ಮೂಡುಬಿದಿರೆ: ‘ನಿಡ್ಡೋಡಿ ಗ್ರಾಮದ ಕೊಳತ್ತಾರು ಪದವು ಸರ್ಕಾರಿ ಜಾಗದಲ್ಲಿ ನಿರ್ಮಾಣವಾಗಲಿರುವ ಸರ್ಕಾರದ ಬೃಹತ್ ಸೀಫುಡ್ ಕಾರ್ಖಾನೆಗೆ ಸೋಮವಾರ ಸ್ಥಳ ಪರಿಶೀಲನೆಗೆ ಬಂದ ಬಂದರು ಮತ್ತು ಮೀನುಗಾರಿಕೆ ಸಚಿವ ಅಂಗಾರ ಹಾಗೂ ಸ್ಥಳೀಯ ಶಾಸಕ ಉಮಾನಾಥ ಕೋಟ್ಯಾನ್ ವಿರುದ್ಧ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
‘ಕೈಗಾರಿಕೆಯ ಸಾಧಕ ಬಾಧಕಗಳ ಕುರಿತು ನಮಗೆ ಸ್ಪಷ್ಟ ಮಾಹಿತಿ ನೀಡದೆ, ನಮ್ಮ ಅಭಿಪ್ರಾಯವನ್ನು ಪಡೆಯದೆ ಸ್ಥಳ ಪರಿಶಿಲನೆಗೆ ಬಂದಿದ್ದೀರಿ’ ಎಂದು ಸ್ಥಳೀಯರು ಸಚಿವರ ಮತ್ತು ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದ ಶಾಸಕರು, ‘ಇದು ರಾಜ್ಯ ಸರ್ಕಾರದ ಬೃಹತ್ ಕೈಗಾರಿಕೆಯಾಗಿದ್ದು, ಇದನ್ನು ಈ ಕ್ಷೇತ್ರದಲ್ಲಿ ಸ್ಥಾಪಿಸಲು ಅನುಮತಿ ನೀಡಿದೆ. ಇದು ಸುಮಾರು 50 ಎಕರೆ ಸರ್ಕಾರಿ ಜಾಗದಲ್ಲಿ ನಿರ್ಮಾಣವಾಗಲಿದ್ದು, ಖಾಸಗಿ ಜಾಗ ಅತಿಕ್ರಮಣವಾಗುವುದಿಲ್ಲ ಹಾಗೂ ಸ್ಥಳೀಯರಿಗೆ ತೊಂದರೆ ಆಗುವುದಿಲ್ಲ. ಯೋಜನೆಯಿಂದ ಸ್ಥಳೀಯರಿಗೆ ಉದ್ಯೋಗವಕಾಶ ಲಭಿಸಲಿದೆ’ ಎಂದರು.
ಯೋಜನೆಯ ಬಗ್ಗೆ ತಮಗೆ ಲಿಖಿತ ಮಾಹಿತಿ ನೀಡುವಂತೆ ಗ್ರಾಮಸ್ಥರು ನೀಡಿದ ಮನವಿಯನ್ನು ಸ್ವೀಕರಿಸಿ, ಶಾಸಕರು ಮತ್ತು ಸಚಿವರು ಸ್ಥಳದಿಂದ ತೆರಳಿದರು.
ಈ ಬಗ್ಗೆ ತಮಗೆ ಲಿಖಿತ ಭರವಸೆ ನೀಡಬೇಕೆಂದು ಗ್ರಾಮಸ್ಥರು ಪಟ್ಟು ಹಿಡಿದಾಗ ಶಾಸಕರು ನಿರಾಕರಿಸಿದರು. ಕೊಳತ್ತಾರು ಪದವು ಪರಿಸರದ 250ಕ್ಕೂ ಮಿಕ್ಕಿ ಗ್ರಾಮಸ್ಥರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.