ADVERTISEMENT

ಭಿನ್ನ ಕೋಮಿನ ಯುವಕರು–ಯುವತಿ ಪ್ರಯಾಣಕ್ಕೆ ಅಡ್ಡಿ: ಆಕ್ರೋಶ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2021, 19:03 IST
Last Updated 20 ಮಾರ್ಚ್ 2021, 19:03 IST

ಮಂಗಳೂರು: ಬೇರೆ ಧರ್ಮದ ಯುವತಿ ಹಾಗೂ ಇಬ್ಬರು ಯುವಕರು ಪ್ರಯಾಣಿಸುತ್ತಿದ್ದ ಬಸ್ ಅನ್ನು ಬಜರಂಗದಳದ ಕಾರ್ಯಕರ್ತರು ಬಂಟ್ವಾಳದಲ್ಲಿ ತಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಬುಧವಾರ ಈ ಘಟನೆ ನಡೆದಿದೆ. ರಾತ್ರಿ ಇಲ್ಲಿಂದ ಮೂವರು ಬೆಂಗಳೂರಿಗೆ ತೆರಳಲು ಬಸ್‌ ಏರಿದ್ದರು. ಈ ಬಗ್ಗೆ ಮಾಹಿತಿ ಪಡೆದ ಬಜರಂಗದಳದ ಕಾರ್ಯಕರ್ತರು, ಬಂಟ್ವಾಳ ಬಸ್‌ ನಿಲ್ದಾಣದ ಬಳಿ ಬಸ್‌ ಅನ್ನು ನಿಲ್ಲಿಸಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು, ಯುವತಿ ಹಾಗೂ ಇಬ್ಬರು ಯುವಕರನ್ನು ರಕ್ಷಿಸಿ, ಠಾಣೆಗೆ ಕರೆದುಕೊಂಡು ಹೋಗಿದ್ದರು.

ಈ ಬಗ್ಗೆ ಮಾಹಿತಿ ನೀಡಿರುವ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಬಿ.ಎಂ. ಲಕ್ಷ್ಮಿಪ್ರಸಾದ್‌, ‘ಕುಂದಾಪುರದ ಇಬ್ಬರು ಯುವಕರು ಹಾಗೂ ಕೇರಳದ ಯುವತಿ ಮದುವೆಗಾಗಿ ಬೆಂಗಳೂರಿಗೆ ತೆರಳುತ್ತಿದ್ದರು. ಬಂಟ್ವಾಳದಲ್ಲಿ ತಂಡವೊಂದು ಬಸ್‌ ತಡೆದಿತ್ತು. ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು, ಮೂವರನ್ನು ರಕ್ಷಣೆ ಮಾಡಿದ್ದು, ನಂತರ ಸುರಕ್ಷಿತವಾಗಿ ಬೆಂಗಳೂರಿಗೆ ಕಳುಹಿಸಿಕೊಡಲಾಗಿದೆ’ ಎಂದು ತಿಳಿಸಿದ್ದಾರೆ.

ADVERTISEMENT

‘ದೂರು ನೀಡಲು ಮೂವರು ನಿರಾಕರಿಸಿದ್ದು, ಯಾವುದೇ ಪ್ರಕರಣ ದಾಖಲಾಗಿಲ್ಲ. ಯುವಕರು ಹಾಗೂ ಯುವತಿಯ ಮೇಲೆ ದಾಳಿ ನಡೆದಿದ್ದರೆ, ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳುತ್ತಿದ್ದರು. ಆದರೆ ಮೂವರ ಮೇಲೆ ಹಲ್ಲೆ ನಡೆದಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.