ADVERTISEMENT

ದಕ್ಷಿಣ ಕನ್ನಡ: ಆತ್ಮಹತ್ಯೆಗೆ ಮುಂದಾಗಿದ್ದ ಯುವಕನ ರಕ್ಷಿಸಿದ ಪೊಲೀಸರು

ತಣ್ಣೀರುಬಾವಿ ಬೀಚ್‌ನಲ್ಲಿ ಚಿತ್ರೀಕರಿಸಿದ್ದ ವಿಡಿಯೊದಿಂದ ಸಿಕ್ಕಿತ್ತು ಸುಳಿವು

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2025, 6:30 IST
Last Updated 5 ನವೆಂಬರ್ 2025, 6:30 IST
<div class="paragraphs"><p>ಬೀಚ್‌ – ಪ್ರಾತಿನಿಧಿಕ ಚಿತ್ರ</p></div>

ಬೀಚ್‌ – ಪ್ರಾತಿನಿಧಿಕ ಚಿತ್ರ

   

ಮಂಗಳೂರು: ಆತ್ಮಹತ್ಯೆಗೆ ಮುಂದಾಗಿದ್ದ ನಗರದ ಪಂಜಿಮೊಗರಿನ ಯುವಕನನ್ನು ಪಣಂಬೂರು ಠಾಣೆಯ ಪೊಲೀಸರು ಸೋಮವಾರ ರಾತ್ರಿ ರಕ್ಷಣೆ ಮಾಡಿದ್ದಾರೆ.

ಕೌಟುಂಬಿಕ ಕಲಹದಿಂದ ಮನನೊಂದಿದ್ದ ಯುವಕ, ತನ್ನ ನಾಲ್ಕು ವರ್ಷದ ಮಗಳನ್ನು ತಣ್ಣೀರುಬಾವಿ ಕಡಲ ಕಿನಾರೆಗೆ ಸೋಮವಾರ ಸಂಜೆ 6.15ರ ಸುಮಾರಿಗೆ ಕರೆದೊಯ್ದಿದ್ದ. ಕಿನಾರೆಯಲ್ಲಿ ವಿಡಿಯೊ ಮಾಡಿ ಅದನ್ನು ತನ್ನ ಅಕ್ಕನಿಗೆ ಕಳುಹಿಸಿದ್ದ. ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ ಆ ವಿಡಿಯೊವನ್ನು ಯಾರೋ ಪೊಲೀಸರಿಗೆ ತಲುಪಿಸಿದ್ದರು. ಯುವಕನು ಆ ವಿಡಿಯೊದಲ್ಲಿ, ‘ನಾವು ಹೋಗಿ ಸಾಯುವ. ಆತ್ಮಹತ್ಯೆ ಮಾಡಿಕೊಳ್ಳುವ. ಅಮ್ಮನೂ ಬೇಡ, ಯಾರೂ ಬೇಡ ನಮಗೆ’ ಎಂದು ಮಗುವನ್ನು ಉದ್ದೇಶಿಸಿ ಹೇಳಿದ್ದ. ಆಗ  ಮಗುವು. ‘ಅಪ್ಪ... ಸಾಯುವುದು ಬೇಡ’ ಎಂದು ಕೇಳಿಕೊಂಡಿತ್ತು. ‘ನಾವು ಸಾಯುವ. ನಿನ್ನ ಅಮ್ಮ ಇನ್ನು ನೆಮ್ಮದಿಯಿಂದ ಇರಲಿ’ ಎಂದು ಯುವಕ ಹೇಳಿದ್ದ. ಆ ವಿಡಿಯೊವನ್ನು ಎಲ್ಲಿ ಚಿತ್ರಿಸಲಾಗಿದೆ ಎಂಬುದು ಗೊತ್ತಾಗುತ್ತಿರಲಿಲ್ಲ. ವಿಡಿಯೊದಲ್ಲಿರುವ ವ್ಯಕ್ತಿಯ ಹುಡುಕಾಟಕ್ಕಾಗಿ ಪಣಂಬೂರು ಠಾಣೆಯ ಇನ್‌ಸ್ಪೆಕ್ಟರ್‌ ಅವರು ಇಬ್ಬರು ಸಿಬ್ಬಂದಿಯನ್ನು ಕಳುಹಿಸಿದ್ದರು. 

