ADVERTISEMENT

ವಿಟ್ಲ | ಶಿಕ್ಷಕರ ಕೊರತೆ: ಶಾಲೆಗೆ ಬೀಗ ಹಾಕಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2024, 13:56 IST
Last Updated 17 ಆಗಸ್ಟ್ 2024, 13:56 IST
ಪ್ರತಿಭಟನೆ ನಡೆಯಿತು
ಪ್ರತಿಭಟನೆ ನಡೆಯಿತು   

ವಿಟ್ಲ: ಶಿಕ್ಷಕರ ಕೊರತೆ ಮತ್ತು ಶೈಕ್ಷಣಿಕ ಅವಧಿಯ ಮಧ್ಯಭಾಗದಲ್ಲಿ ಶಿಕ್ಷಕರ ವರ್ಗಾವಣೆ ವಿರೋಧಿಸಿ ಶಾಲಾ ಮಕ್ಕಳು ತರಗತಿ ಬಹಿಷ್ಕಾರಿಸಿ ಪ್ರತಿಭಟನೆ ನಡೆಸಿದ ಘಟನೆ ವಿಟ್ಲ ಪಡ್ನೂರು ಗ್ರಾಮದ ಕೋಡಪದವು ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ವಠಾರದಲ್ಲಿ ಶನಿವಾರ ನಡೆಯಿತು.

ಪೋಷಕರೂ ಶಾಲೆಯ ಗೇಟಿಗೆ ಬೀಗ ಹಾಕಿ, ನಮ್ಮ ಬೇಡಿಕೆ ಈಡೇರುವವರೆಗೂ ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ ಎಂದು ತಾಲ್ಲೂಕು ಶಿಕ್ಷಣಾಧಿಕಾರಿ ಸ್ಥಳಕ್ಕೆ ಬರುವವರೆಗೂ ಸ್ಥಳದಿಂದ ತೆರಳುವುದಿಲ್ಲ ಎಂದು ಪಟ್ಟು ಹಿಡಿದರು.

ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಎಂ.ಎಸ್.ಮಹಮ್ಮದ್ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿ, ಮುಂದಿನ ದಿನಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಮೂಲಕ ಶಿಕ್ಷಕರ ವ್ಯವಸ್ಥೆ ಕಲ್ಪಿಸುವುದಾಗಿ ಭರವಸೆ ನೀಡಿದರು.

ADVERTISEMENT

ಎಸ್‌ಡಿಎಂಸಿ ಸಮನ್ವಯ ವೇದಿಕೆ ಕರ್ನಾಟಕದ ರಾಜ್ಯ ಘಟಕದ ಅಧ್ಯಕ್ಷ ಮೊಯ್ದಿನ್ ಕುಟ್ಟಿ, ಎಸ್‌ಡಿಎಂಸಿ ಅಧ್ಯಕ್ಷ ಉಮ್ಮರ್ ಫಾರೂಕ್ ಟೆಕ್ನಿಕ್ ಮಾಹಿತಿ ನೀಡಿದರು.

ಶಿಕ್ಷಣಾಧಿಕಾರಿ ಮಂಜುನಾಥನ್ ಎಂ.ಜಿ, ಇಸಿಒ ಸುಜಾತಾ, ಸುಧಾ, ಸಿಆರ್‌ಪಿ ಬಿಂಧು ಬಿ.ಜೆ. ಭೇಟಿ ನೀಡಿ ಅವಹಾಲು ಸ್ವೀಕರಿಸಿ, ಸೋಮವಾರ ಇಬ್ಬರು ಅತಿಥಿ ಶಿಕ್ಷಕರನ್ನು ಒದಗಿಸಲಾಗುವುದು. ಸೋಮವಾರದಿಂದ ಎಂದಿನಂತೆ ತರಗತಿ ಆರಂಭಿಸಲಾಗುವುದು ಎಂದು ತಿಳಿಸಿದರು. ಬಳಿಕ ಪ್ರತಿಭಟನೆ ಕೊನೆಗೊಳಿಸಲಾಯಿತು.

ಪ್ರಮುಖರಾದ ಅಬ್ದುಲ್ಲಾ ಕುಕ್ಕಿಲ, ಮಜಿ ರಾಮ್ ಭಟ್, ಜಯಂತ್ ಪೂರ್ಲಿಪ್ಪಾಡಿ, ರವೀಶ್ ಶೆಟ್ಟಿ ಕರ್ಕಳ, ರೇಷ್ಮಾ ಶಂಕರಿ ಬಲಿಪಗುಲಿ, ಪ್ರೇಮ ಮದಕ, ಹರ್ಷದ್ ಕುಕ್ಕಿಲ, ಹಸೈನಾರ್ ತಾಳಿತ್ತನೂಜಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.