ADVERTISEMENT

ಮಂಗಳೂರು | ಈಡೇರದ ಬಸ್ ತಂಗುದಾಣದ ಬೇಡಿಕೆ: ಜಂಕ್ಷನ್‌ನಲ್ಲಿ ಸಂಚಾರ ದಟ್ಟಣೆ

ಸಂಧ್ಯಾ ಹೆಗಡೆ
Published 26 ಅಕ್ಟೋಬರ್ 2025, 5:13 IST
Last Updated 26 ಅಕ್ಟೋಬರ್ 2025, 5:13 IST
<div class="paragraphs"><p>ಪದವು ಜಂಕ್ಷನ್‌ನಲ್ಲಿ ಸಂಚಾರ ದಟ್ಟಣೆ</p></div>

ಪದವು ಜಂಕ್ಷನ್‌ನಲ್ಲಿ ಸಂಚಾರ ದಟ್ಟಣೆ

   

ಮಂಗಳೂರು: ಕದ್ರಿ ಉದ್ಯಾನ, ವಾಣಿಜ್ಯ ಉದ್ಯಮಗಳ ಜೊತೆಗೆ ಹೆಚ್ಚು ವಸತಿ ಸಮುಚ್ಚಯಗಳು ಕದ್ರಿ ಉತ್ತರ ವಾರ್ಡ್‌ನಲ್ಲಿವೆ. 

ಈ ವಾರ್ಡ್‌ ವ್ಯಾಪ್ತಿಯಲ್ಲಿ ಬಹುತೇಕ ಎಲ್ಲ ರಸ್ತೆಗಳು ಕಾಂಕ್ರೀಟ್ ಅಥವಾ ಡಾಂಬರ್ ರಸ್ತೆಗಳಾಗಿ ಮಾರ್ಪಟ್ಟಿವೆ. ಮಳೆಯ ಕಾರಣಕ್ಕೆ ಕೆಲವು ರಸ್ತೆಗಳಲ್ಲಿ ಹೊಂಡಗಳು ಸೃಷ್ಟಿಯಾಗಿವೆ. ಕದ್ರಿ ಜೋಗಿ ಮಠಕ್ಕೆ ತೆರಳುವ ರಸ್ತೆಯಲ್ಲಿ ನಡುನಡುವೆ ಹೊಂಡಗಳು ಇಣುಕಿವೆ.

ADVERTISEMENT

ಸ್ಮಾರ್ಟ್ ಸಿಟಿ ಅಡಿಯಲ್ಲಿ ನವೀಕರಣಗೊಂಡಿರುವ ಕದ್ರಿ ಉದ್ಯಾನ ನಿರ್ವಹಣೆ ಕೊರತೆಯಿಂದ ಬಳಲುತ್ತಿದೆ. ವಾಣಿಜ್ಯ ಉದ್ದೇಶಕ್ಕೆ ನಿರ್ಮಿಸಿರುವ ಅಂಗಡಿ ಮಳಿಗೆಗಳಲ್ಲಿ ಹಲವಾರು ಮಳಿಗೆಗಳು ಇನ್ನೂ ಬಾಗಿಲು ಮುಚ್ಚಿಯೇ ಇವೆ. ಉದ್ಯಾನ ಮುಖ್ಯ ದ್ವಾರ, ಸುತ್ತಮುತ್ತ ಮಾತ್ರ ಸ್ವಚ್ಛತೆ ಕಾಪಾಡಲಾಗಿದೆ. ಒಳಗಿರುವ ಜಿಮ್ ಉಪಕರಣಗಳಲ್ಲಿ ಕೆಲವಷ್ಟು ತುಕ್ಕು ಹಿಡಿದು, ನಿರುಪಯುಕ್ತವಾಗಿವೆ. ನಿತ್ಯ ಸಂಜೆ ಇಲ್ಲಿಗೆ ವಾಕಿಂಗ್ ಬರುವವರು ಜಿಮ್‌ ಉಪಕರಣಗಳನ್ನು ಗರಿಷ್ಠ ಪ್ರಮಾಣದಲ್ಲಿ ಬಳಕೆ ಮಾಡುತ್ತಾರೆ ಎಂದು ಉದ್ಯಾನಕ್ಕೆ ಬಂದಿದ್ದ ಹಿರಿಯ ನಾಗರಿಕರೊಬ್ಬರು ಹೇಳಿದರು.

