ಮೂಲ್ಕಿ: ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವಿವಿಧ ಸೇವೆಗಳ ದರಪಟ್ಟಿಯನ್ನೇ ರಾಜಕೀಯವಾಗಿ ಬಳಸಿಕೊಂಡ ಬಿಜೆಪಿಯ ಅಪಪ್ರಚಾರದ ವಿರುದ್ಧ ಕೆಪಿಸಿಸಿ ಕಾರ್ಯದರ್ಶಿ ಮಿಥುನ್ ರೈ ನೇತೃತ್ವದಲ್ಲಿ ಎಕ್ಕಾರು ಕುಂಭಕಂಠೀಣಿ ದೈವಸ್ಥಾನದಿಂದ ಕಟೀಲು ಕ್ಷೇತ್ರಕ್ಕೆ ಭಕ್ತರೊಂದಿಗೆ ಪಾದಯಾತ್ರೆ ನಡೆಯಿತು.
ಮೂಲ್ಕಿ ಮತ್ತು ಮೂಡಬಿದಿರೆ ಬ್ಲಾಕ್ ಕಾಂಗ್ರೆಸ್ನಿಂದ ಪಾದಾಯತ್ರೆ ಸಂಘಟಿಸಲಾಗಿತ್ತು. ದೇವಳದಲ್ಲಿ ಪ್ರಾರ್ಥಿಸಿ ಆಡಳಿತ ಮಂಡಳಿಗೆ ಮನವಿ ಸಲ್ಲಿಸಿ ದರ ಪರಿಷ್ಕರಣೆಗೊಳಿಸಿ, ಕೆಲವೊಂದು ಸೇವೆಯ ದರವನ್ನು ಕಡಿಮೆ ಮಾಡಲು ವಿನಂತಿಸಿದರು.
ಮನವಿಯನ್ನು ಕಟೀಲು ದೇವಳದ ಸನತ್ ಕುಮಾರ್ ಶೆಟ್ಟಿ ಕೊಡೆತ್ತೂರು ಗುತ್ತು, ಹರಿನಾರಾಯಣದಾಸ ಆಸ್ರಣ್ಣ ಸ್ವೀಕರಿಸಿ, ಆಡಳಿತ ಮಂಡಳಿಯ ಸಭೆಯಲ್ಲಿ ತೀರ್ಮಾನಿಸಲಾಗುವುದು ಎಂದರು.
ಮಾಧ್ಯಮದೊಂದಿಗೆ ಮಾತನಾಡಿದ ಮಿಥುನ್ ರೈ, ಬಿಜೆಪಿಯು ಕಟೀಲು ದೇವಳದ ದರ ಪರಿಷ್ಕರಣೆ ಬಗ್ಗೆ ಅಪಪ್ರಚಾರ ನಡೆಸುತ್ತಿದೆ. ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿ ಬಗ್ಗೆ ಅಪಪ್ರಚಾರ ನಡೆಸಲು ದೇವಳದ ಆಡಳಿತ ಮಂಡಳಿಯ ನಿರ್ಧಾರವನ್ನು ಬಳಸಿಕಲಳ್ಳುತ್ತಿದೆ. ಸುಳ್ಳು ಪ್ರಚಾರ ನಡೆಸುತ್ತಿರುವ ಬಿಜೆಪಿಗೆ ಬಹಿರಂಗವಾಗಿ ಸತ್ಯ ಪ್ರಮಾಣಕ್ಕೆ ಆಹ್ವಾನವನ್ನು ನೀಡಿದ್ದರೂ ಅವರು ಸ್ವೀಕರಿಸಿಲ್ಲ. ಪಾದಯಾತ್ರೆಯ ಮೂಲಕ ಧರ್ಮ ಜಾಗೃತಿಯನ್ನು ನವರಾತ್ರಿಯ ಸಂದರ್ಭದಲ್ಲಿ ಮಾಡಿದ್ದೇವೆ. ಭಕ್ತರ ಮನಸ್ಸಿನಲ್ಲಿ ತಪ್ಪು ಗ್ರಹಿಕೆ ಆಗಬಾರದು ಎಂಬ ಉದ್ದೇಶದಿಂದ ಈ ಪಾದಯಾತ್ರೆ ನಡೆದಿದೆ ಎಂದರು.
ರಾಜ್ಯದ ಉಳಿದ ದೇವಸ್ಥಾನಗಳಲ್ಲೂ ಸ್ಥಳೀಯರ ಮೂಲಕ ದರ ಪರಿಷ್ಕರಣೆಗೆ ಮನವಿ ಮಾಡಲಾಗುವುದು ಎಂದರು.
ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಹರೀಶ್ ಕುಮಾರ್, ಕೆಪಿಸಿಸಿ ಸದಸ್ಯ ವಸಂತ ಬೆರ್ನಾಡ್, ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಕೋಟ್ಯಾನ್, ಮೂಡುಬಿದಿರೆಯ ಅಧ್ಯಕ್ಷ ಪ್ರವೀಣ್ಕುಮಾರ್ ಜೈನ್, ಮೂಲ್ಕಿ ಬ್ಲಾಕ್ನ ಉಸ್ತುವಾರಿ ಅನಿಲ್ ಕುಮಾರ್ ಪೂಜಾರಿ, ಪ್ರಮುಖರಾದ ಮೋನಪ್ಪ ಶೆಟ್ಟಿ ಎಕ್ಕಾರು, ಮಮತಾ ಗಟ್ಟಿ, ಮಂಜುನಾಥ ಕಂಬಾರ, ಪುರಂದರ ದೇವಾಡಿಗ, ರಕ್ಷಿತ್ ಪೂಜಾರಿ, ಅಶೋಕ್ ಪೂಜಾರ್, ಚಂದ್ರಹಾಸ ಸನಿಲ್, ಪ್ರವೀಣ್ ಪೂಜಾರಿ ಬೊಳ್ಳೂರು, ಧರ್ಮಾನಂದ ತೋಕೂರು, ಪುತ್ತುಬಾವ ಕಾರ್ನಾಡ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.