ADVERTISEMENT

ಒಂದು ರಾಷ್ಟ್ರ ಒಂದು ಚುನಾವಣೆ ಚರ್ಚೆಯ ವಿಷಯವೇ ಅಲ್ಲ: ಯು.ಟಿ.ಖಾದರ್

ಸುದ್ದಿಗೋಷ್ಠಿಯಲ್ಲಿ ಶಾಸಕ ಯು.ಟಿ.ಖಾದರ್

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2021, 11:10 IST
Last Updated 6 ಮಾರ್ಚ್ 2021, 11:10 IST
   

ಮಂಗಳೂರು: ಒಂದು ರಾಷ್ಟ್ರ ಒಂದು ಚುನಾವಣೆ ಚರ್ಚೆ ಮಾಡುವ ವಿಚಾರವೇ ಅಲ್ಲ. ಇದು ಸಂವಿಧಾನದ ಮೂಲ ಆಶಯವನ್ನೇ ಬದಲಾಯಿಸುವ ಹೊಂದಿದಂತಿದೆ ಎಂದು ಶಾಸಕ ಯು.ಟಿ.ಖಾದರ್ ಆರೋಪಿಸಿದರು.

ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಕುರಿತ ಚರ್ಚೆಗೆ ಕಾಂಗ್ರೆಸ್ ಪಕ್ಷ ಒಪ್ಪಿಗೆ ನೀಡಿಲ್ಲ. ದೇಶದಲ್ಲಿ ಚರ್ಚೆ ಮಾಡಬೇಕಾಗಿರುವ ಜನಸಾಮಾನ್ಯರ ಸಮಸ್ಯೆಗಳು ಹಲವಾರು ಇವೆ. ತೈಲ ಬೆಲೆ ಏರಿಕೆ, ಅಡುಗೆ ಅನಿಲ ಬೆಲೆ ಏರಿಕೆಯಿಂದ ಜನರು ತತ್ತರಿಸಿದ್ದಾರೆ. ಈ ಕುರಿತು ಚರ್ಚೆ ನಡೆಯಲಿ. ಅದನ್ನು ಬಿಟ್ಟು ಪ್ರಜಾಪ್ರಭುತ್ವ ವಿರೋಧಿಯಾಗಿರುವ ಒಂದು ದೇಶ ಒಂದು ಚುನಾವಣೆ ಈ ವಿಷಯವನ್ನು ಚರ್ಚಿಸಬೇಕಾಗಿಲ್ಲ. ಈ ಕಲ್ಪನೆ ಅನುಷ್ಠಾನಗೊಂಡರೆ, ಪ್ರಾದೇಶಿಕ ಪಕ್ಷಗಳು, ಪ್ರಾದೇಶಿಕ ಸಮಸ್ಯೆಗಳಿಗೆ ಅಸ್ತಿತ್ವ ಇಲ್ಲದಂತಾಗುತ್ತದೆ. ಇದರಿಂದ ದೇಶದ ಸಾರ್ವಭೌಮತ್ವಕ್ಕೆ ಧಕ್ಕೆಯಾಗುತ್ತದೆ’ ಎಂದರು.

‘ಕೆಂಜಾರಿನ ಗೋಶಾಲೆ ಅತಿಕ್ರಮಣ ಜಾಗದಲ್ಲಿ ಇದ್ದಲ್ಲಿ, ಅದನ್ನು ತೆರವುಗೊಳಿಸುವ ಪೂರ್ವ ಅಲ್ಲಿರುವ ಗೋವುಗಳನ್ನು ಬೇರೆ ಗೋಶಾಲೆಗಳಿಗೆ ಸ್ಥಳಾಂತರಿಸಬೇಕಿತ್ತು. ಯಾವುದೇ ಪರ್ಯಾಯ ವ್ಯವಸ್ಥೆ ಜಾರಿಗೊಳಿಸದೇ, ಮೂಕ ಪ್ರಾಣಿಗಳನ್ನು ಬೀದಿಗೆ ಬಿಡಲಾಗಿದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಇದ್ದಾಗ ಈ ಜಾಗವನ್ನು ಕೋಸ್ಟ್‌ ಗಾರ್ಡ್‌ಗೆ ಮಂಜೂರುಗೊಳಿಸಿತ್ತು. ಈ ಜಾಗದ ಅತಿಕ್ರಮಣ ಸಮಸ್ಯೆ ಬಗೆಹರಿಸುವ ಬದಲಾಗಿ, ಜಿಲ್ಲಾಡಳಿತ ಗೋಶಾಲೆಯನ್ನು ಕೆಡವಿದೆ ಎಂದು ಆರೋಪಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.