ADVERTISEMENT

ಪುತ್ತೂರು: ವಧು–ವರರ ತಾಂಬೂಲ ಶಾಸ್ತ್ರ, ಮಂಗಳ ವಸ್ತು ವಿತರಣೆ 

ಪುತ್ತಿಲ ಪರಿವಾರದ ಉಚಿತ ಸಾಮೂಹಿಕ ವಿವಾಹ: 25 ಜೋಡಿ ನೋಂದಣಿ   

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2025, 4:35 IST
Last Updated 11 ನವೆಂಬರ್ 2025, 4:35 IST
ಪುತ್ತೂರಿನ ಪುತ್ತಿಲ ಪರಿವಾರ ಸೇವಾ ಟ್ರಸ್ಟ್, ಶ್ರೀನಿವಾಸ ಕಲ್ಯಾಣ ಮಹೋತ್ಸವ ಸಮಿತಿ ಜಂಟಿ ಆಶ್ರಯದಲ್ಲಿ ನಡೆಯುವ ಉಚಿತ ಸಾಮೂಹಿಕ ವಿವಾಹಕ್ಕೆ ಪೂರ್ವಭಾವಿಯಾಗಿ ವಧು ವರರ ತಾಂಬೂಲ ಶಾಸ್ತ್ರ, ಮಂಗಳ ವಸ್ತು ವಿತರಣೆ ಕಾರ್ಯಕ್ರಮ ನಡೆಯಿತು
ಪುತ್ತೂರಿನ ಪುತ್ತಿಲ ಪರಿವಾರ ಸೇವಾ ಟ್ರಸ್ಟ್, ಶ್ರೀನಿವಾಸ ಕಲ್ಯಾಣ ಮಹೋತ್ಸವ ಸಮಿತಿ ಜಂಟಿ ಆಶ್ರಯದಲ್ಲಿ ನಡೆಯುವ ಉಚಿತ ಸಾಮೂಹಿಕ ವಿವಾಹಕ್ಕೆ ಪೂರ್ವಭಾವಿಯಾಗಿ ವಧು ವರರ ತಾಂಬೂಲ ಶಾಸ್ತ್ರ, ಮಂಗಳ ವಸ್ತು ವಿತರಣೆ ಕಾರ್ಯಕ್ರಮ ನಡೆಯಿತು   

ಪುತ್ತೂರು: ಇಲ್ಲಿನ ಪುತ್ತಿಲ ಪರಿವಾರ ಸೇವಾ ಟ್ರಸ್ಟ್, ಶ್ರೀನಿವಾಸ ಕಲ್ಯಾಣ ಮಹೋತ್ಸವ ಸಮಿತಿ ಆಶ್ರಯದಲ್ಲಿ ನ. 29 ಮತ್ತು 30ರಂದು ನಡೆಯುಲಿರುವ 3ನೇ ವರ್ಷದ ಶ್ರೀನಿವಾಸ ಕಲ್ಯಾಣೋತ್ಸವ, ಹಿಂದವಿ ಸಾಮ್ರಾಜ್ಯೋತ್ಸವ ಸಂದರ್ಭ ನಡೆಯುವ ಉಚಿತ ಸಾಮೂಹಿಕ ವಿವಾಹಕ್ಕೆ ಪೂರ್ವಭಾವಿಯಾಗಿ ವಧು– ವರರ ತಾಂಬೂಲ ಶಾಸ್ತ್ರ, ಮಂಗಳ ವಸ್ತು ವಿತರಣೆ ಕಾರ್ಯಕ್ರಮ ನಗರದ ಹೊರವಲಯದ ಮುಕ್ರಂಪಾಡಿ ಸುಭದ್ರ ಕಲ್ಯಾಣ ಮಂಟಪದಲ್ಲಿ ಸೋಮವಾರ ನಡೆಯಿತು.

ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಸ್ಥಾಪಕ ಅರುಣ್ ಕುಮಾರ್ ಪುತ್ತಿಲ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪುರೋಹಿತ ಶ್ರೀವತ್ಸ ಕೆದಿಲಾಯ ಧಾರ್ಮಿಕ ವಿಧಿ ವಿಧಾನ ನೆರವೇರಿಸಿದರು. ಸಾಮೂಹಿಕ ವಿವಾಹಕ್ಕೆ ನೋಂದಣಿ ಮಾಡಿಕೊಂಡಿರುವ ವಧು– ವರರು, ಅವರ ಕುಟುಂಬಿಕರ ಸಮ್ಮುಖದಲ್ಲಿ ತಾಂಬೂಲ ಶಾಸ್ತ್ರ ನೆರವೇರಿಸಿ, ನಿಶ್ಚಿತಾರ್ಥ ಮಾಡಲಾಯಿತು. ಸೀರೆ, ರವಿಕೆ ಕಣ, ಅಂಗಿ, ಧೋತಿ ಸೇರಿದಂತೆ ಮಂಗಳ ವಸ್ತುಗಳನ್ನು ವಿತರಿಸಲಾಯಿತು.

25 ಜೋಡಿ ವಧು– ವರರು ನೋಂದಣಿ ಮಾಡಿಕೊಂಡಿದ್ದು, ಈ ಪೈಕಿ 14 ಜೋಡಿಯ ತಾಂಬೂಲ ಶಾಸ್ತ್ರ ನಡೆಯಿತು. ಉಳಿದ ಜೋಡಿಗಳ ದಾಖಲೆ ಕ್ರೋಡೀಕರಣ ಪ್ರಕ್ರಿಯೆ ನಡೆಯುತ್ತಿದ್ದು, ಅದಾದ ಬಳಿಕ ಅವರ ತಾಂಬೂಲ ಶಾಸ್ತ್ರ ನಡೆಯುವುದು ಎಂದು ಸಂಘಟಕರು ತಿಳಿಸಿದರು.

