ADVERTISEMENT

ಪುತ್ತೂರು:ಅಂಗಡಿಗೆ ಬೆಂಕಿ ಹಚ್ಚಿದ ಮಾಲೀಕ

ಪಂಚೋಡಿಯಲ್ಲಿ ಹೀಗೊಂದು ಘಟನೆ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2020, 1:42 IST
Last Updated 8 ಸೆಪ್ಟೆಂಬರ್ 2020, 1:42 IST
ಪುತ್ತೂರು ತಾಲ್ಲೂಕಿನ ನೆಟ್ಟಣಿಗೆ ಮುಡ್ನೂರು ಗ್ರಾಮದ ಪಂಚೋಡಿ ಮಾವಿನಕಟ್ಟೆಯಲ್ಲಿ ಮಾಲೀಕನೇ ಅಂಗಡಿಗೆ ಬೆಂಕಿ ಹಚ್ಚಿ ಭಸ್ಮಗೊಳಿಸಿದರು
ಪುತ್ತೂರು ತಾಲ್ಲೂಕಿನ ನೆಟ್ಟಣಿಗೆ ಮುಡ್ನೂರು ಗ್ರಾಮದ ಪಂಚೋಡಿ ಮಾವಿನಕಟ್ಟೆಯಲ್ಲಿ ಮಾಲೀಕನೇ ಅಂಗಡಿಗೆ ಬೆಂಕಿ ಹಚ್ಚಿ ಭಸ್ಮಗೊಳಿಸಿದರು   

ಪುತ್ತೂರು: ಮಾಲೀಕನೇ ತನ್ನ ಅಂಗಡಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಅಂಗಡಿಯೊಳಗಿನ ಸಾಮಗ್ರಿಗಳನ್ನು ಸುಟ್ಟು ಭಸ್ಮಗೊಳಿಸಿದ ಘಟನೆಯೊಂದು ಪುತ್ತೂರು ತಾಲ್ಲೂಕಿನ ನೆಟ್ಟಣಿಗೆ ಮುಡ್ನೂರು ಗ್ರಾಮದ ಮಾವಿನಕಟ್ಟೆ ಎಂಬಲ್ಲಿ ಸೋಮವಾರ ನಡೆದಿದೆ.

ಮಹಮ್ಮದ್ ಎಂಬುವವರು ತಮ್ಮ ಮನೆ ಸಮೀಪ ಸ್ಟೇಷನರಿ-ದಿನಸಿ ಸಾಮಗ್ರಿ ವ್ಯಾಪಾರದ ಜತೆಗೆ ಚಹಾ ಕ್ಯಾಂಟೀನ್ ನಡೆಸುತ್ತಿದ್ದರು. ಎಂದಿನಂತೆ ಸೋಮವಾರ ಅಂಗಡಿ ಬಾಗಿಲು ತೆರೆದಿದ್ದ ಅವರು ಮಧ್ಯಾಹ್ನ ಅಂಗಡಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಇದನ್ನು ಕಂಡ ಸ್ಥಳೀಯರು ಬೆಂಕಿ ನಂದಿಸಲು ಮುಂದಾದ ವೇಳೆ ಮಹಮ್ಮದ್ ‘ನನ್ನ ಅಂಗಡಿಗೆ ನಾನೇ ಬೆಂಕಿ ಹಚ್ಚಿದ್ದೇನೆ. ಅಂಗಡಿ ಸುಟ್ಟು ಭಸ್ಮವಾಗಲಿ ನಿಮಗೇನು’ ಎಂದು ಬೆಂಕಿ ನಂದಿಸಲು ಬಂದವರನ್ನು ತಡೆದರು. ಅವರು ಮನೆಗೆ ತೆರಳಿದ ಬಳಿಕ ಸ್ಥಳೀಯರು ಬೆಂಕಿ ನಂದಿಸಿದರು. ಸ್ಥಳೀಯರು ನೀಡಿದ ಮಾಹಿತಿಯಂತೆ, ಸಂಪ್ಯ ಪೊಲೀಸ್ ಠಾಣೆಯ ಎಎಸ್ಐ ತಿಮ್ಮಯ್ಯ ಗೌಡ ಹಾಗೂ ಈಶ್ವರಮಂಗಲ ಹೊರಠಾಣೆಯ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಬಂದು ಬೆಂಕಿ ನಂದಿಸಲು ಸಹಕರಿಸಿದರು.

ಚಹಾ ಮಾಡಲು ಬಳಸುತ್ತಿದ್ದ ಸ್ಟೌವ್‌ಗೆ ಅಳವಡಿಸಿದ್ದ ಸಣ್ಣ ಸಿಲಿಂಡರ್ ಸ್ಫೋಟಗೊಂಡಿದೆ. ಅಂಗಡಿಯ ಮಾಡು ಹೊರತುಪಡಿಸಿ ಉಳಿದೆಲ್ಲವೂ ಬೆಂಕಿಗಾಹುತಿಯಾಗಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.