ಮಂಗಳೂರು: ನಿಷೇಧಿತ ಉಗ್ರಗಾಮಿ ಸಂಘಟನೆ ಐಎಸ್ಐಎಸ್ ಜೊತೆ ನಂಟು ಮತ್ತಿಬ್ಬರನ್ನು ಬಂಧಿಸಿರುವುದನ್ನು ರಾಷ್ಟ್ರೀಯ ತನಿಖೆ ಸಂಸ್ಥೆ (ಎನ್ಐಎ) ಖಚಿತ ಪಡಿಸಿದೆ.
ಶಿವಮೊಗ್ಗದ ಟಿಪ್ಪು ಸುಲ್ತಾನ್ ನಗರದ ಹುಯೈರ್ ಫರ್ಹಾನ್ ಬೇಗ್ ಮತ್ತು ಉಡುಪಿ ಜಿಲ್ಲೆಯ ಬ್ರಹ್ಮಾವರ ವಾರಂಬಳ್ಳಿ ಗ್ರಾಮದ ಶಾಂತಿನಗರದ ರೇಷಾನ್ ತಾಜುದ್ದೀನ್ ಶೇಖ್ ಬಂಧಿತ ಆರೋಪಿಗಳು.
ಐಎಸ್ಐಎಸ್ ನಿಷೇಧಿತ ಉಗ್ರಗಾಮಿ ಸಂಘಟನೆ ಜೊತೆ ನಂಟು ಹೊಂದಿದವರ ಪತ್ತೆಗಾಗಿ ದಕ್ಷಿಣ ಕನ್ನಡ, ಶಿವಮೊಗ್ಗ, ದಾವಣಗೆರೆ ಮತ್ತು ಬೆಂಗಳೂರು ಜಿಲ್ಲೆಗಳ ಆರು ಕಡೆಗಳಲ್ಲಿ ಗುರುವಾರ ಪತ್ತೆ ಕಾರ್ಯಾಚರಣೆ ನಡೆಸಿತ್ತು.
2022ರ ನವಂಬರ್ 15ರಂದು ಶಿವಮೊಗ್ಗದ ಗ್ರಾಮೀಣ ಠಾಣೆಯಲ್ಲಿ ದಾಖಲಾದ ಪ್ರಕರಣದ ವಿಚಾರಣೆ ವೇಳೆ ಆರೋಪಿಗಳು ಇಸ್ಲಾಮಿಕ್ ಸ್ಟೇಟ್ ಸಂಘಟನೆಯ ಜೊತೆ ನಂಟು ಹೊಂದಿರುವುದು ಕಂಡುಬಂದಿತ್ತು. ಇಸ್ಲಾಮಿಕ್ ಸ್ಟೇಟ್ ಜೊತೆ ನಂಟು ಹೊಂದಿದ್ದ ಸಂಬಂಧ ಇಬ್ಬರು ಆರೋಪಿಗಳನ್ನು ಈ ಹಿಂದೆ ವಶಪಡಿಸಿಕೊಳ್ಳಲಾಗಿತ್ತು ಅವರಲ್ಲಿ ಮಂಗಳೂರಿನ ಮಾಝ್ ಮುನೀರ್ ಕೂಡ ಒಬ್ಬನಾಗಿದ್ದ. ಆತನ ಜೊತೆ ನಂಟು ಹೊಂದಿದ್ದ ಇತರ ಕೆಲವರ ಬಗ್ಗೆ ಮಾಹಿತಿ ಸಂಗ್ರಹಿಸಲು ಎನ್ಐಎ ಅಧಿಕಾರಿಗಳು ಆರು ಕಡೆ ಶೋಧ ಕಾರ್ಯಾಚರಣೆ ನಡೆಸಿದ್ದರು.
ಗುರುವಾರ ಬಂಧಿಸಲಾದ ಆರೋಪಿಗಳು ಈ ಹಿಂದೆ ಶಿವಮೊಗ್ಗ ಗ್ರಾಮಾಂತರ ಠಾಣೆಯ ಪ್ರಕರಣದ ಆರೋ ಪಿ ಸಂಬಂಧಪಟ್ಟ ಮಾಝ್ ಮುನೀರ್ ಜೊತೆ ನೇರ ಸಂಬಂಧ ಹೊಂದಿದ್ದರು. ರೇಷಾನ್ ತಾಜುದ್ದೀನ್ ಶೇಖ್ ಮಾಝ್ ಮುನೀರ್ ನ ಸಹಪಾಠಿ. ಬಂಧಿತರಿಬ್ಬರೂ ಉಗ್ರಗಾಮಿ ಚಟುವಟಿಕೆಗಳಿಗಾಗಿ ಇಸ್ಲಾಮಿಕ್ ಸ್ಟೇಟ್ ಸಂಘಟನೆಯಿಂದ ಕ್ರಿಪ್ಟೋ ಕರೆನ್ಸಿ ಮೂಲಕ ಹಣಕಾಸಿನ ನೆರವು ಪಡೆದಿದ್ದರು.
ಬಾರಿ ಭಯೋತ್ಪಾದನಾ ಚಟುವಟಿಕೆ ನಡೆಸುವ ಸಂಚುರೂಪಿಸಿದ್ದರು. ವಿದ್ಯುತ್ ಪರಿವರ್ತಕಗಳು ಗೋದಾಮುಗಳು, ಮದ್ಯ ಮಾರಾಟ ಮಳಿಗೆಗಳು... ಮುಂತಾದವುಗಳ ಮೇಲೆ ಹಾಗೂ ವಾಹನಗಳ ಮೇಲೆ ದಾಳಿ ನಡೆಸುವ ಉದ್ದೇಶವನ್ನು ಹೊಂದಿದ್ದರು. ಆರೋಪಿಗಳ ಮನೆಗಳಿಂದ ಕೆಲವು ಡಿಜಿಟಲ್ ಸಾಧನಗಳು ಮತ್ತು ಬರವಣಿಗೆ ಇದ್ದ ಪತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎನ್ಐಎ ಟ್ವೀಟ್ ಮಾಡುವ ಮೂಲಕ ಮಾಹಿತಿ ಹಂಚಿಕೊಂಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.