ಮಂಗಳೂರು: ನಗರದ ವೈದ್ಯಕೀಯ ಸೌಲಭ್ಯಗಳ ಬಗ್ಗೆ ತೃಪ್ತಿ ವ್ಯಕ್ತಪಡಿಸಿರುವ ಬಹರೇನ್, ಇದೀಗ ವೈದ್ಯಕೀಯ ಪ್ರವಾ ಸೋದ್ಯಮ ಅಭಿವೃದ್ಧಿಗೆ ಉತ್ತೇಜನ ನೀಡಲು ಉತ್ಸುಕವಾಗಿದೆ. ಬಹರೇನ್ ರಾಜಕುಮಾರಿ ಶೈಖಾ ನೂರಾ ಬಿಂಟ್ ಖಲೀಫಾ ಅಲ್ ಖಲೀಫಾ ಅವರು ನಗರದ ಇಂಡಿಯಾನಾ ಆಸ್ಪತ್ರೆಗೆ ಭೇಟಿ ನೀಡಿ, ಪ್ರಾಥಮಿಕ ಚರ್ಚೆ ನಡೆಸಿದ್ದಾರೆ.
ಒಮನ್ ಹಾಗೂ ಬಹರೇನ್ ಸರ್ಕಾರಗಳ ಆರೋಗ್ಯ, ರಕ್ಷಣೆ ಹಾಗೂ ಕಾರ್ಮಿಕ ಸಚಿವಾಲಯದ ಉನ್ನತ ಅಧಿಕಾರಿಗಳೊಂದಿಗೆ ಆಸ್ಪತ್ರೆಗೆ ಭೇಟಿ ನೀಡಿದ ರಾಜಕುಮಾರಿ, ಉಭಯ ಸರ್ಕಾರಗಳ ಆರೋಗ್ಯ ಯೋಜನೆಗಳಡಿ ಇಲ್ಲಿನ ಇಂಡಿಯಾನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ದೊರೆಯುವಂತೆ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.
ಇಂಡಿಯಾನಾ ಆಸ್ಪತ್ರೆಯ ವ್ಯವ ಸ್ಥಾಪಕ ನಿರ್ದೇಶಕ ಡಾ. ಯುಸೂಫ್ ಕುಂಬ್ಳೆ, ಅಧ್ಯಕ್ಷ ಡಾ. ಅಲಿ ಕುಂಬ್ಳೆ, ಉಪಾಧ್ಯಕ್ಷ ಅಬ್ದುಲ್ ಲತೀಫ್ ಉಪ್ಪಳ ಅವರೊಂದಿಗೆ ವಿಸ್ತೃತ ಚರ್ಚೆ ನಡೆಸಿದ ಬಹರೇನ್ ರಾಜಕುಮಾರಿ, ಬಹರೇನ್ ಆರೋಗ್ಯ ಸಚಿವಾಲಯದ ಅಧಿಕಾರಿಗಳ ನಿಯೋಗ ಶೀಘ್ರದಲ್ಲಿಯೇ ಇಂಡಿಯಾನಾ ಆಸ್ಪತ್ರೆಗೆ ಭೇಟಿ ನೀಡಲಿದ್ದು, ಅಲ್ಲಿ ಸರ್ಕಾರಗಳ ಪ್ರಾಯೋಜಿತ ಆರೋಗ್ಯ ಯೋಜನೆಗಳ ಅಡಿ ಬರುವ ರೋಗಿ ಗಳಿಗೆ ಇಂಡಿಯಾನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಒದಗಿಸುವ ನಿಟ್ಟಿನಲ್ಲಿ ಅಂತಿಮ ಹಂತದ ಪ್ರಕ್ರಿಯೆ ನಡೆಸಲಿದ್ದಾರೆ ಎಂದರು.
ಒಮನ್ ಮತ್ತು ಬಹರೇನ್ನಲ್ಲಿ ಉದ್ಯಮ ನಡೆಸುತ್ತಿರುವ ಬದ್ರ ಸಮಾ ಗ್ರೂಪ್ ಆಫ್ ಹಾಸ್ಪಿಟಲ್ನ ವ್ಯವಸ್ಥಾಪಕ ನಿರ್ದೇಶಕ ಅಬ್ದುಲ್ ಲತೀಫ್ ಉಪ್ಪಳ ಅವರು, ಈ ಚರ್ಚೆಗೆ ವೇದಿಕೆ ಒದಗಿಸಿದ್ದಾರೆ. ಮಂಗಳೂರಿನ ಆರೋಗ್ಯ ಸೇವೆಗಳ ಕುರಿತು ಅಲ್ಲಿನ ಸರ್ಕಾರಗಳಿಗೆ ಮನವರಿಕೆ ಮಾಡಿದ ಅಬ್ದುಲ್ ಲತೀಫ್ ಉಪ್ಪಳ, ರಾಜಕುಮಾರಿ ನೇತೃತ್ವದ ನಿಯೋಗವನ್ನು ಕರೆದುಕೊಂಡು ಬಂದಿದ್ದಾರೆ.
ಬದ್ರ ಸಮಾ ಗ್ರೂಪ್ನ ಅಲ್ ಹಿಲಾಲ್ ಆಸ್ಪತ್ರೆಯು ಇಂಡಿಯಾನಾ ಆಸ್ಪತ್ರೆ ಹಾಗೂ ಬಹರೇನ್ ಸರ್ಕಾರಗಳ ನಡುವಿನ ಆರೋಗ್ಯ ಒಪ್ಪಂದದ ಭಾಗವಾಗಲಿದೆ. ಬದ್ರ ಸಮಾ ಸಮೂಹ ಆಸ್ಪತ್ರೆಯ ಸಿಇಒ ಡಾ. ಶಫೀಕ್ ಕೂಡ ಈ ಚರ್ಚೆಯಲ್ಲಿ ಭಾಗವಹಿಸಿದ್ದರು.
*
ಇಂಡಿಯಾನಾ ಆಸ್ಪತ್ರೆಯು ಭಾರತದ ಉತ್ಕೃಷ್ಟ ವೈದ್ಯಕೀಯ ಸೇವೆ ನೀಡುವ ಆಸ್ಪತ್ರೆಗಳಲ್ಲಿ ಒಂದಾಗಿದ್ದು, ವೈದ್ಯಕೀಯ ಪ್ರವಾಸೋದ್ಯಮ ಅಭಿವೃದ್ಧಿಗೆ ಉತ್ಸುಕರಾಗಿದ್ದೇವೆ.
-ಶೈಖಾ ನೂರಾ ಬಿಂಟ್ ಖಲೀಫಾ ಅಲ್ ಖಲೀಫಾ, ಬಹರೇನ್ ರಾಜಕುಮಾರಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.