ವಿಟ್ಲ: ವಿಟ್ಲ ಪೇಟೆಯಲ್ಲಿ ವಾಹನ ದಟ್ಟಣೆ ನಿಯಂತ್ರಿಸಲು ಪಟ್ಟಣ ಪಂಚಾಯಿತಿ ಕೈಗೊಂಡ ನಿರ್ಣಯಕ್ಕೆ ಸಾರ್ವಜನಿಕರ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ವಾಹನ ದಟ್ಟಣೆ ಗಮನಾರ್ಹವಾಗಿ ಇಳಿಮುಖವಾಗಿದ್ದು, ಜನರು ನಿಟ್ಟುಸಿರು ಬಿಟ್ಟಿದ್ದಾರೆ.
ವಿಟ್ಲದಲ್ಲಿ ವಾಹನ ದಟ್ಟಣೆ ಸಮಸ್ಯೆ ಪಟ್ಟಣ ಪಂಚಾಯಿತಿ ಮತ್ತು ಪೊಲೀಸ್ ಇಲಾಖೆಗೆ ಸವಾಲಾಗಿತ್ತು. ಈ ಹಿಂದೆ ಹಲವು ಬಾರಿ ವಾಹನ ಚಾಲಕರು, ಪೊಲೀಸರ ಸಭೆ ಕರೆದರೂ ಯಶಸ್ವಿಯಾಗಿಲ್ಲ. ಈಗ ಪಟ್ಟಣ ಪಂಚಾಯತಿ ವ್ಯಾಪಾರಿಗಳು, ಪೊಲೀಸರ ಸಭೆ ಕರೆದು ಚರ್ಚಿಸಿ ನಿರ್ಣಯ ತೆಗೆದುಕೊಂಡು ವಾಹನ ದಟ್ಟಣೆಗೆ ನಿಯಮ ರೂಪಿಸಿ, ಕಳೆದ ಸೋಮವಾರದಿಂದ ಅನುಷ್ಠಾನಗೊಳಿಸಿದೆ.
ಬಸ್ ನಿಲ್ದಾಣದ ಮುಂಭಾಗದಲ್ಲಿ ಯಾವುದೇ ವಾಹನ ನಿಲುಗಡೆಗೆ ಅವಕಾಶವಿಲ್ಲ. ಬಸ್ ನಿಲ್ದಾಣದ ಒಳಗೆ ದ್ವಿಚಕ್ರ ವಾಹನ ನಿಲುಗಡೆ ನಿಷೇಧಿಸಲಾಗಿದೆ. ಕ್ಯಾಂಪ್ಕೊ ರಸ್ತೆಯಲ್ಲಿ ವಾಹನ ಸಂಪೂರ್ಣ ನಿಲುಗಡೆ ನಿಷೇಧಿಸಲಾಗಿದೆ. ಮುಖ್ಯ ರಸ್ತೆಯ ಅಂಗಡಿಗಳ ಮುಂದೆ ಮಾಲೀಕರೂ ವಾಹನ ನಿಲ್ಲಿಸಬಾರದು. ಪ್ರಾರ್ಥನಾ ಮಂದಿರದ ಆಸುಪಾಸಿನಲ್ಲಿ 10 ಮೀ ವಾಹನ ನಿಲುಗಡೆ ಮಾಡಬಾರದು. ಎಲ್ಲೆಂದರಲ್ಲಿ ನಿಲುಗಡೆ ಮಾಡಿ ಹೋಗುವ ವಾಹನ ಸವಾರರ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸುವ ನಿಟ್ಟಿನಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.
ಒಂದು ಮಾರ್ಗದಲ್ಲಿ ಸಂಚರಿಸುವ ಬಸ್ ನಿಲ್ದಾಣದಲ್ಲಿ ಒಂದೇ ಇರುವ ಜತೆಗೆ ಕೇವಲ 15 ನಿಮಿಷ ಮಾತ್ರ ನಿಲ್ಲಬೇಕು. ಮುಖ್ಯ ರಸ್ತೆಯಲ್ಲಿ ಎಲ್ಲೂ ಬಸ್ ನಿಲ್ಲದೆ, ನಿಗದಿತ ನಿಲ್ದಾಣದ ಮುಂದೆಯೇ ನಿಲ್ಲಬೇಕು. ರಸ್ತೆಯಲ್ಲಿ ಬಸ್ ನಿಲ್ಲಿಸಿ ತಿಂಡಿ ತಿನ್ನುವುದಕ್ಕೆ ಚಾಲಕರು ಹೋಗುವಂತಿಲ್ಲ. ನಿಯಮ ಪಾಲಿಸದಿದ್ದರೆ, ಬಸ್ ಚಾಲಕರ ವಿರುದ್ಧವೇ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿದೆ.
ವಿಟ್ಲದ ಟ್ರಾಫಿಕ್ ಸಮಸ್ಯೆಗೆ ಶಾಶ್ವತವಾಗಿ ಅಂತ್ಯ ಹಾಡಲು ಈ ತೀರ್ಮಾನ ಕೈಗೊಳ್ಳಲಾಗಿದೆ. ಜಿಲ್ಲಾಧಿಕಾರಿ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ವ್ಯವಸ್ಥೆ ಕಲ್ಪಿಸಲಾಗಿದೆ. ನಿಯಮ ಉಲ್ಲಂಘಿಸಿದರೆ ಪೊಲೀಸ್ ಇಲಾಖೆ ಕಾನೂನು ಕ್ರಮ ಕೈಗೊಳ್ಳಲಿದೆ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಕರುಣಾಕರ ವಿ ಹೇಳುತ್ತಾರೆ.
‘ಜನರಿಂದ ಮೆಚ್ಚುಗೆ’
ಹಲವಾರು ವರ್ಷಗಳಿಂದ ವಾಹನ ದಟ್ಟಣೆಯಿಂದ ಜನರು ರೋಸಿ ಹೋಗಿದ್ದರು. ಇದನ್ನು ಮನಗಂಡು ಈ ತೀರ್ಮಾನಕ್ಕೆ ಬರಲಾಗಿದೆ. ನಮ್ಮ ತೀರ್ಮಾನಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದು ಜನರು ನೆಮ್ಮದಿಂದ ಪೇಟೆ ಬಂದು ಹೋಗುತ್ತಿದ್ದಾರೆ ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷ ಕರುಣಾಕರ ನಾಯ್ತೋಟ್ಟು ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.