ಉಳ್ಳಾಲ (ದಕ್ಷಿಣ ಕನ್ನಡ): ಮಂಜನಾಡಿ ಗ್ರಾಮದ ಮೊಂಟೆಪದವು ಪಂಬದ ಹಿತ್ತಿಲು ಕೋಡಿ ಕೊಪ್ಪಲ ಎಂಬಲ್ಲಿ ಧಾರಕಾರ ಮಳೆಗೆ ಗುಡ್ಡವೊಂದು ಕುಸಿದು ಮನೆಯೊಂದು ಸಂಪೂರ್ಣ ಕುಸಿದು ಓರ್ವ ಮಹಿಳೆ ಮೃತಪಟ್ಟು , ಇಬ್ಬರು ಗಾಯಗೊಂಡಿದ್ದಾರೆ. ಒಬ್ಬ ಮಹಿಳೆ ಹಾಗೂ ಇಬ್ಬರು ಮಣ್ಣಿನಡಿಯಲ್ಲಿ ಸಿಲುಕಿಕೊಂಡಿದ್ದು, ರಕ್ಷಣಾ ಕಾರ್ಯ ಭರದಿಂದ ನಡೆಯುತ್ತಿದೆ.
ಮೃತಪಟ್ಟ ಮಹಿಳೆಯನ್ನು ಪ್ರೇಮ(58) ಎಂದು ಗುರುತಿಸಲಾಗಿದೆ. ಅವರ ಪತಿ ಕಾಂತಪ್ಪ ಅವರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಾಂತಪ್ಪ ಪೂಜಾರಿ ಅವರ ಪುತ್ರ ಸೀತಾರಾಮ ಅವರು ಅದೃಷ್ಟವಶಾತ್ ಪಾರಾಗಿದ್ದಾರೆ.
ಮನೆಯೊಳಗೆ ಸಿಲುಕಿದ ತಾಯಿ, ಇಬ್ಬರು ಮಕ್ಕಳು:
ಗುಡ್ಡ ಕುಸಿದು ಮನೆಯ ಒಂದು ಭಾಗದಲ್ಲಿ ಮಲಗಿದ್ದ ಸೀತಾರಾಮ ಅವರ ಪತ್ನಿ ಅಶ್ವಿನಿ ಹಾಗೂ ಇಬ್ಬರು ಪುಟ್ಟ ಮಕ್ಕಳು ( 3 ಹಾಗೂ 2 ವರ್ಷದ ಮಕ್ಕಳು) ಕುಸಿದ ಮನೆಯೊಳಗೆ ಸಿಲುಕಿಕೊಂಡಿದ್ದಾರೆ.
ಮುಂದುವರಿದ ರಕ್ಷಣಾ ಕಾರ್ಯ:
ಮುಂಜಾನೆ ನಾಲ್ಕು ಗಂಟೆಗೆ ಸುಮಾರಿಗೆ ಘಟನೆ ನಡೆದಿದ್ದು, ಕೂಡಲೇ ಸ್ಥಳೀಯರು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದರು. ಆದರೆ ಮನೆಯು ಸಂಪೂರ್ಣ ಕುಸಿದ ಪರಿಣಾಮ ರಕ್ಷಣಾ ಕಾರ್ಯ ಕಷ್ಟವಾಗಿತ್ತು. ಬಳಿಕ ಸ್ಥಳಕ್ಕೆ ಎನ್ ಡಿ ಆರ್ ಎಫ್, ಎಸ್ ಡಿಆರ್ ಪಿ, ಅಗ್ನಿಶಾಮಕ ದಳದ ಸಿಬ್ಬಂದಿಗಳು, ಪೊಲೀಸರು ರಕ್ಷಣಾ ಕಾರ್ಯ ಮುಂದುವರಿಸಿದ್ದು ತಾಯಿ ಹಾಗೂ ಇಬ್ಬರು ಮಕ್ಕಳ ರಕ್ಷಣೆಗೆ ಪಣ ತೊಟ್ಟಿದ್ದಾರೆ.
ಮನೆಯೊಳಗೆ ಸಿಲುಕಿರುವ ಮಹಿಳೆಯು ಕೊಂಚ ಮಾತಾಡುತ್ತಿದ್ದು, ಒಂದು ಮಗು ಅಳುವ ಶಬ್ದ ಕೇಳುತಿದ್ದು. ರಕ್ಷಣಾ ಕಾರ್ಯಕ್ಕೆ ಎಲ್ಲರೂ ಸಹಕರಿಸುತಿದ್ದು, ಮಳೆಯಿಂದಾಗಿ ಅಡ್ಡಿಯಾಗಿದೆ.
ಎಡಿಸಿ ಸಂತೋಷ್ ಕುಮಾರ್, ತಹಶಿಲ್ದಾರ್ ಪುಟ್ಟರಾಜು, ಡಿಸಿಪಿ ಸಿದ್ದಾರ್ಥ್ ಘೋಯಲ್, ಪ್ರಾಕೃತಿಕ ವಿಕೋಪದ ನಿರ್ವಹಣಾಧಿಕಾರಿ ವಿಜಯ್, ಕಾರ್ಯನಿರ್ವಹಣಾಧಿಕಾರಿ ಗುರುದತ್, ಮಂಜನಾಡಿ ಪಂಚಾಯತ್ ಅಧ್ಯಕ್ಷೆ ಸರೋಜಿನಿ, ನರಿಂಗಾನ ಪಂಚಾಯತ್ ಅಧ್ಯಕ್ಷ ನವಾಝ್ ನರಿಂಗಾನ, ಮುಖಂಡರಾದ ಐವನ್ ಡಿಸೋಜ, ಸತೀಶ್ ಕುಂಪಲ, ಸಂತೋಷ್ ಬೋಳಿಯಾರ್, ರಮೇಶ್ ಶೆಟ್ಟಿ ಬೋಳಿಯಾರ್ , ಎನ್ ಎಸ್ ಕರೀಂ ಮೊದಲಾದವರು ಸ್ಥಳದಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.