
ಮಂಗಳೂರು: ನಗರದ ಸಂಚಾರ ವ್ಯವಸ್ಥೆ ಸುಧಾರಣೆ ಹಾಗೂ ನಂತೂರು ಜಂಕ್ಷನ್ ಅಭಿವೃದ್ದಿ ಕುರಿತು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಅಧಿಕಾರಿಗಳು ಹಾಗೂ ಮುಖಂಡ ಜೊತೆ ಶನಿವಾರ ಸಭೆ ನಡೆಸಿದರು. ಸಂಚಾರ ಸಮಸ್ಯೆಗಳನ್ನು ಇತ್ಯರ್ಥಪಡಿಸಲು ವಾರದೊಳಗೆ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.
‘ನಗರದಲ್ಲಿ ಸಂಚಾರ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಈ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬರುತ್ತಿವೆ. ಜಂಕ್ಷನ್ಗಳಲ್ಲಿ ಅಪಘಾತಗಳು ಸಂಭವಿಸುತ್ತಿವೆ. ಇದನ್ನು ಗಮನಿಸಿ, ನಂತೂರು ಜಂಕ್ಷನ್ಗೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ನಂತೂರು ಜಂಕ್ಷನ್ನಲ್ಲಿ ವಾಹನ ಸಂಚಾರಕ್ಕೆ ಯಾವುದೇ ತೊಂದರೆ ಯಾಗದಂತೆ ಮುಂಜಾಗ್ರತೆ ವಹಿಸಬೇಕು’ ಎಂದು ಐವನ್ ಸೂಚಿಸಿದರು.
‘ಪ್ರಮುಖ ಜಂಕ್ಷನ್ಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು. ಬಸ್-ಬೇ ನಿರ್ಮಿಸಬೇಕು. ರಸ್ತೆಯ ಇಕ್ಕೆಲಗಳಲ್ಲಿ ಡಾಂಬರೀಕರಣ ಮಾಡಬೇಕು. ತಡೆಗೋಡೆ ನಿರ್ಮಿಸಬೇಕು. ಹೈಮಾಸ್ಕ್ ಲೈಟ್ ಅಳವಡಿಸಬೇಕು. ಅಗತ್ಯ ಇರುವ ಕಡೆ ಸಂಚಾರ ಸಿಗ್ನಲ್ಗಳನ್ನು ಅಳವಡಿಸಬೇಕು’ ಎಂದು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಂಚಾರ ವಿಭಾಗದ ಡಿಸಿಪಿ ರವಿಶಂಕರ್, ಎಸಿಪಿ ನಜ್ಮಾ ಫಾರೂಕಿ, ಇನ್ಸ್ಪೆಕ್ಟರ್ ಗೋಪಾಲಕೃಷ್ಣ ಭಟ್ ಮತ್ತು ಮಂಗಳೂರು ನಗರ ಪಾಲಿಕೆ ಅಭಿವೃದ್ಧಿ ಆಯುಕ್ತ ನರೇಶ್ ಶೆಣೈ, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಪುನೀತ್, ಕಿರಿಯ ಎಂಜಿನಿಯರ್ ಮಂಜುನಾಥ್, ಸ್ಮಾರ್ಟ್ಸಿಟಿ ಅಧಿಕಾರಿ ಸಂತೋಷ್ ಕುಮಾರ್, ಅರುಣ್ ಪ್ರಭಾ, ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಕಚೇರಿಯ ಅಧಿಕಾರಿ ಮುರುಗೇಶ್ ಲೋಕೂರ್, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್ ನವೀನ್ ಭಾಗವಹಿಸಿದ್ದರು
ಕಾಂಗ್ರೆಸ್ ಮುಖಂಡರಾದ ಶಶಿಧರ್ ಹೆಗ್ಡೆ, ಭಾಸ್ಕರ್ ಮೊಯಿಲಿ, ಪ್ರವೀಣಚಂದ್ರ ಆಳ್ವ, ಕೇಶವ ಮರೋಳಿ, ನವೀನ್ ಡಿಸೋಜ, ಅಶೋಕ್ ಡಿ.ಕೆ., ಸತೀಶ್ ಪೇಂಗಲ್, ವಿಕಾಸ್ ಶೆಟ್ಟಿ, ಅಲೆಸ್ಟೈನ್ ಡಿಕುನ್ಹ, ಹಬೀಬ್ ಕಣ್ಣೂರು ಸಭೆಯಲ್ಲಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.