ಮಂಗಳೂರು: ಹಳೆಬಂದರು ಸಗಟು ಮಾರುಕಟ್ಟೆಯ ಹಮಾಲಿ ಕಾರ್ಮಿಕರು, ಮೀನುಗಾರಿಕಾ ಧಕ್ಕೆಯ ಕಾರ್ಮಿಕರು, ಸರಕು ಸಾಗಾಟ ಲಾರಿ ಮತ್ತು ಟೆಂಪೊ ಚಾಲಕರು ಹಾಗೂ ಮೀನುಗಾರರು ಹೆಚ್ಚಿನ ಸಂಖ್ಯೆಯಲ್ಲಿರುವ ಹಳೆ ಬಂದರಿನ ಹಳೆ ಪಾಲಿಕೆ ಕಚೇರಿ ಬಳಿಯ ಇಂದಿರಾ ಕ್ಯಾಂಟೀನ್ನಲ್ಲಿ ಆಹಾರ ವಿತರಣೆ ಆರಂಭಿಸಬೇಕು ಎಂದು ಒತ್ತಾಯಿಸಿ ಬಂದರು ಶ್ರಮಿಕರ ಸಂಘ ಮತ್ತು ಡಿವೈಎಫ್ಐ ಬಂದರು ಘಟಕದ ನೇತೃತ್ವದಲ್ಲಿ ಎದುರು ಪ್ರತಿಭಟನೆ ಗುರುವಾರ ನಡೆಯಿತು.
ಬಂದರು ಶ್ರಮಿಕರ ಸಂಘದ ಅಧ್ಯಕ್ಷ ಬಿ.ಕೆ ಇಮ್ತಿಯಾಜ್, ‘ನಗರದ ಆರ್ಥಿಕತೆಗೆ ಆಧಾರವಾದ ಬಂದರು ಅಭಿವೃದ್ಧಿಯಾಗಿರುವುದು ಕಾರ್ಮಿಕರ ಶ್ರಮದಿಂದ. ಇಲ್ಲಿನ ಕಾರ್ಮಿಕರಿಗೆ ಅನುಕೂಲ ಕಲ್ಪಿಸಲು ಇಂದಿರಾ ಕ್ಯಾಂಟೀನ್ ನಿರ್ಮಿಸಲಾಗಿದೆ. ಕಾಮಗಾರಿ ಮುಗಿಸಿ ವರ್ಷಗಳು ಕಳೆದರೂ ಇಲ್ಲಿ ಆಹಾರ ವಿತರಣೆ ಆರಂಭಿಸದೇ ಬಡ ಕಾರ್ಮಿಕರಿಗೆ ಅನ್ಯಾಯ ಮಾಡಲಾಗಿದೆ’ ಎಂದರು
ಡಿವೈಎಫ್ಐ ಜಿಲ್ಲಾ ಘಟಕದ ಕಾರ್ಯದರ್ಶಿ ಸಂತೋಷ್ ಬಜಾಲ್, ‘ಬಂದರು ಪ್ರದೇಶದ ಇಂದಿರಾ ಕ್ಯಾಂಟೀನ್ನಲ್ಲಿ ಆಹಾರ ಪೂರೈಕೆ ಆರಂಭಿಸದಿರುವುದಕ್ಕೆ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆ ಕಾರಣ’ ಎಂದರು.
ಬಂದರು ಶ್ರಮಿಕರ ಸಂಘದ ಪ್ರಮುಖರಾದ ಫಾರೂಕ್ ಉಳ್ಳಾಲಬೈಲ್, ಶಮೀರ್ ಬೋಳಿಯಾರ್, ಮಾಧವ ಕಾವೂರು, ಮೋಹನ ಕುಂಪಲ, ಹರೀಶ್ ಕೆರೆಬೈಲ್, ಅಕ್ಬರ್, ಶರೀಫ್ ಕುಪ್ಪೆಪದವು, ಹಕೀಮ್ ಬೆಂಗ್ರೆ, ಇಮ್ರಾನ್, ಯು.ಪಿ ಅಬ್ಬಾಸ್, ಹನೀಫ್, ಡಿವೈಎಫ್ಐ ಮುಖಂಡರಾದ ತಯ್ಯೋಬ್ ಬೆಂಗ್ರೆ, ಅಶ್ರಫ್ ಬಂದರ್, ನೌಶಾದ್ ಬೆಂಗ್ರೆ, ಹನೀಫ್ ಬೆಂಗ್ರೆ, ರಿಜ್ವಾನ್ ಕೊಳ್ನಾಡ್, ಖಾದರ್ ಅದ್ಯಪಾಡಿ, ಆಟೊ ರಿಕ್ಷಾ ಚಾಲಕರ ಸಂಘದ ಮುಖಂಡ ಅನ್ಸಾರ್ ಬಜಾಲ್, ಟೆಂಪೊ ಚಾಲಕರ ಸಂಘದ ಮುಖಂಡ ನಿಸಾರ್ ಬೆಂಗ್ರೆ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.