ADVERTISEMENT

‘ಆ ವಿಡಿಯೊವನ್ನು ಆಳವಾಗಿ ವಿಶ್ಲೇಷಣೆಗೆ ಒಳಪಡಿಸಿದಾಗ ಅದು ತಣ್ಣೀರುಬಾವಿ ಬೀಚ್‌ನಲ್ಲಿ ಚಿತ್ರೀಕರಿಸಿದಂತೆ ಕಂಡುಬಂದಿತ್ತು. ನಮ್ಮ ಠಾಣೆಯ ಸಿಬ್ಬಂದಿ ಆ ವ್ಯಕ್ತಿಗಾಗಿ ಪಣಂಬೂರು ತಣ್ಣೀರುಬಾವಿ ಬೀಚ್‌ಗಳಲ್ಲಿ ಹುಡುಕಿದ್ದರು. ಆತ ತಣ್ಣೀರುಬಾವಿ ಬೀಚ್‌ಗೆ ಸೋಮವಾರ ಸಂಜೆ ಮಗುವಿನ ಜೊತೆಗೆ ಬಂದಿದ್ದನ್ನು ಕೆಲವರು ನೋಡಿದ್ದರು. ಆ ಮಾಹಿತಿ ಆಧರಿಸಿ ಹುಡುಕುವಾಗ ಆತನ ಫೋನ್‌ ನಂಬರ್‌ ಸಿಕ್ಕಿತ್ತು. ಆದರೆ ಅದು ಸ್ವಿಚ್ ಆಫ್‌ ಆಗಿತ್ತು. ರಾತ್ರಿ 9.15ರ ಸುಮಾರಿಗೆ ಫೋನ್‌ ಮತ್ತೆ ಸ್ವಿಚ್ ಆನ್‌ ಆಯಿತು. ಆ ಮೊಬೈಲ್ ಪಂಜಿಮೊಗರುವಿನಲ್ಲಿ ಇರುವುದು ಗೊತ್ತಾಯಿತು. ಈ ಬಗ್ಗೆ ಸ್ಥಳೀಯ ಕಾವೂರು ಠಾಣೆಗೆ ಮಾಹಿತಿ ನೀಡಿದೆವು. ಜೊತೆಗೆ ನಮ್ಮ ಸಿಬ್ಬಂದಿ ಪಂಜಿಮೊಗರುವಿನಲ್ಲಿರುವ ಯುವಕನ ಮನೆಗೆ ಧಾವಿಸಿದರು’ ಎಂದು ಪೊಲೀಸರು ಮಾಹಿತಿ ನೀಡಿದರು.

‘ಪೊಲೀಸ್‌ ಸಿಬ್ಬಂದಿ ಮನೆಗೆ ತಲುಪಿದಾಗ, ವಿಡಿಯೊದಲ್ಲಿದ್ದ ವ್ಯಕ್ತಿ ಮನೆಯ ಚಾವಣಿಗೆ ಬಟ್ಟೆಯನ್ನು ಕಟ್ಟಿ, ಆತ್ಮಹತ್ಯೆ ಮಾಡಿಕೊಳ್ಳಲು ತಯಾರಿ ನಡೆಸಿದ್ದ. ಮಗುವೂ ಆತನ ಜೊತೆಗೆ ಮನೆಯಲ್ಲೇ ಇತ್ತು. ಸಿಬ್ಬಂದಿ ಕೇಳಿಕೊಂಡರೂ ಆತ ಬಾಗಿಲು ತೆಗೆದಿರಲಿಲ್ಲ. ಬಳಿಕ ಸಿಬ್ಬಂದಿ ಬಾಗಿಲನ್ನು ಒಡೆದು ಮನೆಯೊಳಗೆ ನುಗ್ಗಿ ಆತನನ್ನು ರಕ್ಷಣೆ ಮಾಡಿದರು. ಪೊಲೀಸ್ ಸಿಬ್ಬಂದಿ ಆತ ಮನೆಯನ್ನು ತಲುಪುವುದು ಐದು ನಿಮಿಷ ತಡವಾಗಿದ್ದರೂ ಆತ ಆತ್ಮಹತ್ಯೆ ಮಾಡಿಕೊಳ್ಳುವ ಸಾಧ್ಯತೆ ಇತ್ತು’ ಎಂದು ಅವರು ವಿವರಿಸಿದರು.   

‘ಆ ಯುವಕ ಏಳು ವರ್ಷದ ಹಿಂದೆ ಮದುವೆಯಾಗಿತ್ತು. ದಂಪತಿಗೆ ನಾಲ್ಕು ವರ್ಷದ ಮಗಳು ಇದ್ದಾಳೆ. ಗಂಡ– ಹೆಂಡತಿ ನಡುವೆ ಎರಡು ವರ್ಷಗಳಿಂದ ಮನಃಸ್ತಾಪ ಉಂಟಾಗಿತ್ತು. ಈಚೆಗೆ ಪತ್ನಿಯು ಪತಿಯ ವಿರುದ್ಧ ಮಹಿಳಾ ಪೊಲೀಸ್‌ ಠಾಣೆಗೆ ದೂರನ್ನು ನೀಡಿದ್ದಳು. ರಿಕ್ಷಾ ಚಾಲಕನಾಗಿ ದುಡಿಯುತ್ತಿದ್ದ ಆತ ಈ ಬೆಳವಣಿಗೆ ಬಳಿಕ ಮತ್ತಷ್ಟು ಕುಗ್ಗಿಹೋಗಿದ್ದ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಯುವಕನ ರಕ್ಷಣೆ ಮಾಡಿದ ಪಣಂಬೂರು ಪೊಲೀಸರ ಸಕಾಲಿಕ ಕ್ರಮದ ಬಗ್ಗೆ ನಗರ ಪೊಲೀಸ್‌ ಕಮಿಷನರ್‌ ಸುಧೀರ್ ಕುಮಾರ್ ರೆಡ್ಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.