ಮಂಗಳೂರು: ಮಂಗಳೂರು ಪತ್ರಿಕಾ ಭವನ ಕಟ್ಟಡದ ಅಭಿವೃದ್ಧಿ ಕಾಮಗಾರಿಗೆ ಸಂಸದರ ನಿಧಿಯಿಂದ ₹10 ಲಕ್ಷ ಮಂಜೂರುಗೊಳಿಸಲಾಗಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.
ನಗರದ ಉರ್ವ ಮಾರ್ಕೆಟ್ ಬಳಿ ಇರುವ ಪತ್ರಿಕಾ ಭವನದ ನವೀಕೃತ ಕಟ್ಟಡದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಂಗಳೂರಿನಲ್ಲಿ ಪತ್ರಕರ್ತರ ಸಂಘ, ಪ್ರೆಸ್ಕ್ಲಬ್ ಹಾಗೂ ಪತ್ರಿಕಾ ಭವನ ಟ್ರಸ್ಟ್ ಈ ಮೂರು ಸಂಘಟನೆಗಳು ಇದ್ದರೂ ಎಲ್ಲವೂ ಒಗ್ಗಟ್ಟಿನಿಂದ ಇವೆ. ಮಂಗಳೂರಿನ ಪತ್ರಕರ್ತರು ಎಡ, ಬಲ ಯಾವುದೇ ಪಂಥದಲ್ಲಿ ಗುರುತಿಸಿಕೊಳ್ಳದೆ ಸಮಾನ ಮನಃಸ್ಥಿತಿಯನ್ನು ಹೊಂದಿದ್ದಾರೆ. ಇದು ಇಡೀ ರಾಜ್ಯಕ್ಕೆ ಮಾದರಿಯಾಗಿದೆ ಎಂದರು.
ಮಂಗಳೂರು ಪ್ರೆಸ್ಕ್ಲಬ್ ಸ್ಥಾಪಕ ಅಧ್ಯಕ್ಷ ಕೆ.ಆನಂದ ಶೆಟ್ಟಿ ನವೀಕೃತ ಕಟ್ಟಡ ಉದ್ಘಾಟಿಸಿದರು. 2002ರಲ್ಲಿ ಸ್ಥಾಪನೆಯಾದ ಪ್ರೆಸ್ಕ್ಲಬ್ 21 ವರ್ಷಗಳಲ್ಲಿ ಸಾಗಿಬಂದ ಹಾದಿಯನ್ನು ಅವರು ಮೆಲುಕು ಹಾಕಿದರು.
ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಮಾತನಾಡಿ, ನ.20ರಂದು ಪತ್ರಕರ್ತರ ಜಿಲ್ಲಾ ಸಮ್ಮೇಳನ ಮಂಗಳೂರಿನಲ್ಲಿ ನಡೆಯಲಿದೆ. ಜನವರಿ 4ರಿಂದ 6ರವರೆಗೆ ಮಂಗಳೂರಿನಲ್ಲಿ ಪತ್ರಕರ್ತರ ರಾಜ್ಯ ಮಟ್ಟದ ಕ್ರಿಕೆಟ್ ಟೂರ್ನಿ ನಡೆಯಲಿದೆ ಎಂದರು.
ನವೀಕರಣ ಕಾಮಗಾರಿಯ ಗುತ್ತಿಗೆದಾರ ಪುರಂದರ, ಪ್ರೆಸ್ಕ್ಲಬ್ ವ್ಯವಸ್ಥಾಪಕ ಅಭಿಷೇಕ್, ಉದ್ಯೋಗಿ ಚಂಚಲಾಕ್ಷಿ ಅವರನ್ನು ಗೌರವಿಸಲಾಯಿತು.
ಶಾಸಕ ವೇದವ್ಯಾಸ್ ಕಾಮತ್, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ ಆರ್., ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ, ಪ್ರೆಸ್ಕ್ಲಬ್ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ಇದ್ದರು. ಪ್ರೆಸ್ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಸ್ವಾಗತಿಸಿದರು. ಪತ್ರಕರ್ತ ರವೀಂದ್ರ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೆಸ್ಕ್ಲಬ್ ಕಾರ್ಯಕಾರಿಣಿ ಸಮಿತಿ ಸದಸ್ಯ ಆತ್ಮಭೂಷಣ್ ವಂದಿಸಿದರು. ಪತ್ರಿಕಾ ಭವನ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ವೇಣುವಿನೋದ್ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.