ಮಂಗಳೂರು: ದೆಹಲಿಯ ನಿಜಾಮುದ್ದೀನ್ ಮರ್ಕಜ್ನಲ್ಲಿ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದ ಹಲವರಿಗೆ ಕೊರೊನಾ ತಗುಲಿದ ಹಿನ್ನೆಲೆಯಲ್ಲಿ ದ.ಕ ಜಿಲ್ಲಾಡಳಿತವೂ ಇದೇ 8 ರಿಂದ 20 ರವರೆಗೆ ಮರ್ಕಜ್ ಸಭೆಯಲ್ಲಿ ಭಾಗವಹಿಸಿರುವ ಜನರು ಜಿಲ್ಲೆಯಲ್ಲಿದ್ದರೆ, ಸಾರ್ವಜನಿಕರು ಭಾಗವಹಿಸಿದವರಿದ್ದರೆ ತಕ್ಷಣ 1077 ಅಥವಾ ಜಿಲ್ಲಾ ಆರೋಗ್ಯಾಧಿಕಾರಿಗೆ ಮಾಹಿತಿ ನೀಡುವಂತೆ ಜಿಲ್ಲಾಡಳಿತ ತಿಳಿಸಿದೆ.
ಸದ್ಯಕ್ಕೆ ಜಿಲ್ಲೆಯಿಂದ ಐವರು ಭಾಗವಹಿಸಿರುವ ಬಗ್ಗೆ ಮಾಹಿತಿ ದೊರಕಿದೆ. ಮಂಗಳೂರು ಹೊರವಲಯದ ಚೆಂಬುಗುಡ್ಡೆ ಮತ್ತು ಪಿಲಾರು ಮೂಲದ ಇಬ್ಬರು ದಂಪತಿಗಳು ಹಾಗೂ ಸಂಘಟನೆಯೊಂದರ ಮುಖಂಡನಾಗಿರುವ ಉಪ್ಪಿನಂಗಡಿಯ ವ್ಯಕ್ತಿ ನಿಜಾಮುದ್ದೀನ್ ಪ್ರಾರ್ಥನೆಯಲ್ಲಿ ಭಾಗವಹಿಸಿರುವ ಬಗ್ಗೆ ಮಾಹಿತಿ ದೊರಕಿದೆ.
ನಗರದ ಹೊರವಲಯದ ಲಾರಿ ಚಾಲಕ ಹಾಗೂ ಫರ್ಫ್ಯೂಮ್ ಅಂಗಡಿ ಮಾಲೀಕ ತಮ್ಮ ಪತ್ನಿ ಸಮೇತ ದೆಹಲಿಯ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ್ದರು ಎನ್ನಲಾಗಿದೆ. ಪಿಲಾರು ಹಾಗೂ ಚೆಂಬುಗುಡ್ಡೆಯ ಇಬ್ಬರು ವ್ಯಕ್ತಿಗಳನ್ನು ಜಿಲ್ಲಾಸ್ಪತ್ರೆ ವೆನ್ಲಾಕ್ ಗೆ ಸೇರಿಸಲಾಗಿದ್ದು, ಪತ್ನಿ ಹಾಗೂ ಅವರ ಕುಟುಂಬಸ್ಥರ ಮೇಲೆ ನಿಗಾ ಇಡಲಾಗಿದೆ. ಇನ್ನು ಉಪ್ಪಿನಂಗಡಿ ಮೂಲದ ವ್ಯಕ್ತಿಯ ಮನೆಗೆ ಪೊಲೀಸರು ಹಾಗೂ ಆರೋಗ್ಯಾಧಿಕಾರಿಗಳು ತೆರಳಿ ಆತನ ಮನೆಯ ಹಾಗೂ ಸಂಪರ್ಕಕ್ಕೆ ಬಂದವರ ಮಾಹಿತಿಯನ್ನು ಸಂಗ್ರಹಿಸಿದ್ದಾರೆ. ಅಲ್ಲದೆ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.
ಇವರಲ್ಲದೆ ಇನ್ನು ಹಲವರು ದೆಹಲಿಯ ಪ್ರಾರ್ಥನೆಯಲ್ಲಿ ನಲ್ಲಿ ಪಾಲ್ಗೊಂಡಿರುವ ಶಂಕೆಯಿದ್ದು, ಪಾಲ್ಗೊಂಡವರನ್ನು ಹುಡುಕುವ ಪ್ರಕ್ರಿಯೆಯಲ್ಲಿ ಜಿಲ್ಲಾಡಳಿತ ನಿರತವಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.