ADVERTISEMENT

₹1.49 ಕೋಟಿ ಮೌಲ್ಯದ ವಸ್ತು ಹಸ್ತಾಂತರ

ಸ್ವತ್ತು ಮರಳಿಸುವ ಕವಾಯತಿನಲ್ಲಿ ವಿಕಾಸ್‌ಕುಮಾರ್‌

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2020, 3:16 IST
Last Updated 4 ಅಕ್ಟೋಬರ್ 2020, 3:16 IST
ಮಂಗಳೂರು ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಶನಿವಾರ ನಡೆದ ಪ್ರಾಪರ್ಟಿ ಪರೇಡ್‌ನಲ್ಲಿ ₹50 ಲಕ್ಷ ನಗದನ್ನು ನಗರ ಪೊಲೀಸ್ ಕಮಿಷನರ್‌ ವಿಕಾಸ್‌ಕುಮಾರ ವಿಕಾಸ್ ಅವರು ವಾರಸುದಾರರಿಗೆ ಹಸ್ತಾಂತರಿಸಿದರು. ಪ್ರಜಾವಾಣಿ ಚಿತ್ರ
ಮಂಗಳೂರು ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಶನಿವಾರ ನಡೆದ ಪ್ರಾಪರ್ಟಿ ಪರೇಡ್‌ನಲ್ಲಿ ₹50 ಲಕ್ಷ ನಗದನ್ನು ನಗರ ಪೊಲೀಸ್ ಕಮಿಷನರ್‌ ವಿಕಾಸ್‌ಕುಮಾರ ವಿಕಾಸ್ ಅವರು ವಾರಸುದಾರರಿಗೆ ಹಸ್ತಾಂತರಿಸಿದರು. ಪ್ರಜಾವಾಣಿ ಚಿತ್ರ   

ಮಂಗಳೂರು: ನಗರ ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಯಲ್ಲಿ 2019–20 ನೇ ಸಾಲಿನಲ್ಲಿ ಒಟ್ಟು ₹9,05,35,412 ಮೌಲ್ಯದ ವಸ್ತುಗಳು ಕಳುವಾಗಿದ್ದು, ಈ ಪೈಕಿ ₹5,37,86,517 ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ನಗರ ಪೊಲೀಸ್‌ ಕಮಿಷನರ್‌ ವಿಕಾಸ್‌ಕುಮಾರ್ ವಿಕಾಸ್‌ ತಿಳಿಸಿದರು.

ನಗರದ ಪೊಲೀಸ್ ಮೈದಾನದಲ್ಲಿ ಶನಿವಾರ ನಡೆದ ಕಳವಾದ ಸ್ವತ್ತು ಮರಳಿಸುವ ಕವಾಯತಿನಲ್ಲಿ ಅವರು ಮಾತನಾಡಿದ ಅವರು, ಶನಿವಾರ ₹1.49 ಕೋಟಿ ಮೌಲ್ಯದ ವಸ್ತುಗಳನ್ನು ಅವುಗಳ ಮಾಲೀಕರಿಗೆ ಹಸ್ತಾಂತರಿಸಲಾಗಿದೆ. ಇದರಲ್ಲಿ 2.277 ಕೆ.ಜಿ. ಚಿನ್ನ, 25 ದ್ವಿಚಕ್ರ ವಾಹನಗಳು, 19 ಮೊಬೈಲ್, 11 ಇತರ ಆಸ್ತಿಗಳು ಮತ್ತು ₹48,13,951 ನಗದು ಸೇರಿದೆ’ ಎಂದು ತಿಳಿಸಿದರು.

‘ಕೋರ್ಟ್‌ ಅನುಮತಿ ಪಡೆದ ನಂತರ ₹1.49 ಕೋಟಿ ಮೌಲ್ಯದ ಆಸ್ತಿಗಳನ್ನು ಹಿಂದಿರುಗಿಸಿದ್ದು, ಉಳಿದ ಸ್ವತ್ತುಗಳನ್ನು ಕೋರ್ಟ್ ಅನುಮತಿ ಬಂದ ಬಳಿಕ ಹಸ್ತಾಂತರಿಸಲಾಗುವುದು ಎಂದರು.

