂದಿ ಪ್ರಯಾಣಿಸುತ್ತಿದ್ದರು. 8 ಮಂದಿ ಬದುಕುಳಿದಿದ್ದರು. ಮೃತಪಟ್ಟವರಲ್ಲಿ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಕೇರಳದವರಿದ್ದರು.
ನಿದ್ದೆಯ ಮಂಪರಿನಲ್ಲಿದ್ದ ಪ್ರಯಾಣಿಕರು ಹೊರ ಬರಲಾಗದೇ ಅಗ್ನಿಯ ಜ್ವಾಲೆಗೆ ಸಿಕ್ಕು ಕರಕಲಾಗಿದ್ದರು. ಜಿಗಿದು ಪ್ರಾಣ ಉಳಿಸಿಕೊಳ್ಳಲು ಯತ್ನಿಸಿದ ಕೆಲವರೂ ಬೆಂಕಿಯ ಉಂಡೆಗಳ ನಡುವೆ ಸಿಕ್ಕು ಕೊನೆಯುಸಿರೆಳೆದಿದ್ದರು. ಸತ್ತವರಲ್ಲಿ ಕೆಲವರ ಗುರುತನ್ನೂ ಪತ್ತೆ ಮಾಡುವುದು ಕಷ್ಟವಾಗಿತ್ತು. ಗುರುತು ಸಿಗದವರ ಮೃತದೇಹಗಳ ಸಾಮೂಹಿಕ ಅಂತ್ಯಸಂಸ್ಕಾರ ನಡೆಸಲಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.