ADVERTISEMENT

ನಮ್ಮ ಟ್ರಸ್ಟ್‌ನಿಂದ 600 ಜನರಿಗೆ ನೆರವು ನೀಡಲಾಗಿದೆ. 26 ಯುವ ಗುಂಪುಗಳಿಗೆ ಉದ್ಯೋಗ ಅವಕಾಶ ಕಲ್ಪಿಸಲಾಗಿದ್ದು, 4,700 ಮಂದಿ ದೇಶದ ನಾನಾ ಕಡೆ ಉದ್ಯೋಗ ಪಡೆದಿದ್ದಾರೆ. ಅರುಣ ಸಾರಥಿ ಸಂಘಟನೆಯ ಮೂಲಕ ₹2.60 ಲಕ್ಷ ಧನಸಹಾಯ ನೀಡಲಾಗಿದೆ ಎಂದು ಅರುಣ್ ಕುಮಾರ್ ಪುತ್ತಿಲ ತಿಳಿಸಿದರು.

ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಅಧ್ಯಕ್ಷ ನರಸಿಂಹ ಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಾಧ್ಯಕ್ಷ ಪ್ರಾಣೇಶ್ ಕೆಮ್ಮಾಯಿ, ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಅಧ್ಯಕ್ಷ ಶ್ರೀರಾಮ ಭಟ್ ಪಾತಾಳ, ಸ್ವಾಗತ ಸಮಿತಿ ಅಧ್ಯಕ್ಷ ಭೀಮಯ್ಯ ಭಟ್, ಕಾರ್ಯದರ್ಶಿ ಪ್ರೇಮ್‌ರಾಜ್, ಸಹ ಸಂಚಾಲಕ ಉಮೇಶ್ ಕೋಡಿಬೈಲು, ಮುಖಂಡರಾದ ರೂಪೇಶ್, ಪ್ರೇಮಾ ರಾಧಾಕೃಷ್ಣ ರೈ, ಮಹಿಳಾ ಘಟಕದ ಸಂಚಾಲಕಿ ಪ್ರೇಮಾ ಮುಂಡೂರು ಭಾಗವಹಿಸಿದ್ದರು. ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಶೆಟ್ಟಿ ತಿಂಗಳಾಡಿ ಸ್ವಾಗತಿಸಿದರು. ರವಿ ಕುಮಾರ್ ರೈ ಕೆದಂಬಾಡಿ ಮಠ ನಿರೂಪಿಸಿದರು.

1.50 ಲಕ್ಷ ಜನರು ಭಾಗವಹಿಸುವ ನಿರೀಕ್ಷೆ

ಈ ವರ್ಷ ನಡೆಯುವ ಶ್ರೀನಿವಾಸ ಕಲ್ಯಾಣ ಮಹೋತ್ಸವದ ವೇಳೆ ಉಚಿತ ಸಾಮೂಹಿಕ ವಿವಾಹ ಮಾಡಿಸಲು ಸಂಕಲ್ಪ ಮಾಡಿದ್ದೆವು. ಆರ್‌ಎಸ್‌ಎಸ್‌ನ 100ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಈ ಯೋಜನೆ ಹಾಕಿಕೊಳ್ಳಲಾಗಿದ್ದು ಸಂಪ್ರದಾಯ ವಿಧಿಬದ್ಧವಾಗಿ ವಿವಾಹ ನೆರವೇರಿಸಲಾಗುತ್ತದೆ. ಅದರಂತೆ ಇಂದು ತಾಂಬೂಲ ಶಾಸ್ತ್ರ ಮಾಡಲಾಗಿದೆ. ಕರಿಮಣಿ ಕಾಲುಂಗುರ ವಧು– ವರರಿಗೆ ವಿವಾಹ ವಸ್ತ್ರ ಉಚಿತವಾಗಿ ನೀಡಿ ವಿವಾಹದ ಖರ್ಚು ಭರಿಸಲಾಗುವುದು ಎಂದು ಅರುಣ್ ಕುಮಾರ್ ಪುತ್ತಿಲ ತಿಳಿಸಿದರು. ಆಡಂಬರದ ವಿವಾಹ ವಿವಾಹದ ಬಳಿಕ ತಲೆದೋರುವ ಆರ್ಥಿಕ ಸಮಸ್ಯೆಗಳ ಬಗ್ಗೆ ಯೋಚಿಸಿ ಸಾಮೂಹಿಕ ವಿವಾಹ ಏರ್ಪಡಿಸಲಾಗಿದೆ. ಶ್ರೀನಿವಾಸ ಕಲ್ಯಾಣೋತ್ಸವ ಹಿಂದವಿ ಸಾಮ್ರಾಜ್ಯೋತ್ಸವ ಸಾಮೂಹಿಕ ವಿವಾಹ ಕಾರ್ಯಕ್ರಮಗಳು 2 ದಿನಗಳಲ್ಲಿ ನಡೆಯುವುದು. ಸುಮಾರು 1.50 ಲಕ್ಷ ಜನರು ಭಾಗವಹಿಸುವ ನಿರೀಕ್ಷೆಯಿದೆ.