ಬೆಳ್ತಂಗಡಿ: ತಾಲ್ಲೂಕಿನ ವೇಣೂರು ಸಮೀಪದ ಮೂಡುಕೋಡಿ ಗ್ರಾಮ ನಡ್ತಿಕಲ್ಲಿನ ದಾಡೇಲು ಬಳಿ ಫಲ್ಗುಣಿ ನದಿಗೆ ವಿಷ ಹಾಕಿ ಮೀನುಗಳ ಸಾವಿಗೆ ಕಾರಣರಾದ ಆರೋಪದಲ್ಲಿ ಮೂಡುಕೋಡಿ ಗ್ರಾಮದ ಇರ್ಷಾದ್ ಹಾಗೂ ಮಹಮ್ಮದ್ ಹನೀಫ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.
ಇವರು ಆಟೊ ಚಾಲಕರಾಗಿದ್ದಾರೆ. ಏಪ್ರಿಲ್ 30ರಂದು ಫಲ್ಗುಣಿ ನದಿಗೆ ವಿಷ ಹಾಕಿ ಲಕ್ಷಾಂತರ ಮೀನುಗಳ ಸಾವಿಗೆ ಕಾರಣರಾಗಿದ್ದರು. ಸತ್ತ ಮೀನುಗಳು ನೀರಿನ ಮೇಲ್ಭಾಗದಲ್ಲಿ ತೇಲಾಡುತ್ತಿದ್ದವು. ಪರಿಸರದಲ್ಲಿ ದಟ್ಟ ವಾಸನೆಯ ಜೊತೆಗೆ ಅನೇಕ ಪ್ರಾಣಿ-ಪಕ್ಷಿಗಳು ತಿನ್ನಲು ಬರುತ್ತಿದ್ದವು. ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದು, ಆರೋಪಿಗಳ ಬಂಧನಕ್ಕೆ ಆಗ್ರಹಿಸಿದ್ದರು.
ಆರೋಪಿಗಳ ನದಿಗೆ ಏಕೆ ವಿಷ ಹಾಕಿದರು ಎಂಬ ಬಗ್ಗೆ ಕಾರಣ ಇನ್ನೂ ತಿಳಿದುಬಂದಿಲ್ಲ.
ನದಿ ದಡದಲ್ಲಿ ರಾಶಿರಾಶಿ ಮೀನು
ಏಪ್ರಿಲ್ 30ರ (ಗುರುವಾರ)ರಾತ್ರಿ ಈ ಕೃತ್ಯ ನಡೆದಿರುವ ಶಂಕೆ ವ್ಯಕ್ತವಾಗಿತ್ತು. ಶುಕ್ರವಾರ ಮುಂಜಾನೆ ನದಿಯ ದಡದಲ್ಲಿ ರಾಶಿರಾಶಿ ಮೀನುಗಳು ಸತ್ತು ಬಿದ್ದಿದ್ದವು. ದುರ್ನಾತದಿಂದ ಆ ಪರಿಸರಕ್ಕೆ ಹೋಗದಂತಹ ಸ್ಥಿತಿ ನಿರ್ಮಾಣವಾಗಿ, ರೋಗ ಹರಡುವ ಭೀತಿ ಎದುರಾಗಿತ್ತು. ಪರಿಸರದ ಸುತ್ತಮುತ್ತಲಿನ ಜನ ಭಯಬೀತರಾಗಿದ್ದರು.
ನದಿಗೆವಿಷಹಾಕಿರುವುದರಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಈ ಕೆಲಸ ಯಾರೇ ಮಾಡಿರಲಿ ಅವರಿಗೆ ತಕ್ಕ ಶಿಕ್ಷೆಯಾಗಬೇಕು. ಒಂದು ವೇಳೆ ಸರಿಯಾದ ಶಿಕ್ಷೆ ಆಗದೇ ಇದ್ದಲ್ಲಿ ಹೋರಾಟದ ಎಚ್ಚರಿಕೆಯನ್ನು ಸ್ಥಳೀಯರು ನೀಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.