ADVERTISEMENT

ಉಜಿರೆ: ಮನಸೂರೆಗೊಂಡ ‘ಪರಶುರಾಮ’

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2023, 4:56 IST
Last Updated 17 ಫೆಬ್ರುವರಿ 2023, 4:56 IST
 ಪರಶುರಾಮ ನಾಟಕದ ದೃಶ್ಯ
 ಪರಶುರಾಮ ನಾಟಕದ ದೃಶ್ಯ   

ಉಜಿರೆ: ಬೆಳ್ತಂಗಡಿ ತಾಲ್ಲೂಕು ಮಟ್ಟದ ಸಾಂಸ್ಕೃತಿಕ ಸಂಘಟನೆ ‘ಸಮೂಹ’ದ ಆಶ್ರಯದಲ್ಲಿ ಉಜಿರೆಯ ಬಯಲು ರಂಗಮಂದಿರದಲ್ಲಿ ‘ಪರಶುರಾಮ’ ನಾಟಕ ಪ್ರದರ್ಶನ ನಡೆಯಿತು.

ಕಾರ್ಕಳದ ಯಕ್ಷರಂಗಾಯಣದ ನೇತೃತ್ವದಲ್ಲಿ ಜೀವನ್‌ರಾಂ ಸುಳ್ಯ ನಿರ್ದೇಶನದಲ್ಲಿ ಪ್ರದರ್ಶನಗೊಂಡ ನಾಟಕವು ಭಾವಪೂರ್ಣ ಅಭಿನಯ, ಕಲಾವಿದರ ವಾಕ್‌ಚಾತುರ್ಯ, ಅರ್ಥಗರ್ಭಿತ ಸಂಭಾಷಣೆಯೊಂದಿಗೆ ಪ್ರೇಕ್ಷಕರ ಮನಸೂರೆಗೊಳ್ಳುವಲ್ಲಿ ಯಶಸ್ವಿಯಾಯಿತು.

ಪುರಾಣ, ಜಾನಪದ, ಕಾವ್ಯ, ಯಕ್ಷಗಾನ, ಧರ್ಮ ಪ್ರಭಾವನೆ, ಹಾಗೂ ಸಮಕಾಲೀನ ವಿದ್ಯಮಾನಗಳ ಅಭಿವ್ಯಕ್ತಿಯೊಂದಿಗೆ ನಾಟಕ ಯಶಸ್ವಿಯಾಗಿ ಮೂಡಿ ಬಂತು.

ADVERTISEMENT

ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ, ಹೇಮಾವತಿ ಹೆಗ್ಗಡೆ, ಡಿ. ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ‘ಸಮೂಹ’ದ ಅಧ್ಯಕ್ಷ ಡಾ. ಕುಮಾರ ಹೆಗ್ಡೆ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್, ಜಾನಪದ ವಿಶ್ವವಿದ್ಯಾಲಯದ ಮಾಜಿ ಕುಲಪತಿ ಡಾ. ಕೆ. ಚಿನ್ನಪ್ಪ ಗೌಡ ಮತ್ತು ನಾಟಕ ರಚನೆಕಾರ ಶಶಿರಾಜ್ ಕಾವೂರು ನಾಟಕ ವೀಕ್ಷಿಸಿದರು. ‘ಅಯ್ಯಯ್ಯ ಎಂಚ ಪೊರ್ಲಾಂಡ್’ ಎಂದು ಪ್ರೇಕ್ಷಕರು ಅಚ್ಚರಿ ವ್ಯಕ್ತಪಡಿಸಿದರು.

ವಾರ್ಷಿಕೋತ್ಸವ ಇಂದು

ಉಜಿರೆಯ ಅಳದಂಗಡಿಯಲ್ಲಿ ಬೆಟ್ಟದ ಬಸದಿಯ ಪಂಚಕಲ್ಯಾಣ ಮಹೋತ್ಸವ ಮತ್ತು ಬ್ರಹ್ಮಯಕ್ಷ ದೇವರ ಪ್ರತಿಷ್ಠಾಮಹೋತ್ಸವದ ವಾರ್ಷಿಕೋತ್ಸವವು ಶುಕ್ರವಾರ ಕಾರ್ಕಳ ಜೈನಮಠದ ಲಲಿತಕೀರ್ತಿ ಭಟ್ಟಾರಕರ ಉಪಸ್ಥಿತಿಯಲ್ಲಿ ನಡೆಯಲಿದೆ.

ಶಿರ್ಲಾಲು ಹಿತ್ತಿಲು ಮನೆ ದಿವಂಗತ ಜಿನರಾಜ ಪೂವಣಿ ಮತ್ತು ದಿ. ಸುನಂದಾ ದೇವಿ ಸ್ಮರಣಾರ್ಥ ಅವರ ಮಕ್ಕಳು ಮತ್ತು ಕುಟುಂಬದವರು ಬಸದಿಯ ಪುರೋಹಿತರಿಗಾಗಿ ನಿರ್ಮಿಸಿದ ‘ಜಿನಸಿದ್ಧ’ ಮನೆಯನ್ನು ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಅರ್ಚಕರಿಗೆ ಹಸ್ತಾಂತರಿಸಲಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.