ಪುತ್ತೂರು: ‘ವ್ಯಾಟ್ಸ್ ಆ್ಯಪ್ ಗುಂಪುಗಳಲ್ಲಿ ಕೆಲವರು ಪಕ್ಷದ ನಾಯಕರ ಬಗ್ಗೆ ಕೆಟ್ಟದಾಗಿ ಬರೆಯುತ್ತಿದ್ದಾರೆ. ಅಂತಹ ಗುಂಪುಗಳಿಂದ ಕಾರ್ಯಕರ್ತರು ಹೊರಬರಬೇಕು. ಎರಡು ಮೂರು ಹುಳಗಳಿಂದ ಮಾತ್ರ ಈ ಕೃತ್ಯ ಆಗುತ್ತಿದ್ದು, ಆ ಹುಳಗಳು ಯಾರೆಂಬುದು ಗೊತ್ತಿದೆ. ಕೆಟ್ಟಹುಳಗಳ ಕಾಟ ಅತಿಯಾದರೆ ಮದ್ದು ಸಿಂಪರಣೆ ಮಾಡಬೇಕಾಗುತ್ತದೆ’ ಎಂದು ಶಾಸಕ ಅಶೋಕ್ ಕುಮಾರ್ ರೈ ಎಚ್ಚರಿಸಿದರು.
ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ನಡೆದ ಬ್ಲಾಕ್ ಮಟ್ಡದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
‘ಈಚೆಗೆ ಸುರಿದ ಭಾರಿ ಮಳೆಯಿಂದಾಗಿ ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸಂಭವಿಸಿರುವ ಹಾನಿಯ ಬಗ್ಗೆ ನನಗೆ ಗೊತ್ತಿದೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದೇನೆ. ನೊಂದವರಿಗೆ ಸರ್ಕಾರದಿಂದ ಪರಿಹಾರ ಕೊಡಿಸುವಲ್ಲಿ ನಿರತನಾಗಿದ್ದೇನೆ. ನಾನು ಘಟನಾ ಸ್ಥಳಗಳಿಗೆ ಭೇಟಿ ನೀಡಿ ರಾಜಕೀಯ ಮಾಡಿಲ್ಲ’ ಎಂದು ಸ್ಪಷ್ಟಪಡಿಸಿದರು.
‘ಎಲ್ಲೆಲ್ಲಿ ನಷ್ಟವಾಗಿದೆ ಎಂದು ಗ್ರಾಮ ಮಟ್ಟದಿಂದ ವರದಿಯನ್ನು ಪಡೆದುಕೊಂಡು, ಆ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದೇನೆ. ಸರ್ಕಾರದಿಂದ ಸೂಕ್ತ ಸ್ಪಂದನೆಯೂ ದೊರಕಿದೆ. ಮನೆ ಹಾನಿಯಾದವರಿಗೆ ಸರ್ಕಾರ ₹1.25 ಲಕ್ಷ, ಭಾಗಶ ಹಾನಿಯಾದರೆ ₹ 50 ಸಾವಿರ ಹಾಗೂ ಉಳಿದಂತೆ ₹ 10 ಸಾವಿರ ತಕ್ಷಣ ಪರಿಹಾರ ನೀಡಲಿದೆ. ನಾನು ಭೇಟಿ ಮಾಡಿದ್ದು ರಾಜಕೀಯ ಮಾಡುವುದಕ್ಕಲ್ಲ, ನೊಂದವರಿಗೆ ಸಹಾಯ ಮಾಡುವುದಕ್ಕಾಗಿ’ ಎಂದು ಅವರು ಹೇಳಿದರು.