ರಾಷ್ಟ್ರೀಯ ಹೆದ್ದಾರಿ 66 ಹಾದು ಹೋಗುವ ಪದವು ಜಂಕ್ಷನ್‌ನಲ್ಲಿ ಸಮಸ್ಯೆ ತಪ್ಪಿದ್ದಲ್ಲ. ನಾಲ್ಕು ದಿಕ್ಕುಗಳಿಂದ ವಾಹನಗಳು ಬರುತ್ತವೆ. ನಿತ್ಯ ರಸ್ತೆ ದಾಟುವಾಗ ವಿದ್ಯಾರ್ಥಿಗಳು ಅನುಭವಿಸುವ ಪಡಿಪಾಟಲು ಅಷ್ಟಿಷ್ಟಲ್ಲ. ಬಸ್ ಕಾಯುವವರಿಗೆ ನಿಲ್ಲಲು ವ್ಯವಸ್ಥೆ ಇಲ್ಲ. ಇರುವ ಬಸ್ ತಂಗುದಾಣವನ್ನೂ ತೆರವುಗೊಳಿಸಲಾಗಿದೆ. ರಸ್ತೆ ಬದಿಯಲ್ಲಿ ನಿಲ್ಲುವವರು ಬಸ್‌ ಬಂದಾಗ ಓಡುವ ಭರದಲ್ಲಿ ಬಿದ್ದು ಪೆಟ್ಟು ಮಾಡಿಕೊಳ್ಳುತ್ತಾರೆ. ಇಂತಹ ಘಟನೆಗಳು ಆಗುತ್ತಲೇ ಇರುತ್ತವೆ ಎಂದು ಅಲ್ಲಿನ ಅಂಗಡಿಯವರೊಬ್ಬರು ಬೇಸರಿಸಿದರು.

ಪೊಲೀಸ್ ಇಲಾಖೆ ಇಲ್ಲಿಗೆ ಕಾಯಂ ಆಗಿ ಒಬ್ಬರು ಸಂಚಾರಿ ಪೊಲೀಸ್ ನಿಯೋಜಿಸಬೇಕು. ಅವರು, ಸರ್ಕಲ್‌ನಲ್ಲಿಯೇ ನಿಂತು ಸಂಚಾರ ನಿರ್ವಹಣೆ ಮಾಡುವಂತಾಗಬೇಕು ಎಂದು ಅವರು ಸಲಹೆ ನೀಡಿದರು.

‘ಕದ್ರಿ ದೇವಾಲಯದ ಸುತ್ತಲಿನ ಬಡಾವಣೆಗಳಲ್ಲಿ ಕೆಲವೆಡೆ ಮಾತ್ರ ಒಳಚರಂಡಿ ಕಾಮಗಾರಿ ನಡೆದಿದೆ. ಒಳಚರಂಡಿ ಸಮಸ್ಯೆಯಿಂದ ದುರ್ವಾಸನೆಯ ಗೋಳು ತಪ್ಪಿದ್ದಲ್ಲ. ಸಮರ್ಪಕ ಚರಂಡಿ ಇಲ್ಲದ ಪರಿಣಾಮ ಮಳೆಗಾಲದಲ್ಲಿ ನೀರು ಉಕ್ಕುತ್ತದೆ. ಮಹಾನಗರ ಪಾಲಿಕೆ ಚರಂಡಿ ನಿರ್ವಹಣೆಯನ್ನೂ ಸರಿಯಾಗಿ ಮಾಡುವುದಿಲ್ಲ. ಒಳಚರಂಡಿ ಸಮಸ್ಯೆಯನ್ನು ಶೀಘ್ರ ಪರಿಹರಿಸಬೇಕು’ ಎಂದು ದೇವಾಲಯ ಸಮೀಪದ ನಿವಾಸಿಯೊಬ್ಬರು ಒತ್ತಾಯಿಸಿದರು.

