ಬೆಳ್ತಂಗಡಿ: ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ಆರೋಪಿ, ಬೆಳ್ಳಾರೆ ನಿವಾಸಿ ಸಾಫಿ ಬೆಳ್ಳಾರೆಯನ್ನು ಪೊಲೀಸರು ಸೋಮವಾರ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು.
ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಸಾಫಿಯನ್ನು ಬಾಡಿ ವಾರೆಂಟ್ ಮೂಲಕ ಬೆಳ್ತಂಗಡಿ ಕೋರ್ಟ್ಗೆ ಹಾಜರುಪಡಿಸಲಾಗಿದೆ.
2017ರಲ್ಲಿ ಆರ್ಎಸ್ಎಸ್ ಹಾಗೂ ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಅವಹೇಳನಕಾರಿ ಭಾಷಣ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆಗಾಗಿ ಅವರನ್ನು ಕರೆತರಲಾಗಿದೆ. ಪ್ರವೀಣ್ ನೆಟ್ವಾರು ಹತ್ಯೆ ಪ್ರಕರಣದಲ್ಲಿ ಎರಡು ವರ್ಷಗಳ ಹಿಂದೆ ಎನ್ಐಎ ಅವರನ್ನು ಬಂಧಿಸಿದೆ. ಆರೋಪಿಗೆ ಈವರೆಗೂ ಜಾಮೀನು ಮಂಜೂರಾಗಿಲ್ಲ. ಕೋರ್ಟ್ಗೆ ಹಾಜರು ಪಡಿಸಿದ ನಂತರ ಮತ್ತೆ ಅವರನ್ನು ಬೆಂಗಳೂರಿನ ಪರಪ್ಪನ ಅಗ್ರಹಾರದ ಜೈಲಿಗೆ ಕರೆದುಕೊಂಡು ಹೋಗಲಾಯಿತು.
ಆರೋಪಿಗೆ ಮುತ್ತು: ಆರೋಪಿಯನ್ನು ಕೋರ್ಟ್ಗೆ ಹಾಜರುಪಡಿಸಲು ಪೊಲೀಸರು ಕರೆತಂದಾಗ ಪೊಲೀಸರ ಎದುರಲ್ಲೇ ಯುವಕನೊಬ್ಬ ಆರೋಪಿಯ ಹಣೆಗೆ ಮುತ್ತು ಕೊಟ್ಟ ಘಟನೆ ನಡೆಯಿತು. ಮುತ್ತು ಕೊಟ್ಟ ಯುವಕ ಉಜಿರೆ ನಿವಾಸಿ ಹೈದರ್ ನಿರ್ಸಾಲ್ ಅವರ ಪುತ್ರ ಸಹಲ್ ನಿರ್ಸಾಲ್ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ದೃಶ್ಯವು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಬೆನ್ನಲ್ಲೇ, ಬೆಳ್ತಂಗಡಿ ಪೊಲೀಸರು ಸಹಲ್ ನಿರ್ಸಾಲ್ಗಾಗಿ ಹುಡುಕಾಟ ನಡೆಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.