
ಮಂಗಳೂರು: ಕಂಬಳ ಕುರಿತ ‘ಬಿರ್ದ್ ದ ಕಂಬಳ’ ಸಿನಿಮಾದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ದೃಶ್ಯಕ್ಕೆ ಕತ್ತರಿ ಹಾಕಲು ಒತ್ತಡ ಬಂದಿತ್ತು ಎಂದು ನಿರ್ದೇಶಕ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ಶನಿವಾರ ಇಲ್ಲಿ ಹೇಳಿದರು.
ಸಿನಿಮಾದ ಹಾಡು ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಧರ್ಮಸ್ಥಳದ ವಿಷಯದಲ್ಲಿ ವಿವಾದ ಆಗುತ್ತಿದ್ದಾಗ, ಹೆಗ್ಗಡೆ ಅವರ ದೃಶ್ಯ ತೆಗೆದುಹಾಕಬೇಕು ಎಂದು ಕೆಲವರು ಒತ್ತಾಯಿಸಿದ್ದರು ಎಂದರು.
‘ಸಿನಿಮಾ ಬೇರೆ, ರಾಜಕೀಯ ಬೇರೆ. ಚಿತ್ರದ ದೃಶ್ಯ ತೆಗೆಯಲು ಸಾಧ್ಯವಿಲ್ಲ ಎಂದು ಹೇಳಿದ್ದೆ. ಹಾಗಾದರೆ ಬಿಡುಗಡೆ ವೇಳೆ ಈ ದೃಶ್ಯ ಇರಬಾರದು ಎಂದು ಹೇಳಿದರು. ಅದಕ್ಕೂ ಒಪ್ಪಲಿಲ್ಲ' ಎಂದು ಹೇಳಿದರು.
‘ಚಿತ್ರದ ಕೊನೆಯಲ್ಲಿ ಎರಡು ಕುಟುಂಬಗಳಿಗೆ ಬುದ್ದಿ ಹೇಳುವಾಗಿನ ಪಾತ್ರಕ್ಕೆ ಹೆಗ್ಗಡೆ ಅವರನ್ನು ಆಯ್ಕೆ ಮಾಡಲಾಗಿದೆ. ಈ ಪಾತ್ರ ನಿರ್ವಹಿಸಲು ಅವರು ಅತ್ಯಂತ ಸೂಕ್ತ ವ್ಯಕ್ತಿ. ಕೋಟಿ ಮೊತ್ತ ಕೊಟ್ಟರೂ ಈ ಪಾತ್ರಕ್ಕೆ ಇಂಥ ವ್ಯಕ್ತಿ ಸಿಗುತ್ತಿರಲಿಲ್ಲ' ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.