ADVERTISEMENT

ಒಳಪೇಟೆ: ₹ 6 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ಕಳವು

ಹಳೆಯಂಗಡಿ ದುರ್ಗಾಪರಮೇಶ್ವರಿ ವಿನಾಯಕ ಮಠ

​ಪ್ರಜಾವಾಣಿ ವಾರ್ತೆ
Published 14 ಜುಲೈ 2021, 5:26 IST
Last Updated 14 ಜುಲೈ 2021, 5:26 IST
ಹಳೆಯಂಗಡಿಯ ದುರ್ಗಾಪರಮೇಶ್ವರಿ ಮಠ 
ಹಳೆಯಂಗಡಿಯ ದುರ್ಗಾಪರಮೇಶ್ವರಿ ಮಠ    

ಮೂಲ್ಕಿ: ಮೂಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಹಳೆಯಂಗಡಿ ಒಳಪೇಟೆಯ ದುರ್ಗಾಪರಮೇಶ್ವರಿ ವಿನಾಯಕ ಮಠದಲ್ಲಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಸಹಿತ ನಗದು ಕಳವಾಗಿದೆ.

ಗರ್ಭಗುಡಿಗೆ ಹಾಕಿದ್ದ ಐದೂ ಬೀಗಗಳನ್ನು ಒಡೆದು, ದೇವಿಯ ಪ್ರಭಾವಳಿ, ಕವಚ, ಚಿನ್ನದ ಮೂಗುತ್ತಿ, ಗರ್ಭಗುಡಿಯ ಪಕ್ಕದಲ್ಲಿರುವ ಗಣಪತಿಯ ಗುಡಿಯ ಎರಡೂ ಬೀಗ ಒಡೆದು ಗಣಪತಿ ದೇವರ ಕವಚ ಮತ್ತು ಪ್ರಭಾವಳಿ, ಚಿನ್ನದ ತಿಲಕವನ್ನು ಕಳ್ಳರು ಕಳವು ಮಾಡಿದ್ದಾರೆ.

ಶ್ರೀದೇವಿಯ ಗರ್ಭಗುಡಿ ಹೊರ ಬದಿಯ ಕಾಣಿಕೆ ಡಬ್ಬಿ ಹಾಗೂ ಗಣಪತಿ ದೇವರ ಹೊರ ಭಾಗದಲ್ಲಿರುವ ಕಾಣಿಕೆ ಡಬ್ಬಿಯ ಬೀಗ ಒಡೆದು ಅದರಲ್ಲಿನ ನಗದನ್ನು ದೋಚಿದ್ದಾರೆ. ಸುಮಾರು 9.5 ಕೆ.ಜಿಯಷ್ಟು ಬೆಳ್ಳಿ ಸಹಿತ ಚಿನ್ನಾಭರಣ ಕಳವಾಗಿದ್ದು, ಅವುಗಳ ಮೌಲ್ಯ ₹ 6.5 ಲಕ್ಷ ಎಂದು ಅಂದಾಜಿಸಲಾಗಿದೆ.

ADVERTISEMENT

ಮಂಗಳವಾರ ಬೆಳಿಗ್ಗೆ ಅರ್ಚಕರು ಪೂಜೆಗೆಂದು ಬಂದಾಗ ದೇವಸ್ಥಾನದ ಹಿಂದಿನ ಬದಿಯ ಬಾಗಿಲ ಚಿಲಕವನ್ನು ಒಡೆದ ಸ್ಥಿತಿಯಲ್ಲಿದ್ದುದನ್ನು ಗಮನಿಸಿ ಕೂಡಲೇ ದೇವಸ್ಥಾನದ ಆಡಳಿತ ವರ್ಗಕ್ಕೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕೆ ಮೂಲ್ಕಿ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಕುಸುಮಾಧರ ಬಂದಿದ್ದಾರೆ. ಶ್ವಾನದಳ, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ದೇವಸ್ಥಾನದ ಆಡಳಿತ ಮೊಕ್ತೇಸರ ದಿವಾಕರ ಆಚಾರ್ಯ ಅವರು ಮೂಲ್ಕಿ ಠಾಣೆಗೆ ದೂರು ನೀಡಿದ್ದಾರೆ. ಎರಡು ವರ್ಷದ ಹಿಂದೆಯಷ್ಟೇ ಪುರಾತನ ದೇವಳವನ್ನು ಜೀರ್ಣೋದ್ಧಾರಗೊಳಿಸಿ ನಿತ್ಯ ಪೂಜಾ ವಿಧಿ ವಿಧಾನಗಳು ಹಾಗೂ ವಾರ್ಷಿಕ ಭಜನಾ ಮಂಗಲೋತ್ಸವ ಸಹಿತ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದ್ದವು.

ಎಸಿಪಿ ಮಹೇಶ್ ಕುಮಾರ್ ಭೇಟಿ ನೀಡಿ ಮಾರ್ಗದರ್ಶನ ನೀಡಿದ್ದಾರೆ. ತನಿಖೆಗೆ ಮೂಲ್ಕಿ ಪೊಲೀಸರ ವಿಶೇಷ ತಂಡವನ್ನು ರಚಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.