ADVERTISEMENT

ದಕ್ಷಿಣ ಉಪವಿಭಾಗ ವ್ಯಾಪ್ತಿಯಲ್ಲಿ ₹19.54 ಲಕ್ಷ ಮೌಲ್ಯದ ಸ್ವತ್ತುಗಳು, ಉತ್ತರ ಉಪವಿಭಾಗ ವ್ಯಾಪ್ತಿಯಲ್ಲಿ ಒಟ್ಟು ₹43.08ಲಕ್ಷ ಮೌಲ್ಯದ ವಸ್ತುಗಳನ್ನು ಹಾಜರುಪಡಿಸಲಾಗಿದೆ. ಕೇಂದ್ರ ಉಪವಿಭಾಗ ವ್ಯಾಪ್ತಿಯಲ್ಲಿ ₹1.49 ಕೋಟಿ ಮೌಲ್ಯದ ಸ್ವತ್ತುಗಳು ಹಾಜರುಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.

ಪ್ರಕರಣ ಪತ್ತೆಹಚ್ಚುವಲ್ಲಿ ಯಶಸ್ವಿ ಕಾರ್ಯಾಚರಣೆಗೆ ನಡೆಸಿದ ಡಿಸಿಪಿಗಳಾದ ಅರುಣಾಂಗ್ಷು ಗಿರಿ ವಿನಯ್ ಗಾಂವ್ಕರ್, ಎಸಿಪಿಗಳಾದ ಬೆಳ್ಳಿಯಪ್ಪ, ಜಗದೀಶ್, ರಂಜಿತ್ ಸೇರಿದಂತೆ ನಗರ ಅಪರಾಧ ಪತ್ತೆದಳದ ತಂಡ, ಇನ್‌ಸ್ಪೆಕ್ಟರ್‌, ಸಬ್‌ ಇನ್‌ಸ್ಪೆಕ್ಟರ್‌, ಎಎಸ್‌ಯ ಹಾಗೂ ಸಿಬ್ಬಂದಿಯನ್ನು ಅಭಿನಂದಿಸುವುದಾಗಿ ವಿಕಾಸ್‌ಕುಮಾರ್‌ ಹೇಳಿದರು.

₹50 ಲಕ್ಷ ನಗದು ಹಸ್ತಾಂತರ

ಸುರತ್ಕಲ್ ಪೊಲೀಸ್ ಠಾಣೆ ವ್ಯಾಪ್ತಿಯ ಇಡ್ಯಾ ಗ್ರಾಮದ ಅಪಾರ್ಟ್‌ಮೆಂಟ್‌ನಲ್ಲಿ ಆಗಸ್ಟ್‌ 18ರಂದು ಕಳವಾಗಿದ್ದ ₹50 ಲಕ್ಷ ನಗದು, 200 ಗ್ರಾಂ ಚಿನ್ನಾಭರಣಗಳನ್ನು ವಾರಸುದಾರರಿಗೆ ನೀಡಲಾಯಿತು.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸುರತ್ಕಲ್ ಪೊಲೀಸರು, ನಾಲ್ವರು ಆರೋಪಿಗಳಾದ ರಘು ಸಿ., ಸೆಲ್ಲಪ್ಪನ್, ಅಮೇಶ್ ಅಯ್ಯಪ್ಪನ್, ನವೀನ್ ಪೂಜಾರಿ, ಸಂತೋಷ್ ಪೂಜಾರಿ ಅವರನ್ನು ಬಂಧಿಸಿದ್ದರು. ಎಸಿಪಿ ಬೆಳ್ಳಿಯಪ್ಪ ಮಾರ್ಗದರ್ಶನದಲ್ಲಿ ಇನ್‌ಸ್ಪೆಕ್ಟರ್ ಚಂದ್ರಪ್ಪ ಮತ್ತು ತಂಡ ಕೇವಲ ತಿಂಗಳ ಅವಧಿಯಲ್ಲಿ ಈ ಪ್ರಕರಣ ಭೇದಿಸಿದೆ.

‘ಪೊಲೀಸರು ಮುತುವರ್ಜಿ ವಹಿಸಿ ಕಾರ್ಯಾಚರಣೆ ನಡೆಸಿದ್ದರಿಂದ ಕಳವಾದ ₹50ಲಕ್ಷ ಹಣ ಸಿಕ್ಕಿದೆ. ಇನ್ನೂ ಹಣ ಜಪ್ತಿ ಮಾಡಲು ಬಾಕಿಯಿದೆ. ಕೂಡಲೇ ಆರೋಪಿಗಳಿಂದ ಮುಟ್ಟುಗೋಲು ಹಾಕಿ ನೀಡಲಿ’ ಎಂದು ಮನೆಯ ಸಂತ್ರಸ್ತೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.