ಕದ್ರಿ ಪಾರ್ಕ್ ಆವರಣದಲ್ಲಿ ಕಸದ ರಾಶಿ ಬಿದ್ದಿರುವುದು
ಪದವು ಜಂಕ್ಷನ್‌ನಲ್ಲಿ ಬಸ್ ತಂಗುದಾಣ ಇಲ್ಲದೆ ಪ್ರಯಾಣಿಕರಿಗೆ ಸಮಸ್ಯೆಯಾಗಿದೆ. ಬಸ್ ತಂಗುದಾಣ ನಿರ್ಮಿಸಿ ವಿದ್ಯಾರ್ಥಿಗಳು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು.
ಜಯಕುಮಾರ್ ರಿಕ್ಷಾ ಚಾಲಕ

‘ಒಳರಸ್ತೆಗಳ ಅಭಿವೃದ್ಧಿ; ಜನರಿಗೆ ಅನುಕೂಲ’

ಗಂಗಪನಪಳ್ಳ ಕೆರೆ ಕದ್ರಿ ಕಂಬಳ ಸಮೀಪ ಕೆರೆ ಅಭಿವೃದ್ಧಿಪಡಿಸಲಾಗಿದೆ. ಕದ್ರಿ ದೇವಸ್ಥಾನ ನ್ಯೂ ರೋಡ್ ಕಾಂಕ್ರಿಟೀಕರಣಗೊಳಿಸಲಾಗಿದೆ. ಬಹುವರ್ಷಗಳ ಬೇಡಿಕೆಯಾಗಿದ್ದ ಒಳರಸ್ತೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಕಾರ್ಮಿಕರ ಭವನದಿಂದ ಗುಂಡಳಿಕೆ ಸಂಪರ್ಕ ಕಲ್ಪಿಸುವ ರಸ್ತೆ ನಿರ್ಮಿಸಲಾಗಿದೆ. ಇದರಿಂದ ಬಹಳಷ್ಟು ಜನರಿಗೆ ಉಪಯೋಗವಾಗಿದೆ. ಶರಬತ್‌ಕಟ್ಟೆ ಬಳಿ ರಸ್ತೆ ವಿಸ್ತರಣೆ ಮಾಡಲಾಗಿದೆ. ಸ್ಮಾರ್ಟ್ ಸಿಟಿ ಯೋಜನೆಯಡಿ ಶಾಸಕರ ನೇತೃತ್ವದಲ್ಲಿ ಕದ್ರಿ ಪಾರ್ಕ್ ಅಭಿವೃದ್ಧಿಗೊಳಿಸಲಾಗಿದೆ ಎಂದು ವಾರ್ಡ್‌ನ ನಿಕಟಪೂರ್ವ ಸದಸ್ಯೆ ಶಕೀಲಾ ಕಾವ ಹೇಳಿದರು. ಈಡನ್ ಕ್ಲಬ್ ಒಳ ಆವರಣದಲ್ಲಿ ರಸ್ತೆ ವಿಸ್ತರಣೆಯಿಂದ ಜನರಿಗೆ ಸಂಚಾರಕ್ಕೆ ಅನುಕೂಲವಾಗಿದೆ. ಬಹುತೇಕ ಎಲ್ಲ ರಸ್ತೆಗಳನ್ನು ಕಾಂಕ್ರೀಟ್ ರಸ್ತೆಗಳನ್ನಾಗಿ ಪರಿವರ್ತಿಸಲಾಗಿದೆ. ಒಳಚರಂಡಿ ಸಮಸ್ಯೆ ಬಹುತೇಕ ನಿವಾರಣೆಯಾಗಿದೆ. ಕೆಲವು ಕಡೆ ಮಾತ್ರ ಉಳಿದಿದೆ ಎಂದು ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.