ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರಗಳಲ್ಲಿನ ಬಡ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳು ಈ ಬಾರಿ ಲ್ಯಾಪ್ಟಾಪ್ ಸೌಲಭ್ಯದಿಂದ ವಂಚಿತರಾಗುವ ಸಾಧ್ಯತೆ ಹೆಚ್ಚಾಗಿದ್ದು, ತೀವ್ರ ಅಸಮಾಧಾನ ವ್ಯಕ್ತವಾಗಿದೆ.
ಮಂಗಳೂರು ವಿಶ್ವವಿದ್ಯಾಲಯದ ಅಧೀನದಲ್ಲಿ ಮಂಗಳ ಗಂಗೋತ್ರಿ (ಕ್ಯಾಂಪಸ್) ಹಾಗೂ ಮಂಗಳೂರಿನ ಹಂಪನಕಟ್ಟಾದ ವಿಶ್ವವಿದ್ಯಾಲಯ ಕಾಲೇಜು, ಮಡಿಕೇರಿಯ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜು ಹಾಗೂ ಚಿಕ್ಕಅಳುವಾರದ ಸ್ನಾತಕೋತ್ತರ ಕೇಂದ್ರಗಳಿವೆ. ಇಲ್ಲಿ ಕಲಿಯುವ ಬಡ ಪರಿಶಿಷ್ಟ ಜಾತಿ ಮತ್ತು ಪಂಗಡದ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಮೂರ
ನೇ ಸೆಮಿಸ್ಟರ್ನಲ್ಲಿ ಲ್ಯಾಪ್ಟಾಪ್ಗಳನ್ನು ನೀಡಲಾಗುತ್ತಿತ್ತು. ಆದರೆ, 2019–20ರ ಶೈಕ್ಷಣಿಕ ವರ್ಷದಲ್ಲಿನ ಮೂರನೇ ಸೆಮಿಸ್ಟರ್ (2019ರ ಜೂನ್–ಡಿಸೆಂಬರ್) ವಿದ್ಯಾರ್ಥಿಗಳಿಗೆ ಇನ್ನೂ ಲ್ಯಾಪ್ಟಾಪ್ ದೊರೆತಿಲ್ಲ.
ವಿಶ್ವವಿದ್ಯಾಲಯವು ಈಗಾಗಲೇ ಪರೀಕ್ಷಾ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಸೆಪ್ಟೆಂಬರ್ 16ರಿಂದ ಪರೀಕ್ಷೆಗಳು ನಡೆಯಲಿದ್ದು, ಸೆ.1ರಿಂದ 15ರ ತನಕ ಆನ್ಲೈನ್ ತರಗತಿಗಳು ನಡೆಯಲಿವೆ.
‘ನಾವು ತೀವ್ರ ಸಂಕಷ್ಟದಲ್ಲಿದ್ದೇವೆ. ಈಗ ಆನ್ಲೈನ್ ತರಗತಿಗಳು ಹಾಗೂ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುವಲ್ಲಿ ಸಮಸ್ಯೆಗೆ ಸಿಲುಕಿದ್ದೇವೆ’ ಎಂದು ವಿದ್ಯಾರ್ಥಿಯೊಬ್ಬರು ಅಳಲು ತೋಡಿಕೊಂಡರು.
ವಿಶ್ವವಿದ್ಯಾಲಯ ವ್ಯಾಪ್ತಿಗೆ ಕೊಡಗು ಜಿಲ್ಲೆಯೂ ಒಳಪಟ್ಟಿದ್ದು, ಮಡಿಕೇರಿ ಮತ್ತು ಚಿಕ್ಕಅಳುವಾರದಲ್ಲಿ ಸ್ನಾತಕೋತ್ತರ ಕೇಂದ್ರಗಳಿವೆ. ಸತತ ಮಳೆ, ಭೂ ಕುಸಿತ ಮತ್ತಿತರ ಪ್ರಕೃತಿ ವಿಕೋಪದ ಸಮಸ್ಯೆಯಿಂದ ಕೊಡಗಿನಲ್ಲಿ ವಿದ್ಯುತ್, ನೆಟ್ವರ್ಕ್ ಮತ್ತಿತರ ಸಮಸ್ಯೆಗಳು ಹೆಚ್ಚಾಗಿವೆ.
‘ಪರೀಕ್ಷೆಗೆ ಸಿದ್ಧತೆ ನಡೆಸಲೂ ತೊಂದರೆ ಎದುರಿಸುತ್ತಿದ್ದೇವೆ’ ಎಂದು ಅಲ್ಲಿನ ವಿದ್ಯಾರ್ಥಿಗಳು ಸಮಸ್ಯೆ ತೋಡಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.