ADVERTISEMENT

ನಾರಿಯರ ಮನಸೂರೆಗೊಂಡ ಸರಸ್ ಮೇಳ

ಸ್ವ ಸಹಾಯ ಗುಂಪುಗಳ ಮಹಿಳೆಯರು ತಯಾರಿಸಿದ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2026, 7:01 IST
Last Updated 21 ಫೆಬ್ರುವರಿ 2026, 7:01 IST
ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ ನಡೆಯುತ್ತಿರುವ ಸರಸ್ ಮೇಳದಲ್ಲಿ ಮಹಿಳೆಯರು ಮಣ್ಣಿನ ಪಾತ್ರೆ ಖರೀದಿಸಿದರು : ಪ್ರಜಾವಾಣಿ ಚಿತ್ರ
ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ ನಡೆಯುತ್ತಿರುವ ಸರಸ್ ಮೇಳದಲ್ಲಿ ಮಹಿಳೆಯರು ಮಣ್ಣಿನ ಪಾತ್ರೆ ಖರೀದಿಸಿದರು : ಪ್ರಜಾವಾಣಿ ಚಿತ್ರ   

ಮಂಗಳೂರು: ಅಸ್ಸಾಂನ ಹ್ಯಾಂಡಲೂಮ್ ಸೀರೆ, ಆಂಧ್ರ ಪ್ರದೇಶದ ಕಲಂಕಾರಿ ಸೀರೆ, ತೆಲಂಗಾಣದ ಕೂಚಂಪಳ್ಳಿ ಸೀರೆ, ಕೇರಳ ಕಾಸರಗೋಡಿನ ಸಾಂಪ್ರದಾಯಿಕ ಆಭರಣಗಳು, ಉತ್ತರ ಪ್ರದೇಶದ ಕೈಮಗ್ಗ ವಸ್ತುಗಳು, ಕಿನ್ನಾಳ ಗೊಂಬೆಗಳು, ನಮ್ಮದೇ ನೆಲದ ಮಣ್ಣಿನ ಕುಡಿಕೆಗಳು, ಇಳಕಲ್‌ ಸೀರೆ, ಬಯಲುನಾಡಿನ ಸಿರಿಧಾನ್ಯ ಉತ್ಪನ್ನಗಳು, ಕರಾವಳಿಯ ಮೀನು ಖಾದ್ಯ, ಯುವತಿಯರನ್ನು ಸೆಳೆಯುವ ಆಧುನಿಕ ಕಿವಿಯೋಲೆಗಳು ಹೀಗೆ ದೇಶದ ಕಸೂತಿ, ಕಲಾ ಶ್ರೀಮಂತಿಕೆಯನ್ನು ಒಂದೇ ಸೂರಿನಡಿ ವೀಕ್ಷಿಸಲು ಅವಕಾಶ ಕಲ್ಪಿಸಿದೆ ರಾಷ್ಟ್ರ ಮಟ್ಟದ ‘ಸರಸ್ ಮೇಳ’.

ದೇಶದ 15 ರಾಜ್ಯಗಳ, ಕರ್ನಾಟಕದ ವಿವಿಧ ಜಿಲ್ಲೆಗಳ ಸ್ವ ಸಹಾಯ ಗುಂಪುಗಳ ಮಹಿಳೆಯರು ತಾವು ತಯಾರಿಸಿರುವ ಗೃಹ ಉತ್ಪನ್ನಗಳು, ಗುಡಿ ಕೈಗಾರಿಕೆ, ಕರಕುಶಲ ವಸ್ತುಗಳನ್ನು ಮೇಳಕ್ಕೆ ತಂದಿದ್ದಾರೆ. 

ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ರಾಜ್ಯ ಜೀವನೋಪಾಯ ಅಭಿಯಾನ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ ಆಶ್ರಯದಲ್ಲಿ ನಗರದ ಕರಾವಳಿ ಉತ್ಸವ ಮೈದಾನದಲ್ಲಿ ಆಯೋಜಿಸಿರುವ ಸ್ವ ಸಹಾಯ ಗುಂಪಿನ ಮಹಿಳೆಯರು ತಯಾರಿಸಿದ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವ ಡಾ. ಶರಣಪ್ರಕಾಶ ಪಾಟೀಲ ಶುಕ್ರವಾರ ಉದ್ಘಾಟಿಸಿದರು. 

ADVERTISEMENT

ರಾಜ್ಯ ಸರ್ಕಾರವು ಸ್ವ ಸಹಾಯ ಗುಂಪುಗಳಿಗೆ ಸಮುದಾಯ ಬಂಡವಾಳ ನಿಧಿ (ಸಿಐಎಫ್‌) ಒದಗಿಸುವ‌ ಮೂಲಕ ಮಹಿಳೆಯರ ಆರ್ಥಿಕ ಸಶಕ್ತೀಕರಣಕ್ಕೆ ನೆರವಾಗುತ್ತಿದೆ. ರಾಜ್ಯದ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ 5 ಸಾವಿರಕ್ಕೂ ಹೆಚ್ಚು ಸಂಜೀವಿನಿ ಒಕ್ಕೂಟಗಳ ಅಡಿಯಲ್ಲಿರುವ ಸ್ವ ಸಹಾಯ ಸಂಘಗಳಿಗೆ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ (ಎನ್‌ಆರ್‌ಎಲ್‌ಎಂ) ಅಡಿಯಲ್ಲಿ ಅವರಿಗೆ ಉದ್ಯಮ ನಡೆಸಲು ಅನುಕೂಲವಾಗುವಂತೆ, ಪ್ರತಿ ಸಂಘಕ್ಕೆ ₹1.5 ಲಕ್ಷ ಸಮುದಾಯ ಬಂಡವಾಳ ನಿಧಿ ನೀಡಲಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಗೆ ಸಿಐಎಫ್ ಅಡಿಯಲ್ಲಿ ₹70 ಕೋಟಿಯಷ್ಟು ನೆರವು ನೀಡಲಾಗಿದೆ ಎಂದು ಸಚಿವರು ಹೇಳಿದರು. 

ಸ್ಪೀಕರ್ ಯು.ಟಿ.ಖಾದರ್ ಮಾತನಾಡಿ, ಮಹಿಳೆಯರು ಕುಟುಂಬದ ಆಧಾರಸ್ತಂಭ ಮಾತ್ರವಲ್ಲ, ಆರ್ಥಿಕ ಅಭಿವೃದ್ಧಿಯ ಶಕ್ತಿ ಕೇಂದ್ರವಿದ್ದಂತೆ. ಕರಾವಳಿಯ ಮಹಿಳೆಯರು ನಾಲ್ಕೈದು ದಶಕಗಳ ಹಿಂದೆಯೇ ಗೇರು ಫ್ಯಾಕ್ಟರಿ, ಮೀನುಗಾರಿಕೆ, ಬೀಡಿ ಉದ್ಯಮದ ಮೂಲಕ ಆದಾಯ ಗಳಿಸಿ ಸ್ವಾಭಿಮಾನಿ ಜೀವನಕ್ಕೆ ಮಾದರಿಯಾದವರು. ಕರಾವಳಿಯಲ್ಲಿ ಪ್ರೀತಿ, ಸೌಹಾರ್ದದ ಸಮಾಜ ಕಟ್ಟಲು ತಾಯಂದಿರು ಕೊಡುಗೆ ನೀಡಬೇಕು ಎಂದರು. 