ಪಕ್ಷದಲ್ಲಿ ಎಲ್ಲರಿಗೂ ಸ್ಥಾನ ಮಾನ ಕೊಡಲು ಸಾಧ್ಯವಿಲ್ಲ. ಆದರೆ ಪಕ್ಷಕ್ಕೆ ಪ್ರತಿಯೊಬ್ಬ ತಳ ಮಟ್ಟದ ಕಾರ್ಯಕರ್ತನೂ ಪ್ರಮುಖರೇ ಆಗಿದ್ದಾರೆ. ಬೂತ್ ಮಟ್ಟದಿಂದ ಕಾರ್ಯಕರ್ತರನ್ನು ಗೌರವಿಸುವ ಕೆಲಸ ಮಾಡುತ್ತಿದ್ದೇನೆ, ಬೂತ್ ಸಮಿತಿಯವರಲ್ಲಿ ಕೇಳದೆ ಒಂದೇ ಒಂದು ಅನುದಾನ ಅರ್ಜಿಗೆ ಸಹಿ ಹಾಕುವುದಿಲ್ಲ. ಕಾರ್ಯಕರ್ತರೇ ನಮಗೆ ಜೀವಾಳ. ಸರ್ಕಾರದ ಯೋಜನೆಗಳನ್ನು ಮನೆ ಮನೆಗೆ ತಲುಪಿಸುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕು. ಪಕ್ಷ ಗಟ್ಟಿಯಾದರೆ ಪ್ರತೀ ಕಾರ್ಯಕರ್ತರಿಗೂ ಗೌರವ ದೊರೆಯುತ್ತದೆ. ಅಭಿವೃದ್ಧಿಗೆ ಎಲ್ಲರೂ ಕೈ ಜೋಡಿಸಿ. ಕೆಟ್ಟ ಕೆಲಸಗಳಿಗೆ ಯಾರೂ ಹೋಗಬೇಡಿ. ಎಲ್ಲರೂ ಸೌಹಾರ್ದದಿಂದ ಬದುಕುವ ವಾತಾವರಣಕ್ಕೆ ಬೆಂಬಲ ಕೊಡುವ ಕೆಲಸ ಕಾಂಗ್ರೆಸ್ ಕಾರ್ಯಕರ್ತರು ಮಾಡಬೇಕು ಎಂದರು.
ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ ಮಾತನಾಡಿ, ಶಾಸಕ ಅಶೋಕ್ಕುಮಾರ್ ರೈ ಅವರು ನಿರೀಕ್ಷೆಗೂ ಮೀರಿ ಅಭಿವೃದ್ದಿ ಕೆಲಸಗಳನ್ನು ಮಾಡುತ್ತಿದ್ದಾರೆ. ಚುನಾವಣೆ ಸಂದರ್ಭದಲ್ಲಿ ನೀಡಿರುವ ಭರವಸೆಗಳೆಲ್ಲವನ್ನೂ ಎರಡೇ ವರ್ಷದಲ್ಲಿ ಈಡೇರಿಸಿದ್ದಾರೆ. ಮೆಡಿಕಲ್ ಕಾಲೇಜು, ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮೊದಲಾದ ಮಹತ್ವದ ಯೋಜನೆಗಳನ್ನು ತಂದಿದ್ದಾರೆ. ಬೂತ್ ಮಟ್ಟದ ಕಾರ್ಯಕರ್ತರಿಂದ ಹಿಡಿದು ಪ್ರಮುಖ ಪದಾಧಿಕಾರಿಗಳ ತನಕ ಎಲ್ಲರಿಗೂ ಗೌರವ ಕೊಡುವ ಕೆಲಸ ಮಾಡುತ್ತಿದ್ದಾರೆ. ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂದು ಅನುದಾನ ಹಂಚಿಕೆ ಮಾಡುತ್ತಿದ್ದಾರೆ. ಕರ್ನಾಟಕ ರಾಜ್ಯಕ್ಕೇ ಮಾದರಿ ಎಂಬಂತೆ ಪಕ್ಷದ ಕಾರ್ಯಕಾರಿಣಿ ಸಭೆಯನ್ನು ಆಯೋಜನೆ ಮಾಡುವ ಮೂಲಕ ಪಕ್ಷಕ್ಕೆ ಇನ್ನಷ್ಟು ಶಕ್ತಿ ತುಂಬಿದ್ದಾರೆ. ಶಾಸಕರ ಕಾರ್ಯದಿಂದಾಗಿ ಪುತ್ತೂರಿನಲ್ಲಿ ಕಾಂಗ್ರೆಸ್ ಪಕ್ಷ ಭದ್ರವಾಗಿದೆ ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ಬ್ಲಾಕ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಬ್ದುಲ್ ರಹಿಮಾನ್ ಅಝಾದ್, ಬ್ಲಾಕ್ ಕಾಂಗ್ರೆಸ್ ಕೋಶಾಧಿಕಾರಿ ವಲೇರಿಯನ್ ಡಯಾಸ್, ಕಾಂಗ್ರೆಸ್ ಸೇವಾದಳ ಘಟಕದ ಜೋಕಿಂ ಡಿಸೋಜ, ಬ್ಲಾಕ್ ಕಾಂಗ್ರೆಸ್ ಇಂಟಕ್ ಅಧ್ಯಕ್ಷ ಜಯಪ್ರಕಾಶ್ ಬದಿನಾರ್, ತುಳು ಅಕಾಡೆಮಿ ಸದಸ್ಯ ದುರ್ಗಾಪ್ರಸಾದ್ ರೈ ಕುಂಬ್ರ, ಜವಾಹರಲಾಲ್ ಬಾಲ್ಮಂಚ್ ಜಿಲ್ಲಾಧ್ಯಕ್ಷೆ ಶೈಲಜಾ ರಾಜೇಶ್ ಮತ್ತಿತರರು ಹಾಜರಿದ್ದರು.
