
ಮೂಡುಬಿದಿರೆ: ಕೃಷಿಕರ ವಿರೋಧವನ್ನು ನಿರ್ಲಕ್ಷಿಸಿ ಸ್ಟೆರ್ಲೈಟ್ ಕಂಪನಿಯವರು 400 ಕೆ.ವಿ ವಿದ್ಯುತ್ ಕಾಮಗಾರಿಯನ್ನು ನಿಡ್ಡೋಡಿಯಲ್ಲಿ ಸೋಮವಾರ ಮುಂದುವರಿಸಿದ್ದು, ಕೃಷಿ ಭೂಮಿಗೆ ನುಗ್ಗಿ ಕೃಷಿ ಉತ್ಪನ್ನಗಳನ್ನು ನಾಶಪಡಿಸಿದನ್ನು ರೈತರು ಖಂಡಿಸಿದರು.
ಆಕ್ರೋಶಗೊಂಡ ರೈತ ಹೋರಾಟಗಾರ ಆಲ್ಫೋನ್ಸ್ ಡಿಸೋಜ ಅವರು ಕೈಯಲ್ಲಿ ವಿಷದ ಬಾಟಲಿಯನ್ನು ಹಿಡಿದುಕೊಂಡು ಕಾಮಗಾರಿ ಮುಂದುವರಿಸಿದರೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಸಿದರು.
ಕಂಪನಿಯ ಕರ್ತವ್ಯಕ್ಕೆ ಅಡ್ಡಿ ಮತ್ತು ವಿಷದ ಬಾಟಲಿ ಹಿಡಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಆರೋಪದಲ್ಲಿ ಪೊಲೀಸರು ಆಲ್ಪೋನ್ಸ್ ಅವರನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿದ್ದಾರೆ.
ಮೂಡುಬಿದಿರೆ ಪೊಲೀಸರು ಸ್ಥಳದಲ್ಲಿದ್ದರು. ಪ್ರತಿಭಟನೆ ಸಂದರ್ಭ ಮಾಧ್ಯಮದವರ ಜತೆ ಮಾತನಾಡಿದ ಅಲ್ಫೋನ್ಸ್ ಡಿಸೋಜ, ಕಂಪನಿಯವರು ಸೂಚನೆ ನೀಡದೆ ನಮ್ಮ ಕೃಷಿ ಜಮೀನಿಗೆ ನುಗ್ಗಿ ಭತ್ತದ ಬೆಳೆ ಹಾನಿ ಮಾಡಿದ್ದಾರೆ. ತೆನೆ ಬಿಡುವ ಹಂತದಲ್ಲಿದ್ದ ಫಲವತ್ತಾದ ಭತ್ತದ ಬೆಳೆ ನಾಶವಾಗಿದೆ. ನಾನು ಅನಾರೋಗ್ಯದಿಂದ ಬಳಲುತ್ತಿದ್ದು, ಜೀವಕ್ಕೆ ತೊಂದರೆ ಆದರೆ ಅದಕ್ಕೆ ಸ್ಟೆರ್ಲೈಟ್ ಕಂಪನಿಯೇ ನೇರ ಹೊಣೆ. ನನಗಾದ ನಷ್ಟಕ್ಕೆ ಸರ್ಕಾರ ತಕ್ಷಣ ಪರಿಹಾರ ಒದಗಿಸಬೇಕು. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ನನ್ನ ಜಾಗದಲ್ಲಿ ಕಾಮಗಾರಿ ಮುಂದುವರಿಸಿದರೆ ವಿಷ ಸೇವಿಸುವುದಾಗಿ ಅವರು ಎಚ್ಚರಿಸಿದ್ದರು.
ಘಟನಾ ಸ್ಥಳಕ್ಕೆ ಕಂದಾಯ ನಿರೀಕ್ಷಕ ಮಂಜುನಾಥ ಭೇಟಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.