ADVERTISEMENT

ಸೋಮೇಶ್ವರದಲ್ಲಿ ನಡೆದ ಮತೀಯ ಗೂಂಡಾಗಿರಿ ಪ್ರಕರಣ: ಐವರ ಬಂಧನ

​ಪ್ರಜಾವಾಣಿ ವಾರ್ತೆ
Published 2 ಜೂನ್ 2023, 8:29 IST
Last Updated 2 ಜೂನ್ 2023, 8:29 IST
   

ಉಳ್ಳಾಲ (ದಕ್ಷಿಣ ಕನ್ನಡ): ಮಂಗಳೂರಿನ ಸೋಮೇಶ್ವರ ಬೀಚ್ ನಲ್ಲಿ ಗುರುವಾರ ಸಂಜೆ ನಡೆದ ಮತೀಯ ಗೂಂಡಾಗಿರಿ ಪ್ರಕರಣಕ್ಕೆ ಸಂಬಂಧಿಸಿ ಒಟ್ಟು ಐವರನ್ನು ಈವರೆಗೆ ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಕುಲದೀಪ್ ಆರ್. ಜೈನ್ ತಿಳಿಸಿದರು.

ಸುದ್ದಿಗಾರರ ಜತೆ ಮಾತನಾಡಿದ ಅವರು, ಯತೀಶ್, ಸಚಿನ್, ಸುಹೇನ್, ಅಖಿಲ್ ಸೇರಿದಂತೆ ಒಟ್ಟು ಐವರನ್ನು ಬಂಧಿಸಲಾಗಿದೆ. ಒಬ್ಬ ಅಪ್ರಾಪ್ತ ಬಾಲಕನಾಗಿದ್ದಾನೆ ಎಂದರು.

ಮತ್ತಷ್ಟು ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಸದ್ಯ ಮೂರು ಪ್ರತ್ಯೇಕ ತಂಡಗಳು ತನಿಖೆ ಮುಂದುವರಿಸಿವೆ ಎಂದು ತಿಳಿಸಿದರು.

ADVERTISEMENT

ಉಳ್ಳಾಲ ಪೊಲೀಸ್ ಠಾಣೆಯಲ್ಲಿ ವಿದ್ಯಾರ್ಥಿಗಳ ದೂರಿ‌ನನ್ವಯ ಎಫ್ಐಆರ್ ದಾಖಲಾಗಿದೆ.

ಕಮಿಷನರ್ ಭೇಟಿ: ಉಳ್ಳಾಲ ಠಾಣೆಗೆ ಪೊಲೀಸ್ ಕಮಿಷನರ್ ಕುಲದೀಪ್ ಜೈನ್ ಭೇಟಿ ನೀಡಿದರು. ಸಿಸಿಬಿ ಎಸಿಪಿ ಪಿ.ಎ. ಹೆಗಡೆ ಹಾಗೂ ಉಳ್ಳಾಲ ಇನ್ ಸ್ಪೆಕ್ಟರ್ ಅವರಿಂದ ಮಾಹಿತಿ ಪಡೆದರು

ಬಿಜೆಪಿ- ಹಿಂದುತ್ವವಾದಿ ಪ್ರಮುಖರು ಠಾಣೆಗೆ ಭೇಟಿ:

ಉಳ್ಳಾಲ ಠಾಣೆಗೆ ಬಿಜೆಪಿ ಹಾಗೂ ಹಿಂದುತ್ವವಾದಿ ಸಂಘಟನೆಗಳ ಪ್ರಮುಖರು ಭೇಟಿ ನೀಡಿದರು.

ಬಿಜೆಪಿ ಮುಖಂಡ ಸತೀಶ್ ಕುಂಪಲ ಹಾಗೂ ಇತರರು ಕಮಿಷನರ್ ಮಾಡಿ, 'ಅಮಾಯಕ ಯುವಕರನ್ನು ಬಂಧಿಸಲಾಗಿದೆ. ತಕ್ಷಣ ಅವರನ್ನು ಬಿಡುಗಡೆಗೆ ಮಾಡಬೇಕು' ಎಂದು ಒತ್ತಾಯಿಸಿದರು.

ಪ್ರಕರಣದ ಆರೋಪಿಗಳನ್ನಷ್ಟೇ ಬಂಧಿಸುವ ಭರವಸೆ ನೀಡಿದ ಕುಲದೀಪ್ ಜೈನ್ ಅವರು,

ವಶಕ್ಕೆ ಪಡೆದವರು ಪ್ರಕರಣದಲ್ಲಿ ಇಲ್ಲದಿದ್ದರೆ ಅವರನ್ನು ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದರು.

ನಂತರ ಸತೀಶ್ ಕುಂಪಲ ಮಾಧ್ಯಮಗಳ ಜತೆ ಮಾತನಾಡಿ, ಕಾಂಗ್ರೆಸ್ ಸರ್ಕಾರ ಬಂದ ಬೆನ್ನಲ್ಲೇ ಉಳ್ಳಾಲದಲ್ಲಿ ಅಹಿತಕರ ಘಟನೆ ನಡೆದಿದೆ.

ಅನ್ಯಕೋಮಿನ ಕಾಲೇಜು ವಿದ್ಯಾರ್ಥಿಗಳು ಸೋಮೇಶ್ವರ ಬೀಚ್ ಗೆ ಬಂದಿದ್ದಾರೆ. ಪವಿತ್ರ ಕ್ಷೇತ್ರದಲ್ಲಿ ಅಶ್ಲೀಲವಾಗಿ ವರ್ತಿಸಿದಾಗ ಸ್ಥಳೀಯ ಯುವಕರು ಪ್ರಶ್ನೆ ಮಾಡಿದ್ದಾರೆ. ಇದು ತಪ್ಪಾದರೂ ದೇವರ ಕ್ಷೇತ್ರದ ಬಳಿ ಅಶ್ಲೀಲ ವರ್ತನೆ ಮಾಡಿದಾಗ ಆಕ್ರೋಶ ವ್ಯಕ್ತವಾಗುವುದು ಸಹಜ.

ಏನೇ ಆದರೂ ಪೊಲೀಸ್ ಇಲಾಖೆ ಈ ಬಗ್ಗೆ ಗಮನ ಹರಿಸಲಿ. ಇಂತಹ ಘಟನೆಗಳಿಗೆ ಆಸ್ಪದ ನೀಡುವುದು ಬೇಡ ಅಮಾಯಕರ ಬಂಧನ ಸರಿಯಲ್ಲ, ಅಮಾಯಕರನ್ನ ಬಿಡುತ್ತೇವೆ ಎಂದಿದ್ದಾರೆ. ಯುವಕರು ನಮ್ಮ ಕಾರ್ಯಕರ್ತರಾ ಅಥವಾ ಅಲ್ಲವಾ ಅನ್ನೋದು ಪ್ರಶ್ನೆ ಅಲ್ಲ. ಅವರ ಕುಟುಂಬದವರು ವಿಷಯ ಹೇಳಿದಾಗ ನಾವು ಠಾಣೆಗೆ ಬಂದಿದ್ದೇವೆ ಎಂದರು.

ಎಲ್ಲ ವೈದ್ಯಕೀಯ ಕಾಲೇಜುಗಳ ಪ್ರಮುಖರ ಜತೆಗೆ ಮಾತನಾಡಿ ವಿದ್ಯಾರ್ಥಿಗಳಿಗೆ ಬುದ್ಧಿಮಾತು ಹೇಳುವ ಪ್ರಯತ್ನ ಮಾಡುತ್ತೇವೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.