ಮಂಗಳೂರು: ನಗರದ ಕದ್ರಿ ಮಲ್ಲಿಕಟ್ಟೆಯಲ್ಲಿನ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಭಾನುವಾರನೇತಾಜಿ ಸುಭಾಷ್ ಚಂದ್ರ ಬೋಸ್ ಜಯಂತಿ ಆಚರಿಸಲಾಯಿತು.
‘ನೇತಾಜಿ ಕಾಂಗ್ರೆಸ್ ಅಧ್ಯಕ್ಷರಾಗಿದ್ದಾಗ ಶ್ಯಾಮ್ ಪ್ರಸಾದ್ ಮುಖರ್ಜಿ ಸಹಿತ ಹಲವು ಬಲಪಂಥೀಯರನ್ನು ಪಕ್ಷದಿಂದ ಹೊರ ಹಾಕಿ, ಪಕ್ಷ ಹಾಗೂ ಹೋರಾಟವನ್ನು ಶುದ್ಧೀಕರಣ ಮಾಡಿದ್ದರು. ಅವರು ನಿಜವಾದ ರಾಷ್ಟ್ರೀಯವಾದಿ ಮತ್ತು ದೇಶ ಭಕ್ತ’ ಎಂದು ಎಐಸಿಸಿ ಕಾರ್ಯದರ್ಶಿ ಪಿ.ವಿ.ಮೋಹನ್ ಹೇಳಿದರು.
‘ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಬದ್ಧರಾಗಿದ್ದನೇತಾಜಿ ಹಾಗೂ ಸರ್ದಾರ್ ವಲ್ಲಭಭಾಯ್ ಪಟೇಲ್ ಬಲಪಂಥೀಯರ ಸಿದ್ಧಾಂತಕ್ಕೆ ವಿರುದ್ಧವಾಗಿದ್ದರು. ನೇತಾಜಿ, ಪಟೇಲ್, ಭಗತ್ ಸಿಂಗ್ ಅವರನ್ನು ಹೈಜಾಕ್ ಮಾಡುವ ಮೊದಲು ಬಿಜೆಪಿ ಇತಿಹಾಸವನ್ನು ತಿಳಿದುಕೊಳ್ಳಲಿ’ ಎಂದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ‘ಮಹಾತ್ಮ ಗಾಂಧಿ ಅಹಿಂಸಾತ್ಮಕ ಹೋರಾಟ ನಡೆಸಿದರೆ, ನೇತಾಜಿ ಸುಭಾಷ್ ಚಂದ್ರ ಬೋಸ್ ಕ್ರಾಂತಿಕಾರಿ ಹಾದಿಯನ್ನು ಹಿಡಿದರು. ಸ್ವಾತಂತ್ರ್ಯ ಹೋರಾಟದಲ್ಲಿ ವಿಶಿಷ್ಟ ಕೊಡುಗೆ ನೀಡಿದರು. ಬ್ರಿಟಿಷ್ ವಿರುದ್ಧ ಹೋರಾಡಲು ವಿದೇಶಗಳ ನೆರವನ್ನು ಸಂಘಟಿಸಿದರು. ನೇತಾಜಿ ಸಾಧನೆಯು ಕಾಂಗ್ರೆಸ್ಸಿಗೆ ಸದಾ ಸ್ಪೂರ್ತಿ’ ಎಂದರು.
‘ಕಾಂಗ್ರೆಸ್ನಲ್ಲಿಯೇ ಇದ್ದ ನೇತಾಜಿ ಬಳಿಕ ಫಾರ್ವಡ್ ಬ್ಲಾಕ್ ರಚಿಸಿದ್ದು, ಅದು ಪಶ್ಚಿಮ ಬಂಗಾಳದಲ್ಲಿ ಸಕ್ರಿಯವಾಗಿದೆ’ ಎಂದರು.
ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಶುಭೋದಯ ಆಳ್ವ ವಂದಿಸಿದರು. ಕಾಂಗ್ರೆಸ್ ಮುಖಂಡರಾದ ಶಶಿಧರ ಹೆಗ್ಡೆ, ಅಪ್ಪಿ, ಜೆ. ಅಬ್ದುಲ ಸಲೀಂ, ನವೀನ್ ಡಿಸೋಜ, ಅಬ್ದುಲ್ ರವೂಫ್, ಬಿ.ಎಂ.ಅಬ್ಬಾಸ್ ಆಲಿ, ಜಯಶೀಲ ಅಡ್ಯಂತಾಯ, ಶಾಹುಲ್ ಹಮೀದ್, ರಘುರಾಜ್ ಕದ್ರಿ, ಸಿ.ಎಂ. ಮುಸ್ತಾಫ, ನೀರಜ್ ಚಂದ್ರ ಪಾಲ್, ನಝೀರ್ ಬಜಾಲ್,ಸುರೇಂದ್ರ ಕಂಬಳಿ, ಜಿತೇಂದ್ರ ಸುವರ್ಣ,
ಇಮ್ರಾನ್ ಎ.ಆರ್., ಮೊಹಮ್ಮದ್ ಬಪ್ಪಳಿಗೆ, ಯಶವಂತ ಪ್ರಭು ಶಕ್ತಿನಗರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.