
ಪುತ್ತೂರು: ಅಡಿಕೆ ಧಾರಣೆಯಲ್ಲಿ ವ್ಯತ್ಯಾಸವಾದಾಗ ಬೆಳೆಗಾರರ ಹಿತ ಕಾಪಾಡುವಲ್ಲಿ ಮಾಸ್ ಸಂಸ್ಥೆ ಯಶಸ್ವಿಯಾಗಿದೆ. ಎಂ.ಎನ್.ರಾಜೇಂದ್ರ ಕುಮಾರ್ ಅವರ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿರುವ ಸಂಸ್ಥೆಯ 13ನೇ ಶಾಖೆ ಹೊಸಮಠ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಸಹಯೋಗದಲ್ಲಿ ಆರಂಭಗೊಂಡಿದ್ದು, ರೈತರು ಸಂಸ್ಥೆಯ ಬೆಳವಣಿಗೆಗೆ ಕೈಜೋಡಿಸಬೇಕು ಎಂದು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.
ಮಂಗಳೂರು ಕೃಷಿಕರ ಸಹಕಾರಿ ಸಂಘ -ಮಾಸ್ ಸಂಸ್ಥೆಯ ವತಿಯಿಂದ ಕಡಬ ತಾಲ್ಲೂಕಿನ ಹೊಸಮಠ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಹಯೋಗದಲ್ಲಿ ಸಂಘದ ‘ಸಮೃದ್ಧಿ’ ಸಭಾಭವನದಲ್ಲಿ ಆರಂಭಿಸಲಾದ ಮಾಸ್ ಸಂಸ್ಥೆಯ ಅಡಿಕೆ ಖರೀದಿ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಮಾಸ್ ಸಂಸ್ಥೆ ಅಧ್ಯಕ್ಷ ಸಹಕಾರ ಕೆ.ಸೀತಾರಾಮ ರೈ ಸವಣೂರು ಮಾತನಾಡಿ, ಮಾಸ್ ಸಂಸ್ಥೆ ಅಡಿಕೆ ಬೆಳೆಗಾರರಿಗೆ ಉತ್ತಮ ಧಾರಣೆ ನೀಡುವ ಉದ್ದೇಶವಿಟ್ಟುಕೊಂಡು ಮುನ್ನಡೆಯುತ್ತಿದೆ. ಆದರೆ ಕ್ಯಾಂಪ್ಕೊ ಸಂಸ್ಥೆಯ ಜತೆಗೆ ಯಾವುದೇ ಪೈಪೋಟಿಗೆ ಇಳಿದಿಲ್ಲ. ಸಂಸ್ಥೆಯ ಬೆಳವಣಿಗೆಗೆ ಸಹಕಾರ ನೀಡಬೇಕು ಎಂದರು.
ದ.ಕ.ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ಬಾಲ್ಯೊಟ್ಟು, ಸಹಕಾರ ಸಂಘಗಳ ಪುತ್ತೂರು ಉಪ ವಿಭಾಗದ ಸಹಾಯಕ ನಿಬಂಧಕ ರಘು ಎಸ್.ಎಂ. ಮಾತನಾಡಿದರು. ಮಾಸ್ ನಿರ್ದೇಶಕರಾದ ನಿತ್ಯಾನಂದ ಮುಂಡೋಡಿ, ರಾಜರಾಮ್ ಶೆಟ್ಟಿ, ಸುಧಾ ಎಸ್.ರೈ, ಹೊಸಮಠ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಕರುಣಾಕರ ಗೋಗಟೆ, ನಿರ್ದೇಶಕ ಜಯರಾಮ ಶರ್ಮ ಬಲ್ಯ ಭಾಗವಹಿಸಿದ್ದರು.
ಹೊಸಮಠ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೃಷ್ಣಪ್ಪ ದೇವಾಡಿಗ ಸನಿಲ ಸ್ವಾಗತಿಸಿದರು. ಸಂಘದ ಉಪಾಧ್ಯಕ್ಷ ಚಿದಾನಂದ ಕೊಡೆಂಕೇರಿ ವಂದಿಸಿದರು. ನಿರ್ದೇಶಕ ಶಿವಪ್ರಸಾದ್ ಮೈಲೇರಿ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.