ಬ್ಲಾಕ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ ಸ್ವಾಗತಿಸಿದರು. ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪೂರ್ಣೇಶ್ ಭಂಡಾರಿ ಪ್ರಸ್ತಾವಿಕವಾಗಿ ಮಾತನಾಡಿದರು. ಸರ್ವ ವಲಯ ಕಾಂಗ್ರೆಸ್ ಅಧ್ಯಕ್ಷ ಕಮಲೇಶ್ ವಂದಿಸಿದರು.
ಹಲವು ಕಾಮಗಾರಿಗಳಿಗೆ ಶಿಲಾನ್ಯಾಸ
ಪುತ್ತೂರಿನ ನ್ಯಾಯಾಲಯ ಕಟ್ಟಡ ಉದ್ಘಾಟನೆ ಆರ್ಟಿಒ ಟ್ರ್ಯಾಕ್ ತಾಲ್ಲೂಕು ಕ್ರೀಡಾಂಗಣ ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನದಲ್ಲಿ ₹350 ಕೋಟಿಯ ಕಾಮಗಾರಿ ಸೇರಿದಂತೆ ಹತ್ತು ಹಲವು ಕಾಮಗಾರಿಗಳ ಉದ್ಘಾಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಶಿಲಾನ್ಯಾಸ ನೆರವೇರಿಸುವರು ಎಂದು ಶಾಸಕ ಅಶೋಕ್ಕುಮಾರ್ ರೈ ತಿಳಿಸಿದರು.
ಬಡವರ ಅಂತ್ಯಕ್ರಿಯೆಗೆ ನೆರವು:
ಚಾಲನೆ ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಯಾರೇ ಆಗಲಿ ಬಡವರ ಕುಟುಂಬದಲ್ಲಿ ಮರಣ ಸಂಭವಿಸಿದ್ದಲ್ಲಿ ಅಂಥವರಿಗೆ ಅಂತ್ಯಕ್ರಿಯೆ ಮಾಡಲು ಆರ್ಥಿಕ ಸಂಕಷ್ಟ ಉಂಟಾದರೆ ಪಕ್ಷದ ವತಿಯಿಂದ ನೆರವು ನೀಡುವ ಯೋಜನೆಯನ್ನು ಜಾರಿಗೊಳಿಸಲಾಗಿದ್ದು ಈ ಯೋಜನೆಗೆ ಶಾಸಕ ಅಶೋಕ್ಕುಮಾರ್ ರೈ ಚಾಲನೆ ನೀಡಿದರು. ಶಾಸಕರ ಸ್ವಂತ ನಿಧಿಯಿಂದ ₹ 1ಲಕ್ಷ ನೀಡುವುದಾಗಿ ಹೇಳಿದ ಅವರು ಒಟ್ಟು ₹ 5 ಲಕ್ಷ ಫಂಡ್ ಸಂಗ್ರಹಿಸುವಂತೆ ಬ್ಲಾಕ್ ಕಾಂಗ್ರೆಸ್ ಸಮಿತಿಗೆ ಸೂಚಿಸಿದರು. ಇಬ್ಬರು ಅಸಹಾಯಕರಿಗೆ ಆರ್ಥಿಕ ನೆರವು ನೀಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.