ಶಾಸಕ ವೇದವ್ಯಾಸ ಕಾಮತ್ ಅಧ್ಯಕ್ಷತೆ ವಹಿಸಿದ್ದರು. ಸಂಸದ ಕ್ಯಾ. ಬ್ರಿಜೇಶ್ ಚೌಟ, ವಿವಿಧ ಮಂಡಳಿಗಳ ಅಧ್ಯಕ್ಷರಾದ ಮಮತಾ ಗಟ್ಟಿ, ಸದಾಶಿವ ಉಳ್ಳಾಲ, ಜೋಕಿಂ ಸ್ಟ್ಯಾನಿ ಅಲ್ವಾರಿಸ್, ಇಲಾಖೆ ಕಾರ್ಯದರ್ಶಿ ಮನೋಜ್‌ಕುಮಾರ್ ಮೀನಾ, ಎನ್‌ಆರ್‌ಎಲ್‌ಎಂ ನಿರ್ದೇಶಕಿ ವಾಸಿರೆಡ್ಡಿ ವಿಜಯ ಜ್ಯೋತ್ಸ್ನಾ, ಜಿಲ್ಲಾಧಿಕಾರಿ ದರ್ಶನ್ ಎಚ್.ವಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ವಿನಾಯಕ್ ನರ್ವಾಡೆ, ಎನ್‌ಆರ್‌ಎಲ್‌ಎಂ ಹೆಚ್ಚುವರಿ ನಿರ್ದೇಶಕ ಶ್ರೀನಿವಾಸ ಎಂ ಉಪಸ್ಥಿತರಿದ್ದರು.

ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ ನಡೆಯುತ್ತಿರುವ ಸರಸ್ ಮೇಳದಲ್ಲಿ ಸ್ಪೀಕರ್ ಯು.ಟಿ. ಖಾದರ್ ಸಚಿವ ಡಾ. ಶರಣಪ್ರಕಾಶ ಪಾಟೀಲ ಕೈಮಗ್ಗ ಸೀರೆ ವೀಕ್ಷಿಸಿದರು : ಪ್ರಜಾವಾಣಿ ಚಿತ್ರ
ನಮ್ಮ ಸಂಘದ ಮಹಿಳೆಯರು ತಯಾರಿಸಿದ 500ಕ್ಕೂ ಹೆಚ್ಚು ಕಾಟನ್ ಸೀರೆಗಳನ್ನು ಮಾರಾಟಕ್ಕೆ ತಂದಿದ್ದೇವೆ. ಕರಾವಳಿಯ ಜನರು ವಿಶಿಷ್ಟ ವಿನ್ಯಾಸದ ಸೀರೆ ಇಷ್ಟಪಡಬಹುದೆಂಬ ವಿಶ್ವಾಸವಿದೆ.
ಬರ್ನಾಲಿ ಅಸ್ಸಾಂ

ಅಕ್ಕ ಕೆಫೆಯಲ್ಲಿ ತಿನಿಸುಗಳ ಘಮ

ಮೈದಾನದ ಒಂದೆಡೆ ವಸ್ತು ಪ್ರದರ್ಶನವಿದ್ದರೆ ಇನ್ನೊಂದೆಡೆ 30ಕ್ಕೂ ಹೆಚ್ಚು ಮಳಿಗೆಗಳಲ್ಲಿ ಅಕ್ಕ ಕೆಫೆಯ ಮಹಿಳೆಯರು ತರಹೇವಾರಿ ತಿನಿಸುಗಳನ್ನು ಸ್ಥಳದಲ್ಲೇ ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. ಮೀನು ಖಾದ್ಯ ಚಿಕನ್ ಸುಕ್ಕ ರಾಗಿ ಮುದ್ದೆ ರಾಜಸ್ಥಾನದ ಸಿಹಿ ತಿನಿಸುಗಳು ನೀರ್ ದೋಸೆ ಚಾಟ್‌ಗಳು ಜ್ಯೂಸ್ ಕುಂದಾಪುರ ಮಹಾಸತಿ ಸ್ವ ಸಹಾಯ ಗುಂಪಿನ ಮಹಿಳೆಯರು ಸಿದ್ಧಪಡಿಸಿ ಕೊಡುತ್ತಿರುವ ಹಲಸಿನ ಹಲ್ವ ಹಲಸಿನ ಗಟ್ಟಿ ಪಾಯಸ ಮುಳ್ಕ ಜನರನ್ನು ಸೆಳೆಯುತ್ತಿವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.