ಸುಬ್ರಹ್ಮಣ್ಯ: ಬಿಳಿನೆಲೆ ಶಾಲಾ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ 14 ವರ್ಷ, 17ವರ್ಷ ವಯೋಮಾನದ ಬಾಲಕ– ಬಾಲಕಿಯರ ಕೊಕ್ಕೊ ಟೂರ್ನಿಯ 4 ವಿಭಾಗದಲ್ಲೂ ಮಂಗಳೂರು ಉತ್ತರ ತಾಲ್ಲೂಕು ಪ್ರಥಮ ಸ್ಥಾನ ಗಳಿಸಿ ಚಾಂಪಿಯನ್ ಆಗಿ ಹೊರಹೊಮ್ಮಿ ರಾಜ್ಯಮಟ್ಟಕ್ಕೆ ಆಯ್ಕೆಯಾಯಿತು.
14ವರ್ಷ ವಯೋಮಾನದ ಬಾಲಕರ ವಿಭಾಗದಲ್ಲಿ ಮಂಗಳೂರು ಉತ್ತರ ಪ್ರಥಮ ಸ್ಥಾನಿಯಾದರೆ, ಪುತ್ತೂರು ತಾಲ್ಲೂಕು ತಂಡವು ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು. 14 ವರ್ಷದ ವಯೋಮಾನದ ಬಾಲಕಿಯರ ವಿಭಾಗದಲ್ಲಿ ಮಂಗಳೂರು ಉತ್ತರ ಚಾಂಪಿಯನ್, ದಕ್ಷಿಣ ದ್ವಿತೀಯ ಸ್ಥಾನ ಗೆದ್ದುಕೊಂಡಿತು. 17 ವರ್ಷ ವಯಸ್ಸಿನ ಬಾಲಕರ ವಿಭಾಗದಲ್ಲಿ ಮಂಗಳೂರು ಉತ್ತರ ಪ್ರಥಮ ಸ್ಥಾನಿ ಪಡೆದರೆ ಪುತ್ತೂರು ತಾಲ್ಲೂಕು ತಂಡವು ದ್ವಿತೀಯ ಸ್ಥಾನಕ್ಕೆ ಸಮಾಧಾನ ಪಟ್ಟುಕೊಂಡಿತು. 17 ವರ್ಷ ವಯಸ್ಸಿನ ಬಾಲಕಿಯರ ವಿಭಾಗದಲ್ಲಿ ಪುತ್ತೂರು ತಾಲ್ಲೂಕು ತಂಡ ಮಂಗಳೂರು ಉತ್ತರ ತಂಡದ ಮುಂದೆ ಕೈಚೆಲ್ಲಿತು.
14 ವರ್ಷ ವಯಸ್ಸಿನ ಬಾಲಕರ ವಿಭಾಗದಲ್ಲಿ ಆಲ್ರೌಂಡರ್ ಆಟಗಾರ ಮೋಕ್ಷಿತ್ ಆರ್.ಗೌಡ, ಉತ್ತಮ ಕ್ಯಾಚರ್ ಅರ್ಫಾಜ್, ಉತ್ತಮ ರನ್ನರ್ ಮಯಾನ್ಸ್ ವೈಯಕ್ತಿಕ ಬಹುಮಾನ ಪಡೆದರು.
14 ವರ್ಷ ವಯಸ್ಸಿನವರ ವಿಭಾಗದಲ್ಲಿ ಸವ್ಯಸಾಚಿ ಆಲ್ರೌಂಡರ್ ಆಗಿ ಕನ್ನಿಕಾ ಶೆಟ್ಟಿ, ಉತ್ತಮ ಕ್ಯಾಚರ್ ಆಗಿ ಹಲೀಫಾ, ಉತ್ತಮ ರನ್ನರ್ ಜಾಹ್ನವಿ ವೈಯಕ್ತಿಕ ಬಹುಮಾನ ಗಳಿಸಿದರು. 17 ವರ್ಷ ವಯಸ್ಸಿನ ಬಾಲಕರ ವಿಭಾಗದಲ್ಲಿ ಆಲ್ ರೌಂಡರ್ ಆಗಿ ವರ್ಷಿತ್, ಉತ್ತಮ ಕ್ಯಾಚರ್ ಆಗಿ ಸಾದ್, ಉತ್ತಮ ರನ್ನರ್ ಆಗಿ ಆಕಾಶ್ ಬಹುಮಾನಕ್ಕೆ ಭಾಜನರಾದರು. 17 ವರ್ಷ ವಯಸ್ಸಿನ ಬಾಲಕಿಯರ ವಿಭಾಗದಲ್ಲಿ ಆಲ್ ರೌಂಡರ್ ಆಗಿ ಶೈಲಿ, ಉತ್ತಮ ಕ್ಯಾಚರ್ ಆಗಿ ಯೋಗ್ಯ, ಉತ್ತಮ ರನ್ನರ್ ಆಗಿ ಜಯಲಕ್ಷ್ಮಿ ಬಹುಮಾನ ಗಳಿಸಿದರು.
ಶಾಲಾ ಆಡಳಿತ ಮಂಡಳಿ ಕಾರ್ಯದರ್ಶಿ ಶ್ರೀಕೃಷ್ಣ ಶರ್ಮ, ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಚಕ್ರಪಾಣಿ, ಉಪವಲಯ ಅರಣ್ಯಾಧಿಕಾರಿ ಅಪೂರ್ವ ಅಚ್ರಪ್ಪಾಡಿ, ನಿವೃತ್ತ ಮುಖ್ಯ ಶಿಕ್ಷಕರಾದ ಗೋಪಾಲಕೃಷ್ಣ ಬಿ., ಹಿರಿಯಣ್ಣ ಗೌಡ, ಕ್ರೀಡಾ ಸಂಯೋಜಕ ವಿನಯ ಕೆ., ಗೋಪಾಲಕೃಷ್ಣ ಪ್ರೌಢಶಾಲೆ ಮುಖ್ಯ ಶಿಕ್ಷಕ ಸತ್ಯಶಂಕರ ಭಟ್, ವೇದವ್ಯಾಸ ವಿದ್ಯಾಲಯದ ಮುಖ್ಯ ಶಿಕ್ಷಕ ಪ್ರಶಾಂತ್ ಬಿ. ಬಹುಮಾನ ವಿತರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.