ADVERTISEMENT

ಪಬ್‌ಜಿ ಸೇಡಿನ ಕೊಲೆ ಪ್ರಕರಣ| ಹತ್ಯೆ ಮಾಡಿದ ವಿಷಯ ತಂದೆಗೆ ಹೇಳಿದ್ದ ಬಾಲಕ

‘ಪಬ್‌ಜಿ’ ಸೇಡು: ಆಕೀಫ್‌ ಕೊಲೆ ಪ್ರಕರಣ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2021, 2:57 IST
Last Updated 6 ಏಪ್ರಿಲ್ 2021, 2:57 IST
ಆಕೀಫ್
ಆಕೀಫ್   

ಉಳ್ಳಾಲ: ‘ಪಬ್‌ಜಿ’ ಮಾದರಿಯ ಆಟದ ಸಂಘರ್ಷದಲ್ಲಿ ಕೆ.ಸಿ.ರೋಡನ್‌ನ ಆಕೀಫ್ (12)ನನ್ನು ಕೊಲೆ ಮಾಡಿರುವ ಕುರಿತು ಕಾನೂನು ಸಂಘರ್ಷಕ್ಕೆ ಒಳಪಟ್ಟ ಬಾಲಕನು ತನ್ನ ತಂದೆಗೆ ತಿಳಿಸಿದ್ದರೂ, ಆತ ಬಚ್ಚಿಟ್ಟಿರುವುದನ್ನು ಪೊಲೀಸರು ಭೇದಿಸಿದ್ದಾರೆ.

ಈ ಆರೋಪದಲ್ಲಿ ತಂದೆ, ಕೆ.ಸಿ.ರೋಡ್ ಪಿಲಿಕೂರು ನಿವಾಸಿ ಸಂತೋಷ್‌ (45)ನನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಎನ್ನಲಾಗಿದೆ. ಬಾಲಕನನ್ನು ಪೊಲೀಸರು ಬಾಲಕರ ಬಾಲಮಂದಿರ (ರಿಮ್ಯಾಂಡ್‌ ಹೋಂ)ಗೆ ಕಳುಹಿಸಿದ್ದಾರೆ.

ಆಕೀಫ್‌ನ ಹತ್ಯೆ ನಡೆಸಿ ಮನೆಗೆ ಬಂದಿದ್ದ ಬಾಲಕನು, ತನ್ನ ತಂದೆಯಲ್ಲಿ ವಿಚಾರವನ್ನು ತಿಳಿಸಿದ್ದನು. ಆದರೆ, ಈ ಘಟನೆ ಕುರಿತು ಯಾರಿಗೂ ತಿಳಿಸದಂತೆ ತಂದೆ ಸಂತೋಷ್‌ ಹೇಳಿದ್ದು, ಮನೆಯಲ್ಲಿಯೇ ರಕ್ಷಣೆ ನೀಡಿದ್ದಾನೆ. ಸಂತೋಷ್, 30 ವರ್ಷಗಳಿಂದ ತಲಪಾಡಿಯಲ್ಲೇ ಇದ್ದು, ಲಾರಿ ಚಾಲಕನಾಗಿದ್ದಾನೆ.

ADVERTISEMENT

ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನನ್ನು ಉಡುಪಿ ದೊಡ್ಡಣಗುಡ್ಡೆಯ ಬಾಲ ನ್ಯಾಯಮಂಡಳಿ ಮುಂದೆ ಸೋಮವಾರ ಹಾಜರುಪಡಿಸಲಾಗಿದೆ. ಬಳಿಕ ಬಾಲಕರ ಬಾಲಮಂದಿರಕ್ಕೆ ಕಳುಹಿಸಲಾಗಿದೆ.

ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನ ಮನೆಯವರಿಗೆ ಸ್ಥಳೀಯರು ಬೆದರಿಕೆ ಹಾಕುತ್ತಿದ್ದು, ಭದ್ರತೆ ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಮನೆಯಲ್ಲಿ ಬಾಲಕನ ತಾಯಿ ಮತ್ತು ಸಹೋದರ ಮಾತ್ರ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.